ADVERTISEMENT

ಸ್ಮಾರ್ಟ್‌ ಸರ್ಕಾರಿ ಶಾಲೆ ಕಟ್ಟಡ

ನಿರ್ಮಾಣಕ್ಕೆ ಉದ್ಯಮಿಯಿಂದ ₹3.10 ಕೋಟಿ ದೇಣಿಗೆ

​ಪ್ರಜಾವಾಣಿ ವಾರ್ತೆ
Published 27 ಜುಲೈ 2019, 19:50 IST
Last Updated 27 ಜುಲೈ 2019, 19:50 IST
ನವರತ್ನ ಅಗ್ರಹಾರ ಗ್ರಾಮದಲ್ಲಿ ಶನಿವಾರ ಉದ್ಘಾಟನೆಗೊಂಡ ನೂತನ ಸರ್ಕಾರಿ ಶಾಲಾ ಕಟ್ಟಡದ ಹೊರನೋಟ
ನವರತ್ನ ಅಗ್ರಹಾರ ಗ್ರಾಮದಲ್ಲಿ ಶನಿವಾರ ಉದ್ಘಾಟನೆಗೊಂಡ ನೂತನ ಸರ್ಕಾರಿ ಶಾಲಾ ಕಟ್ಟಡದ ಹೊರನೋಟ   

ಯಲಹಂಕ: ದೊಡ್ಡಜಾಲ ಗ್ರಾಮಪಂಚಾಯ್ತಿ ವ್ಯಾಪ್ತಿಯ ನವರತ್ನ ಅಗ್ರಹಾರ ಗ್ರಾಮದಲ್ಲಿ ಉದ್ಯಮಿ ರೊನಾಲ್ಡ್ ಕೊಲಾಸೊ ನೀಡಿದ ದೇಣಿಗೆಯಿಂದ ನೂತನವಾಗಿ ನಿರ್ಮಿಸಿರುವ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲಾ ಕಟ್ಟಡವನ್ನು ಶನಿವಾರ ಉದ್ಘಾಟಿಸಲಾಯಿತು.

ಒಟ್ಟು 12 ಸಾವಿರ ಚದರಡಿ ವಿಸ್ತೀರ್ಣದಲ್ಲಿ ₹3.10 ಕೋಟಿ ವೆಚ್ಚದಲ್ಲಿ ನಿರ್ಮಿಸಿರುವ ಈ ಶಾಲೆಯ ಕಟ್ಟಡ ಸಂಪೂರ್ಣ ಎಲ್ಲ ರೀತಿಯ ಮೂಲಸೌಕರ್ಯಗಳನ್ನು ಒಳಗೊಂಡು ಸುಸಜ್ಜಿತವಾಗಿದೆ.11 ತರಗತಿ ಕೊಠಡಿಗಳು, ಕಂಪ್ಯೂಟರ್ ಕೊಠಡಿ, ಸ್ಮಾರ್ಟ್‌ ತರಗತಿ ಕೊಠಡಿ, ಮುಖ್ಯಶಿಕ್ಷಕರ, ಶಿಕ್ಷಕರ ಮತ್ತು ಭದ್ರತಾ ಸಿಬ್ಬಂದಿ ಕೊಠಡಿ, ಸಭಾಂಗಣ, ಕ್ರೀಡಾ ವಿಭಾಗ, ದಾಖಲೆಗಳ ಕೊಠಡಿ, ಶಿಕ್ಷಕರು ಮತ್ತು ವಿದ್ಯಾರ್ಥಿಗಳಿಗೆಪ್ರತ್ಯೇಕ ಶೌಚಾಲಯ ಸೌಲಭ್ಯಗಳನ್ನು ಕಲ್ಪಿಸಲಾಗಿದೆ.

ಮಧ್ಯಾಹ್ನದ ಬಿಸಿಯೂಟಕ್ಕಾಗಿ ಪ್ರತ್ಯೇಕ ಕೊಠಡಿ ವ್ಯವಸ್ಥೆ ಕಲ್ಪಿಸಲಾಗಿದೆ. ಮುಖ್ಯಶಿಕ್ಷಕರ ಕೊಠಡಿಯಿಂದ ಪ್ರತಿ ಕೊಠಡಿಗೆ ಧ್ವನಿವರ್ಧಕದ ಮೂಲಕ ಸಂದೇಶ ರವಾನಿಸುವ ವ್ಯವಸ್ಥೆ, 31 ಸಿಸಿಟಿವಿ ಕ್ಯಾಮೆರಾಗಳು ಸೇರಿದಂತೆ ಪಾಠೋಪಕರಣ ಹಾಗೂ ಪೀಠೋಪಕರಣಗಳ ಸೌಕರ್ಯಗಳನ್ನು ಒದಗಿಸಲಾಗಿದೆ.

ADVERTISEMENT

ಕೇಂದ್ರ ಸಚಿವ ಡಿ.ವಿ.ಸದಾನಂದಗೌಡ, ’ಸಮಾಜದಿಂದ ಪಡೆದಿದ್ದನ್ನು ಸಮಾಜಕ್ಕೆ ಸಮರ್ಪಣೆ ಮಾಡುವ ಉದಾರ ಮನೋಭಾವ ಇತ್ತೀಚಿನ ದಿನಗಳಲ್ಲಿ ಕಡಿಮೆಯಾಗಿದೆ ಎಂಬುದು ವಿಷಾದದ ಸಂಗತಿ’ ಎಂದರು.

ಶಾಸಕ ಕೃಷ್ಣ ಬೈರೇಗೌಡ, ‘ಖಾಸಗಿ ಶಾಲೆಗಳ ರೀತಿಯಲ್ಲಿ ಬಡಮಕ್ಕಳಿಗೂ ಎಲ್ಲ ರೀತಿಯ ಸೌಕರ್ಯಗಳು ಸಿಗಬೇಕೆಂಬ ಉದ್ದೇಶದಿಂದ ಖಾಸಗಿ ಶಾಲೆಗಳಿಗಿಂತ ಹೆಚ್ಚಿನ ಗುಣಮಟ್ಟದ ಸೌಲಭ್ಯಗಳನ್ನು ಕಲ್ಪಿಸುವ ಮೂಲಕ ಅಂತರರಾಷ್ಟ್ರೀಯ ಮಟ್ಟದಲ್ಲಿ ಸುಸಜ್ಜಿತ ಕಟ್ಟಡವನ್ನು ನಿರ್ಮಿಸಿಕೊಟ್ಟಿರುವರೊನಾಲ್ಡ್ ಕೊಲಾಸೊ ಅವರ ಶ್ರದ್ಧೆಯು ಹಣಕ್ಕಿಂತ ಹೆಚ್ಚು ಮುಖ್ಯವಾಗಿದೆ’ ಎಂದು ಪ್ರಶಂಸಿಸಿದರು.

ಶಿಕ್ಷಣ ತಜ್ಞ ಪ್ರೊ.ಕೆ.ಇ.ರಾಧಾಕೃಷ್ಣ, ವಿಧಾನಪರಿಷತ್ ಸದಸ್ಯ ಎಂ.ನಾರಾಯಣಸ್ವಾಮಿ, ಯಲಹಂಕ ತಾಲ್ಲೂಕು ತಹಶೀಲ್ದಾರ್ ಎಂ. ಶ್ರೀನಿವಾಸಯ್ಯ, ಶಿಕ್ಷಣ ಇಲಾಖೆಯ ಬೆಂಗಳೂರು ಉತ್ತರ ಜಿಲ್ಲಾ ಉಪನಿರ್ದೇಶಕ ಸಿ.ಬಿ. ಜಯರಂಗ, ಜಿ.ಪಂ ಸದಸ್ಯ ಎಂ.ವೆಂಕಟೇಶ್, ಗ್ರಾ.ಪಂ ಅಧ್ಯಕ್ಷ ಎನ್.ಕೆ.ಮಹೇಶ್‌ ಕುಮಾರ್‌ ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.