ADVERTISEMENT

ನೀರಿನ ಸಮಸ್ಯೆ: ಗ್ರಾಮಸ್ಥರ ಪ್ರತಿಭಟನೆ

ರಾಮಗೊಂಡನಹಳ್ಳಿ:

​ಪ್ರಜಾವಾಣಿ ವಾರ್ತೆ
Published 30 ಮೇ 2023, 4:46 IST
Last Updated 30 ಮೇ 2023, 4:46 IST
ರಾಮಗೊಂಡನಹಳ್ಳಿ ಗ್ರಾಮದ ನಿವಾಸಿಗಳು ವೈಟ್‌ ಫೀಲ್ಡ್ ಬಿಬಿಎಂಪಿ ಕಚೇರಿಗೆ ಮುತ್ತಿಗೆ ಹಾಕಿ ಬೀಗ ಜಡಿದು ಪ್ರತಿಭಟಿಸಿದರು.
ರಾಮಗೊಂಡನಹಳ್ಳಿ ಗ್ರಾಮದ ನಿವಾಸಿಗಳು ವೈಟ್‌ ಫೀಲ್ಡ್ ಬಿಬಿಎಂಪಿ ಕಚೇರಿಗೆ ಮುತ್ತಿಗೆ ಹಾಕಿ ಬೀಗ ಜಡಿದು ಪ್ರತಿಭಟಿಸಿದರು.   

ಕೆ.ಆರ್.ಪುರ: ಬಿಬಿಎಂಪಿ ಅಧಿಕಾರಿಗಳು ಹಾಗೂ ನೀರಗಂಟಿಯ ಆಂತರಿಕ ಬಿಕ್ಕಟ್ಟಿನಿಂದ ಕೆಲವು ದಿನಗಳಿಂದ ಸರಿಯಾದ ವೇಳೆಗೆ ನೀರು ಪೂರೈಕೆ ಮಾಡುತ್ತಿಲ್ಲ ಎಂದು ಆಗ್ರಹಿಸಿ ರಾಮಗೊಂಡನಹಳ್ಳಿ ಗ್ರಾಮದ ನಿವಾಸಿಗಳು ವೈಟ್‌ಫೀಲ್ಡ್ ಬಿಬಿಎಂಪಿ ಕಚೇರಿಗೆ ಮುತ್ತಿಗೆ ಹಾಕಿ ಪ್ರತಿಭಟಿಸಿದರು.

ಸ‌ಮರ್ಪಕವಾಗಿ ನೀರು ಸರಬರಾಜು ಮಾಡದಿರುವ ಬಗ್ಗೆ ಹಲವಾರು ಬಾರಿ ಬಿಬಿಎಂಪಿ ವಾರ್ಡ್ ಎಂಜಿನಿಯರ್‌ಗಳಿಗೆ ದೂರು ನೀಡಿದ್ದರೂ ಯಾವುದೇ ರೀತಿಯ ಕ್ರಮ ಕೈಗೊಳ್ಳದೆ ನಿರ್ಲಕ್ಷ್ಯ ವಹಿಸುತ್ತಿದ್ದಾರೆ ಎಂದು ಗ್ರಾಮಸ್ಥರು ದೂರಿದರು.

ಕೊಳವೆ ಬಾವಿಗಳ ಯಂತ್ರೋಪಕರಣಗಳು ಕೆಟ್ಟುಹೋಗಿ ಆರು ತಿಂಗಳಾದರೂ ಸರಿಪಡಿಸುವ ಗೋಜಿಗೆ ಹೋಗುವುದಿಲ್ಲ. ಹೊಸ ಕೊಳವೆ ಬಾವಿಗಳಿಗೆ ಮೋಟಾರ್ ಅಳವಡಿಸಿಲ್ಲ. ಇದರಿಂದ ನೀರಿನ ಸಮಸ್ಯೆ ಬಿಗಡಾಯಿಸಿದೆ. ಅಲ್ಲದೇ ವಾಟರ್‌ ಮ್ಯಾನ್‌ಗೆ ಮೂರು ನಾಲ್ಕು ತಿಂಗಳಿಗೊಮ್ಮೆ ಸಂಬಳ ನೀಡುತ್ತಿರುವುದರಿಂದ ವಾಟರ್ ಮ್ಯಾನ್ ಸಹ ಸರಿಯಾಗಿ ಕಾರ್ಯನಿರ್ವಹಿಸುತ್ತಿಲ್ಲ. ಹಾಗಾಗಿ ನೀರಿಗಾಗಿ ಹಾಹಾಕಾರ ಉಂಟಾಗಿದೆ ಎಂದು ಆರೋಪಿಸಿದರು.

110 ಹಳ್ಳಿಗಳ ಯೋಜನೆ ಅಡಿಯಲ್ಲಿ ರಾಮಗೊಂಡನಹಳ್ಳಿಯಲ್ಲಿ ಕಾವೇರಿ ಪೈಪ್‌ಲೈನ್ ಅಳವಡಿಸಲಾಗಿದೆ. ಆದರೆ, ಇಲ್ಲಿಯವರೆಗೂ ಕಾವೇರಿ ನೀರಿನ ಸಂಪರ್ಕ ಕಲ್ಪಿಸಿಲ್ಲ. ಬಿಬಿಎಂಪಿ ಅಧಿಕಾರಿಗಳು ಹಾಗೂ ವಾಟರ್ ಮ್ಯಾನ್ ನಡುವಿನ ಅಂತರಿಕ ಬಿಕ್ಕಟ್ಟಿನಿಂದ
ರಾಮಗೊಂಡನಹಳ್ಳಿ ನಿವಾಸಿಗಳು ನೀರಿಗಾಗಿ ಪರದಾಡುವ ಸ್ಥಿತಿ ಎದುರಾಗಿದೆ ಎಂದು ದೂರಿದರು.

ADVERTISEMENT

ವಿಷಯ ತಿಳಿದು ವೈಟ್ ಫೀಲ್ಡ್ ಬಿಬಿಎಂಪಿ ಕಚೇರಿ ಬಳಿಗೆ ಬಂದ ಎಇಇ ಯದುಕೃಷ್ಣ ಪ್ರತಿಭಟನಕಾರರಿಗೆ ನೀರಿನ ಸಮಸ್ಯೆಯನ್ನು ಪರಿಹರಿಸಲಾಗುವುದು ಎಂದು ಭರವಸೆ ನೀಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.