ADVERTISEMENT

ಅರ್ಹತಾ ಪತ್ರ ಪಡೆಯಲು ಕಸರತ್ತು: ಆಕಾಂಕ್ಷಿಗಳ ಬವಣೆ

ಉ.ಮ.ಮಹೇಶ್
Published 15 ಮಾರ್ಚ್ 2014, 6:04 IST
Last Updated 15 ಮಾರ್ಚ್ 2014, 6:04 IST

ಬೀದರ್: ಪಶುವೈದ್ಯಕೀಯ ವಿಶ್ವ­ವಿದ್ಯಾಲಯ, ತೋಟಗಾರಿಕೆ ವಿಶ್ವವಿದ್ಯಾಲಯ ಸೇರಿ ವಿವಿಧ ಸಂಸ್ಥೆಗಳು ಉದ್ಯೋಗ ನೇಮಕಕ್ಕಾಗಿ ಅರ್ಜಿ ಆಹ್ವಾನಿಸಿದ್ದು, ಅರ್ಜಿ ಸಲ್ಲಿಸಲು ಕಡೇ ದಿನ ಹತ್ತಿರವಾಗುತ್ತಿದ್ದಂತೆ ಆಕಾಂಕ್ಷಿ­ಗಳಿಗೆ, 371(ಜೆ) ಅನುಸಾರ ಮೀಸಲಾತಿ ಕೋರಲು ಅರ್ಹತಾ ಪತ್ರ ಪಡೆ­ಯುವುದು ದೊಡ್ಡ ಕಸರತ್ತಾಗುತ್ತಿದೆ.

ಅರ್ಹತಾ ಪತ್ರ ಪಡೆಯಲು ಅರ್ಜಿಯೊಂದಿಗೆ ಸಲ್ಲಿಸಬೇಕಾದ ದೃಢೀಕೃತ ಪತ್ರಗಳನ್ನು ಪಡೆಯುವುದು ಒಂದು ಕೆಲಸವಾದರೆ, ಲೋಕಸಭೆ ಚುನಾವಣೆ ಸಂಬಂಧಿಸಿದ ಕೆಲಸದ ಹಿನ್ನೆಲೆಯಲ್ಲಿ ಇಂಥ ಅರ್ಜಿಗಳನ್ನು ಸಕಾಲದಲ್ಲಿ ಇತ್ಯರ್ಥ ಪಡಿಸದೇ ವಿಳಂಬ ಮಾಡಲಾಗುತ್ತಿದೆ ಎಂಬುದು ಅಭ್ಯರ್ಥಿ­ಗಳ ಈ ಕಸರತ್ತಿಗೆ ಕಾರಣವಾಗಿದೆ.

ಸಂವಿಧಾನದ ಕಲಂ 371(ಜೆ) ತಿದ್ದುಪಡಿ ಅನುಸಾರ ಉದ್ಯೋಗದಲ್ಲಿ ಮೀಸಲಾತಿ ಕೋರಲು ಅರ್ಜಿ ಸಲ್ಲಿಸಲು ತಹಶೀಲ್ದಾರ್‌ ಕಚೇರಿ, ನಾಡ ಕಚೇರಿಗಳ ಬಳಿ ಆಕಾಂಕ್ಷಿಗಳು, ಆಕಾಂಕ್ಷಿಗಳ ದೊಡ್ಡ ಸಾಲು ಸಾಮಾನ್ಯ ದೃಶ್ಯವಾಗಿದೆ.

ಅರ್ಜಿ ಸಲ್ಲಿಸಲು ನಗರದ ತಹಶೀಲ್ದಾರ್‌ ಕಚೇರಿಗೆ ಆಗಮಿಸಿದ್ದ ಅರ್ಜಿದಾರರೊಬ್ಬರು, ‘ಅರ್ಜಿ ಸಲ್ಲಿಸಲು ಕಡೆಯ ದಿನಾಂಕ ಸಮೀಪಿಸುತ್ತಿದೆ. ಇವರು ಅರ್ಹತಾ ಪತ್ರ ನೀಡುತ್ತಿಲ್ಲ. ಕೇಳಿದರೆ ಎಲೆಕ್ಷನ್‌ ಇದೆ. ನಂತರ ನೋಡೋಣ ಎಂದು ಉತ್ತರಿಸುತ್ತಾರೆ. ನಾವು ಏನು ಮಾಡಬೇಕು’ ಎಂದು ಅಳಲು ತೋಡಿಕೊಂಡರು.

ಲಭ್ಯ ಮಾಹಿತಿ ಪ್ರಕಾರ, ಪಶು ವೈದ್ಯಕೀಯ ವಿಶ್ವವಿದ್ಯಾಲಯ, ರಾಯಚೂರು ಕೃಷಿ ವಿಶ್ವವಿದ್ಯಾಲಯಗಳ ಜೊತೆಗೆ ಹೈದರಾಬಾದ್‌ ಕರ್ನಾಟಕ ಭಾಗದ ವ್ಯಾಪ್ತಿಗೆ ಬೆಳಗಾವಿಯ ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯ ವ್ಯಾಪ್ತಿಯ ಹೂವಿನಹಡಗಲಿ ಮತ್ತು ರಾಯಚೂರು ಕೇಂದ್ರಗಳಲ್ಲಿ ಉದ್ಯೋಗ ಭರ್ತಿಗೆ ಅರ್ಜಿ ಸಲ್ಲಿಸಲು ಅವಕಾಶವಿದ್ದು, ಸಂವಿಧಾನದ 371(ಜೆ) ಕಲಂ ಅನುಸಾರ ಈ ಭಾಗದ ಆಕಾಂಕ್ಷಿಗಳು ಮೀಸಲಾತಿ ಕೋರಲು ಅರ್ಹತಾ ಪತ್ರ ಲಗತ್ತಿಸುವುದು ಕಡ್ಡಾಯ.

ಪಶುವೈದ್ಯಕೀಯ ಮತ್ತು ರಾಯಚೂರು ಕೃಷಿ ವಿಶ್ವವಿದ್ಯಾಲಯದ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಏ.15, ಬೆಳಗಾವಿಯ ವಿ.ಟಿ.ಯು ವ್ಯಾಪ್ತಿಯ ಹೂವಿನಹಡಗಲಿ, ರಾಯಚೂರು ಕೇಂದ್ರ­ಗಳ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಏ.5 ಕಡೆಯ ದಿನ ಎಂದು ಆಕಾಂಕ್ಷಿಗಳಲ್ಲಿ ಒಬ್ಬರಾದ ವಿರೂಪಾಕ್ಷಪ್ಪ ತಿಳಿಸಿದರು.

ಈ ಅವಧಿಯೊಳಗೆ ಅರ್ಜಿ ಸಲ್ಲಿಸಲು ಅರ್ಹತಾ ಪತ್ರ ಪಡೆಯುವುದು ಕಡ್ಡಾಯ. ಅದಕ್ಕೂ ಮುನ್ನ ವಾಸ ದೃಢೀಕರಣ ಪತ್ರ, ಅಧ್ಯಯನ ದೃಢೀ­ಕರಣ ಪತ್ರ ಪಡೆಯುವ ಪ್ರಕ್ರಿಯೆಗಳು ಕೂಡಾ ಒಂದು ವಾರ, ಹದಿನೈದು ದಿನ ಆಗುತ್ತಿದೆ ಎಂದು ಹೇಳಿದರು.

ನಾಡಕಚೇರಿಗಳಲ್ಲಿ ವಾಸ ದೃಢೀಕರಣ ಪತ್ರ, ಮತ್ತು ಒಂದರಿಂದ ಹತ್ತನೇ ತರಗತಿವರೆಗೆ ವ್ಯಾಸಂಗ ಮಾಡಿದ ಕುರಿತು ಆಯಾ ಶಾಲೆಗಳಿಂದ ವ್ಯಾಸಂಗ ಪ್ರಮಾಣ ಪತ್ರ ಪಡೆದ ನಂತರ ದೃಢೀಕರಿಸಲು ನಿಗದಿತ ಅರ್ಜಿ ನಮೂನೆಯೊಂದಿಗೆ ತಹಶೀಲ್ದಾರ್‌ ಕಚೇರಿಗೆ ತಲುಪಿಸಬೇಕು. ಅವರು ಪರಿಶೀಲಿಸಿ, ಸಹಿ ಹಾಕಿದ ಬಳಿಕ ಅದನ್ನು ಉಪ ವಿಭಾಗಾಧಿಕಾರಿ ಕಚೇರಿಗೆ ತಲುಪಿಸಬೇಕು. ಅವರು ಈ ಎಲ್ಲವನ್ನು ಪರಿಶೀಲಸಿದ 371(ಜೆ) ಅನ್ವಯ ಅರ್ಹತಾ ಪತ್ರ ನೀಡುತ್ತಾರೆ.

ಐದು–ಆರು ದಿನ ವ್ಯಯಿಸಿ ವಾಸ ದೃಢೀಕರಣ ಮತ್ತು ವ್ಯಾಸಂಗ ಪ್ರಮಾಣ ಪತ್ರ ಪಡೆದ ನಂತರ ತಹಶೀಲ್ದಾರ್‌ ಕಚೇರಿಯಲ್ಲಿ ಅನುಮೋದನೆ ಪಡೆ­ಯುವ ಪ್ರಕ್ರಿಯೆ ವಿಳಂಬ ಆಗುತ್ತಿದೆ ಎಂಬುದು ಈಗಿನ ತಕರಾರು. ನಾಡ ತಹಶೀಲ್ದಾರ್‌ ಕಚೇರಿಯಲ್ಲಿ ವಿವರ ಪರಿಶೀಲಿಸಿ ನೀಡುವ ಕಾರಣ ತಹಶೀಲ್ದಾರ್ ಕಚೇರಿಯಲ್ಲಿ ಕೇವಲ ಪರಿಶೀಲನೆ ನಡೆಸಿದರೂ ಆದಿತು. ಇಲ್ಲಿಯೂ ಪ್ರತ್ಯೇಕ ಅರ್ಜಿ ನಮೂನೆ­ಯಲ್ಲಿ ಭರ್ತಿ ಮಾಡಿ ನೀಡಿ ಎಂದು ತಾಕೀತು ಮಾಡುವುದು ಸಮಸ್ಯೆ­ಯಾ­ಗಿದೆ ಎಂದು ಆಕಾಂಕ್ಷಿಗಳು ಹೇಳುತ್ತಾರೆ.

ಒಂದೆರಡು ದಿನದಲ್ಲಿ ಯಥಾಸ್ಥಿತಿ: ಈ ಕುರಿತು ಜಿಲ್ಲಾಧಿಕಾರಿ ಡಾ. ಪಿ.ಸಿ.ಜಾಫರ್‌ ಅವರನ್ನು ಸಂಪರ್ಕಿಸಿದಾಗ, ‘ಅರ್ಹತಾ ಪತ್ರ ನೀಡುವುದರಲ್ಲಿ ವಿಳಂಬ ಆಗುತ್ತಿದೆ ಎಂಬ  ಬಗೆಗೆ ನಿಖರವಾಗಿ ದೂರುಗಳು ಬಂದಿಲ್ಲ. ಆದರೂ ವಿಳಂಬ ಆಗುತ್ತಿದ್ದರೆ ಪರಿಶೀಲಿಸಿ ಸರಿಪಡಿಸಲಾಗುವುದು’ ಎಂದರು.

ಚುನಾವಣೆ ಹಿನ್ನೆಲೆಯಲ್ಲಿ ಮತ­ಪಟ್ಟಿಗೆ ಹೆಸರು ಸೇರ್ಪಡೆಗೆ ಬಂದಿರುವ ಅರ್ಜಿನಮೂನೆ 6ರ ಪರಿಶೀಲನೆ ಕಾರ್ಯ ಈಗ ನಡೆಯುತ್ತಿದೆ. ಬಹುಶಃ ಈ ಕಾರಣದಿಂದ ವಿಳಂಬ ಆಗಿರಬಹುದು. ಒಂದೆರಡು ದಿನದಲ್ಲಿ ಈ ಪ್ರಕ್ರಿಯೆ ಮುಗಿಯಲಿದ್ದು, ಅರ್ಹತಾ ಪತ್ರ ನೀಡುವುದು ನಂತರ ಚುರುಕು  ಪಡೆಯಲಿದೆ ಎಂದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.