ADVERTISEMENT

ಪೀಣ್ಯ ದಾಸರಹಳ್ಳಿ: ನೀರಿನ ಸಮಸ್ಯೆ ತೀವ್ರ- ಟ್ಯಾಂಕರ್‌ ಮೊರೆ

​ಪ್ರಜಾವಾಣಿ ವಾರ್ತೆ
Published 21 ಫೆಬ್ರುವರಿ 2024, 20:28 IST
Last Updated 21 ಫೆಬ್ರುವರಿ 2024, 20:28 IST
ಟ್ಯಾಂಕರ್ ನೀರು ಅವಲಂಬಿಸಿರುವ ಸ್ಥಳೀಯರು
ಟ್ಯಾಂಕರ್ ನೀರು ಅವಲಂಬಿಸಿರುವ ಸ್ಥಳೀಯರು   

ಪೀಣ್ಯ ದಾಸರಹಳ್ಳಿಯನ್ನು ಹೀಗೆ ಪರಿವರ್ತಿಸಬಹುದು: ದಾಸರಹಳ್ಳಿ ಪೀಣ್ಯ.ದಾಸರಹಳ್ಳಿ ವಿಧಾನಸಭೆ ಕ್ಷೇತ್ರದ ವ್ಯಾಪ್ತಿಯಲ್ಲಿ ಕುಡಿಯುವ ನೀರಿನ ಸಮಸ್ಯೆ ತೀವ್ರಗೊಂಡಿದ್ದು, ಜನರು ಕುಡಿಯುವ ನೀರಿಗೆ ಟ್ಯಾಂಕರ್ ಮೊರೆ ಹೋಗಿದ್ದಾರೆ.

ಕಳೆದ ವರ್ಷ ಮುಂಗಾರು ಅವಧಿಯಲ್ಲಿ ಮಳೆ ಕೈಕೊಟ್ಟ ಪರಿಣಾಮ, ಕಳೆದ ಐದು ತಿಂಗಳಿಂದಲೂ ವಿವಿಧ ಬಡಾವಣೆಗಳಲ್ಲಿ ನೀರಿನ ಸಮಸ್ಯೆ ಕಾಡುತ್ತಿದೆ.

ಜಲಮಂಡಳಿಯಿಂದ ವಾರದಲ್ಲಿ ಎರಡು ಬಾರಿ ಕಾವೇರಿ ನೀರು ಪೂರೈಕೆ ಆಗುತ್ತಿತ್ತು. ಆದರೆ, ಈಗ ಒಂದುವಾರ ಕಳೆದರೂ ನೀರು ಬರುತ್ತಿಲ್ಲ. ಎಂಜಿನಿಯರ್‌ಗಳು ನಮ್ಮ ಸಮಸ್ಯೆಯನ್ನೂ ಆಲಿಸುತ್ತಿಲ್ಲ ಎಂದು ಜನರು ಅಳಲು ತೋಡಿಕೊಂಡಿದ್ದಾರೆ.

ADVERTISEMENT

ಗಣಪತಿ ನಗರ, ಗೆಳೆಯರ ಬಳಗ, ಕಿರ್ಲೋಸ್ಕರ್ ಬಡಾವಣೆ, ಮಂಜುನಾಥ ನಗರ, ಶೆಟ್ಟಿಹಳ್ಳಿ, ಮಲ್ಲಸಂದ್ರ ಚೊಕ್ಕಸಂದ್ರ ಹೆಗ್ಗನಹಳ್ಳಿ, ರಾಜಗೋಪಾಲನಗರ, ಪೀಣ್ಯ ಕೈಗಾರಿಕಾ ಪ್ರದೇಶ ಸೇರಿದಂತೆ ಹಲವು ಕಡೆ ನೀರಿನ ಸಮಸ್ಯೆಯಿದೆ.

ಕೊಳವೆಬಾವಿಯಲ್ಲಿ ಬತ್ತಿದ ನೀರು: ಕ್ಷೇತ್ರದ ಕೆಲವು ಭಾಗಗಳಲ್ಲಿ ಕೊಳವೆಬಾವಿಗಳಲ್ಲಿ ಅಂತರ್ಜಲಮಟ್ಟ ಕುಸಿದಿದ್ದು ಸಾಕಷ್ಟು ಕೊಳವೆಬಾವಿಗಳು ಬತ್ತಿವೆ. ಇನ್ನು ಕೆಲವೇ ಕೆಲವು ಕೊಳವೆ ಬಾವಿಗಳು ಕಾರ್ಯ ನಿರ್ವಹಿಸುತ್ತಿದ್ದು ಅದರ ಮೂಲಕ ನೀರನ್ನು ಒದಗಿಸಲಾಗುತ್ತಿದೆ. ಸಾಕಷ್ಟು ಬಡಾವಣೆಗಳಲ್ಲಿ ಟ್ಯಾಂಕರ್‌ ನೀರನ್ನು ಜನರು ಅವಲಂಬಿಸಿದ್ದಾರೆ. ಈ ಭಾಗದ ಹೋಟೆಲ್ ಮಾಲೀಕರು, ಟ್ಯಾಂಕರ್‌ನಲ್ಲಿ ನೀರು ತರಿಸಿಕೊಳ್ಳುತ್ತಿದ್ದಾರೆ.

‘ನಮ್ಮ ಕ್ಷೇತ್ರದ ಅನೇಕ ಕಡೆ ನೀರಿನ ಅಭಾವವಿದೆ. ಕೊಳವೆಬಾವಿಗಳು ಬತ್ತಿವೆ. ಇಲ್ಲಿ ಬಡವರು ಕೆಲಸ ಮಾಡಿಕೊಂಡು ಜೀವನ ಮಾಡುತ್ತಿದ್ದಾರೆ. ಈಗಾಗಲೇ ಕೆಲವು ಕಡೆ ಕೊಳವೆಬಾವಿ ಕೊರೆಸಿ ನೀರು ಪೂರೈಸಿದ್ದೇವೆ. ಜುಲೈ ಒಳಗೆ ಕಾವೇರಿ ನೀರು ಬರುತ್ತದೆ. ಅಲ್ಲಿಯವರೆಗೂ ನೀರನ್ನು ಮಿತವಾಗಿ ಬಳಸಬೇಕು. ಕ್ಷೇತ್ರದ 110 ಹಳ್ಳಿಗಳಿಗೆ ಸೇರುವ ಗ್ರಾಮಗಳಿಗೆ ನೂತನವಾಗಿ 25 ಕೊಳವೆಬಾವಿ ಕೊರೆಸಲಾಗುತ್ತಿದೆ’ ಎಂದು ಶಾಸಕ ಎಸ್. ಮುನಿರಾಜು ಹೇಳಿದರು.

ಚೊಕ್ಕಸಂದ್ರದಲ್ಲಿ ಕೊಳವೆ ಬಾವಿ ಮೂಲಕ ನೀರು ಪೂರೈಕೆ.
ಸಂಪೂರ್ಣ
ಕಿರಣ್

ರಸ್ತೆ ಅಗೆದು ಕಾವೇರಿ ನೀರಿನ ಪೈಪ್ ಅಳವಡಿಸಿದ್ದಾರೆ. ಆದರೆ ನೀರೇ ಬರುತ್ತಿಲ್ಲ. ಸುತ್ತಮುತ್ತಲ ಪ್ರದೇಶದ ಜನರು ಟ್ಯಾಂಕರ್ ಮೂಲಕ ನೀರು ಪಡೆಯುತ್ತಿದ್ದೇವೆ. ನೀರನ್ನು ಡ್ರಮ್ ಹಾಗೂ ಬಿಂದಿಗೆಗಳಲ್ಲಿ ತುಂಬಿಸಿಕೊಂಡರೂ ನೀರು ಸಾಲುವುದಿಲ್ಲ.

– ಕಿರಣ್ ಚಿಕ್ಕಸಂದ್ರ

ನಮಗೆ ಕಾವೇರಿ ನೀರು ಬರುತ್ತಿಲ್ಲ. ವಾರಕ್ಕೊಮ್ಮೆ ಕೊಳವೆಬಾವಿ ನೀರು ಬಿಡುತ್ತಾರೆ. ಅದು ಸರಿಯಾಗಿ ಬರುವುದಿಲ್ಲ.

–ಸಂಪೂರ್ಣ ಮಲ್ಲಸಂದ್ರ ನಿವಾಸಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.