ಜನವಾಡ: ಬೀದರ್ ತಾಲ್ಲೂಕಿನ ಗುನ್ನಳ್ಳಿ ಶಿವಾರದಲ್ಲಿ ಕಾಡು ಹಂದಿಗಳ ಉಪಟಳ ಹೆಚ್ಚಾಗಿದ್ದು, ರೈತರು ಕಂಗಾಲಾಗಿದ್ದಾರೆ.
ನಾಲ್ಕೈದು ತಿಂಗಳಿಂದ ಕಾಡು ಹಂದಿಗಳು ಗ್ರಾಮದ ಕಬ್ಬಿನ ಹೊಲಗಳಿಗೆ ನುಗ್ಗುತ್ತಿವೆ. ಕಬ್ಬು ಬೆಳೆಯನ್ನು ಹಾಳು ಮಾಡುತ್ತಿವೆ. ಕಾಡು ಹಂದಿಗಳಿಂದ ಆರ್ಥಿಕ ನಷ್ಟಕ್ಕೆ ಒಳಗಾಗಿರುವ ಗ್ರಾಮದ ಅನೇಕ ರೈತರು ಅವುಗಳ ಕಾಟ ತಪ್ಪಿಸುವಂತೆ ಸಂಬಂಧಪಟ್ಟ ಅಧಿಕಾರಿಗಳಲ್ಲಿ ಮನವಿ ಮಾಡಿದ್ದಾರೆ.
‘ನಮ್ಮ ಹೊಲದಲ್ಲಿನ ನಾಲ್ಕು ಎಕರೆ ಕಬ್ಬನ್ನು ಕಾಡು ಹಂದಿಗಳು ತುಳಿದು ಹಾಳು ಮಾಡಿವೆ. ಇದರಿಂದ ಸುಮಾರು ₹ 5 ಲಕ್ಷ ನಷ್ಟವಾಗಿದೆ. ಅರಣ್ಯ ಇಲಾಖೆಯವರ ಗಮನಕ್ಕೆ ತಂದರೂ ಪ್ರಯೋಜನವಾಗಿಲ್ಲ’ ಎಂದು ಗುನ್ನಳ್ಳಿ ಗ್ರಾಮದ ಓಂಕಾರ ಸುಲ್ತಾನಪುರೆ ಹೇಳುತ್ತಾರೆ.
‘ಕಾಡು ಹಂದಿಗಳು ರೈತರ ಕೈಗೆ ಬಂದ ತುತ್ತು ಬಾಯಿಗೆ ಬರದಂತೆ ಮಾಡುತ್ತಿವೆ. ಹೀಗಾಗಿ ಬೆಳಿಗ್ಗೆ, ಸಾಯಂಕಾಲ ಹಾಗೂ ರಾತ್ರಿ ಹೊಲಕ್ಕೆ ಹೋಗಿ ಕಬ್ಬು ಬೆಳೆಯನ್ನು ಕಾಯುತ್ತಿದ್ದೇವೆ’ ಎನ್ನುತ್ತಾರೆ ರೈತ ಸುನೀಲಕುಮಾರ ತಿಪ್ಪಣ್ಣ.
‘ಸರ್ಕಾರ ಕೂಡಲೇ ಕಾಡು ಹಂದಿಗಳನ್ನು ನಿಯಂತ್ರಿಸಲು ಕ್ರಮ ಕೈಗೊಳ್ಳಬೇಕು. ಇಲ್ಲದಿದ್ದರೆ ಕಬ್ಬು ಬೆಳೆ ಹಾನಿಗೀಡಾಗುವ ರೈತರಿಗೆ ಪರಿಹಾರ ಕೊಡಬೇಕು’ ಎಂದು ರೈತ ದೇವಪ್ಪ ಆಗ್ರಹಿಸುತ್ತಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.