ಬೆಂಗಳೂರು: ವಿಶ್ವ ನೃತ್ಯ ದಿನಾಚರಣೆ ಪ್ರಯುಕ್ತ ಸೃಷ್ಟಿ ಅಭಿನಯ ಕಲಾವಿದರ ಕೇಂದ್ರ ನೀಡುವ ‘ಸೃಷ್ಟಿ ರಾಷ್ಟ್ರೀಯ ನೃತ್ಯ ಪರಿಣತಿ ಪ್ರಶಸ್ತಿ’ಗೆ ಕಲಾವಿದೆ ಲಕ್ಷ್ಮಿ ಗೋಪಾಲಸ್ವಾಮಿ ಆಯ್ಕೆಯಾಗಿದ್ದಾರೆ.
ಮೇ 1 ಮತ್ತು ಮೇ 2ರಂದು ಸಂಸ್ಥೆಯು ರವೀಂದ್ರ ಕಲಾಕ್ಷೇತ್ರದಲ್ಲಿ ನೃತ್ಯ ದಿನಾಚರಣೆ ಕಾರ್ಯಕ್ರಮ ಹಮ್ಮಿಕೊಂಡಿದೆ. ಈ ಕಾರ್ಯಕ್ರಮದಲ್ಲಿ ಮೈಸೂರು ರಾಜವಂಶಸ್ಥೆ ಪ್ರಮೋದಾದೇವಿ ಒಡೆಯರ್ ಅವರು ಪ್ರಶಸ್ತಿ ಪ್ರದಾನ ಮಾಡುತ್ತಾರೆ. ಭರತನಾಟ್ಯ, ಕೂಚುಪುಡಿ, ಒಡಿಸ್ಸಿ, ಕಥಕ್ ಸೇರಿ ವಿವಿಧ ನೃತ್ಯ ಪ್ರಕಾರದಲ್ಲಿ ನೂರು ಕಲಾವಿದರನ್ನು ಒಳಗೊಂಡ 25 ತಂಡಗಳು ಪ್ರದರ್ಶನ ನೀಡಲಿವೆ.
ಮೇ 1ರಂದು ಮಧ್ಯಾಹ್ನ 3 ಗಂಟೆಯಿಂದ ನೃತ್ಯ ಕಾರ್ಯಕ್ರಮಗಳು ನಡೆಯಲಿವೆ. ನಿತ್ಯ, ರಶ್ಮಿ ವಿಜಯ್, ಶ್ರೀದೇವಿ, ರಶ್ಮಿ ಅಗರ್ವಾಲ್, ಸೌಮ್ಯ ರಂಗಸ್ವಾಮಿ, ಅನುಪಮಾ ಭೂಷಣ ಮೊದಲಾದ ಕಲಾವಿದರು ನೃತ್ಯ ಪ್ರದರ್ಶನ ನೀಡಲಿದ್ದಾರೆ. ಎ.ವಿ. ಸತ್ಯನಾರಾಯಣ ಅವರು ನಾಟ್ಯ ಸಂಯೋಜನೆ ಮಾಡಿರುವ ‘ಭಜ ಗೋವಿಂದಂ’ ನೃತ್ಯ ನಾಟಕ ಪ್ರದರ್ಶನವನ್ನೂ ಹಮ್ಮಿಕೊಳ್ಳಲಾಗಿದೆ. ಮೇ 2ರಂದು ಸಂಜೆ 6 ಗಂಟೆಯಿಂದ ಕಾರ್ಯಕ್ರಮಗಳು ನಡೆಯಲಿವೆ ಎಂದು ಪ್ರಕಟಣೆ ತಿಳಿಸಿದೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.