ADVERTISEMENT

`ಕಾನೂನು ಮಹಿಳೆಗೆ ಶಕ್ತಿ ನೀಡುತ್ತದೆ'

​ಪ್ರಜಾವಾಣಿ ವಾರ್ತೆ
Published 5 ಏಪ್ರಿಲ್ 2013, 6:33 IST
Last Updated 5 ಏಪ್ರಿಲ್ 2013, 6:33 IST

ಬಸವಕಲ್ಯಾಣ: ಕಾನೂನು ಮಹಿಳೆಗೆ ಶಕ್ತಿ ನೀಡುತ್ತದೆ. ಅತ್ಯಾಚಾರ, ಶೋಷಣೆಗೆ ಒಳಗಾದವರಿಗೆ ನ್ಯಾಯ ದೊರಕಿಸಲು ಸಹಾಯ ಮಾಡುತ್ತದೆ ಎಂದು ವಕೀಲರಾದ ರೇಣುಕಾ ಹೇಳಿದರು.

ಇಲ್ಲಿ ಬುಧವಾರ ರಾಷ್ಟ್ರೀಯ ಮಹಿಳಾ ಆಯೋಗ ಮತ್ತು ಬನಶಂಕರಿ ಮಹಿಳಾ ಮಂಡಳ ಸಂಯುಕ್ತ ಆಶ್ರಯದಲ್ಲಿ ಹಮ್ಮಿಕೊಂಡ ಕಾನೂನು ಅರಿವು ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

ಜನಸಂಖ್ಯೆ ಸ್ಫೋಟ್‌ದಿಂದ ಕುಟುಂಬದ ಸರಿಯಾದ ನಿರ್ವಹಣೆ ಸಾಧ್ಯವಾಗುತ್ತಿಲ್ಲ. ವರದಕ್ಷಿಣೆ ಪದ್ಧತಿಯಿಂದ ಮಹಿಳೆಗೆ ತೊಂದರೆ ಆಗುತ್ತಿದೆ. ಭ್ರೂಣಹತ್ಯೆಯಿಂದಾಗಿ ಸ್ತ್ರೀಯರ ಸಂಖ್ಯೆ ಕ್ಷೀಣಿಸುತ್ತಿದೆ. ಆದ್ದರಿಂದ ಎಲ್ಲರೂ ತಮ್ಮ ಹಕ್ಕುಗಳ ಬಗ್ಗೆ ತಿಳಿದುಕೊಳ್ಳಬೇಕು. ಶೋಷಣೆ ಮುಕ್ತ ಸಮಾಜ ನಿರ್ಮಾಣ ಮಾಡಬೇಕು ಎಂದರು.

ಅಧ್ಯಕ್ಷತೆ ವಹಿಸಿದ್ದ ಮುಖಂಡ ಸೂರ್ಯಕಾಂತ ಚಿಲ್ಲಾಬಟ್ಟೆ ಮಾತನಾಡಿ ಮಹಿಳೆಯರು ಸರ್ಕಾರದ ಸೌಲಭ್ಯಗಳನ್ನು ಪಡೆದುಕೊಳ್ಳಬೇಕು. ಮಹಿಳಾ ಮಂಡಳಗಳ ಮೂಲಕ ಸ್ತ್ರೀ ಕಲ್ಯಾಣದ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಬೇಕು ಎಂದು ಕೇಳಿಕೊಂಡರು.

ವಿಶ್ವನಾಥ ಗೋಕುಳ ಮಾತನಾಡಿ ಸರ್ಕಾರ ಮಹಿಳೆಯ ಸುರಕ್ಷತೆಗೆ ಹೆಚ್ಚಿನ ಗಮನ ಕೊಡಬೇಕಾಗಿದೆ ಎಂದು ಅಭಿಪ್ರಾಯ ವ್ಯಕ್ತಪಡಿಸಿದರು. ಮಹೇಶ ಹಲಿಂಗೆ ಮಾತನಾಡಿ ಚಿಕ್ಕ ಕುಟುಂಬ ಚೊಕ್ಕ ಕುಟುಂಬ ಎಂಬಂತೆ ಎಲ್ಲರೂ ಜನಸಂಖ್ಯೆ ಹೆಚ್ಚಳ ಆಗದಂತೆ ನೋಡಿಕೊಂಡು ಸುಖದ ಜೀವನ ನಡೆಸಬೇಕು ಎಂದರು.

ಮಹಿಳಾ ಮಂಡಳದ ಅಧ್ಯಕ್ಷೆ ಮಹಾದೇವಿ ಬ್ಯಾಡಗೆ, ಗುರುನಾಥ ಕೋಶೆಟ್ಟೆ, ರೇಖಾ, ಗೀತಾ, ಗುರುಬಾಯಿ, ಅನ್ನಪೂರ್ಣ ಪಾಲ್ಗೊಂಡಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.