ADVERTISEMENT

ವಿಶ್ವ ಮಧುಮೇಹ ದಿನಾಚರಣೆ

​ಪ್ರಜಾವಾಣಿ ವಾರ್ತೆ
Published 14 ನವೆಂಬರ್ 2018, 19:32 IST
Last Updated 14 ನವೆಂಬರ್ 2018, 19:32 IST
 ಮಧುಮೇಹ ಕಾಯಿಲೆ ಕುರಿತು ಡಾ. ಎಲ್.ಶ್ರೀನಿವಾಸಮೂರ್ತಿ ಉಪನ್ಯಾಸ ನೀಡಿದರು
 ಮಧುಮೇಹ ಕಾಯಿಲೆ ಕುರಿತು ಡಾ. ಎಲ್.ಶ್ರೀನಿವಾಸಮೂರ್ತಿ ಉಪನ್ಯಾಸ ನೀಡಿದರು   

ಬೆಂಗಳೂರು: ವಿಶ್ವ ಮಧುಮೇಹ ದಿನಾಚರಣೆ ಅಂಗವಾಗಿ ಯಲಹಂಕ ಸಮೀಪದ ಸಹಕಾರ ನಗರದಲ್ಲಿ ಲೈಫ್‌ಕೇರ್‌ ಆಸ್ಪತ್ರೆ ಮತ್ತು ಸಂಶೋಧನಾ ಸಂಸ್ಥೆಯ ಆಶ್ರಯದಲ್ಲಿ ಮಧುಮೇಹ, ರಕ್ತದೊತ್ತಡ ಹಾಗೂ ಕೊಲೆಸ್ಟ್ರಾಲ್‌ಗೆ ಸಂಬಂಧಿಸಿದಂತೆ ಉಚಿತ ತಪಾಸಣಾ ಶಿಬಿರ ನಡೆಯಿತು.

ಈ ವರ್ಷದ ‘ಕುಟುಂಬ ಮತ್ತು ಮಧುಮೇಹ’ ಘೋಷವಾಕ್ಯದ ಅಡಿಯಲ್ಲಿ, ಮಧುಮೇಹ ಕಾಯಿಲೆ ಇರುವವರಿಗೆ ಕುಟುಂಬ ಸದಸ್ಯರ ಸಹಕಾರದ ಪ್ರಾಮುಖ್ಯತೆ ಹಾಗೂ ಕುಟುಂಬ ಸದಸ್ಯರಿಗೆ ಈ ಕಾಯಿಲೆ ಬರದಂತೆ ಹೇಗೆ ಮುಂಜಾಗ್ರತಾ ಕ್ರಮಗಳನ್ನು ಅನುಸರಿಸಬೇಕು ಎಂಬ ಬಗ್ಗೆ ಜಾಗೃತಿ ಮೂಡಿಸಲಾಯಿತು.

ಈ ವೇಳೆ ಮಾತನಾಡಿದ ಮಧುಮೇಹ ತಜ್ಞ ಡಾ. ಎಲ್.ಶ್ರೀನಿವಾಸಮೂರ್ತಿ,‘ಆರೋಗ್ಯ ರಕ್ಷಣೆಗಾಗಿ ವಿಶ್ವದಾದ್ಯಂತ ಖರ್ಚು ಮಾಡುತ್ತಿರುವ ಹಣದಲ್ಲಿ ಒಂದು ಪಾಲನ್ನು ಮಧುಮೇಹ ಕಾಯಿಲೆ ನಿರ್ವಹಣೆಗಾಗಿಯೇ ವ್ಯಯಿಸಲಾಗುತ್ತಿದೆ. ಈ ಅಂಶವನ್ನು ಗಮನಿಸಿದಾಗ, ಈ ಕಾಯಿಲೆಯು ಎಷ್ಟರಮಟ್ಟಿಗೆ ವ್ಯಾಪಿಸಿದೆ ಎಂಬುದನ್ನು ಸೂಚಿಸುತ್ತದೆ. ಜಾಗತಿಕ ಅಭಿವೃದ್ಧಿಗೂ ತೊಡಕಾಗಲು ಕಾರಣವಾಗಿರುವ ಈ ರೋಗವನ್ನು ನಿಯಂತ್ರಿಸಲು ಹಾಗೂ ನಿರ್ವಹಣೆ ಮಾಡಲು ಜನಸಾಮಾನ್ಯರಲ್ಲಿ ಹೆಚ್ಚಿನ ಜಾಗೃತಿ ಮೂಡಿಸಬೇಕಾದ ಅಗತ್ಯವಿದೆ’ ಎಂದರು.

ADVERTISEMENT

ಜೀವನಶೈಲಿ ಬದಲಿಸಿಕೊಂಡು, ನಿಯಮಿತ ಆಹಾರಪದ್ಧತಿ ಹಾಗೂ ವ್ಯಾಯಾಮದಂತಹ ದೈಹಿಕ ಚಟುವಟಿಕೆಗಳನ್ನು ಶಿಸ್ತಾಗಿ ಪಾಲಿಸುವ ಮೂಲಕ ದೇಹದಲ್ಲಿನ ಸಕ್ಕರೆ ಅಂಶದ ಪ್ರಮಾಣ, ರಕ್ತದೊತ್ತಡ ಹಾಗೂ ಕೊಲೆಸ್ಟ್ರಾಲ್ ಅಂಶಗಳನ್ನು ನಿಯಂತ್ರಣದಲ್ಲಿ ಇಟ್ಟುಕೊಂಡರೆ ಉತ್ತಮ ಆರೋಗ್ಯ ಕಾಪಾಡಿಕೊಳ್ಳಬಹುದು ಎಂದು ಸಲಹೆ ನೀಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.