ಬೀದರ್: ಪರಿಸರ ಸಂರಕ್ಷಣೆ ಕುರಿತು ಜನಜಾಗೃತಿ ಮೂಡಿಸಲು ಇರುವ ಹಲವು ಮಾರ್ಗಗಳ ಪೈಕಿ ಛಾಯಾಚಿತ್ರಗಳು ಪ್ರಮುಖವಾದದ್ದು ಎಂದು ವಿಧಾನ ಪರಿಷತ್ ಸದಸ್ಯ ಕಾಜಿ ಅರ್ಷದ್ ಅಲಿ ತಿಳಿಸಿದರು.ವಾರ್ತಾ ಇಲಾಖೆ ವತಿಯಿಂದ ಶುಕ್ರವಾರ ಬೀದರಿನ ಕೋಟೆ ಆವರಣದಲ್ಲಿ ಏರ್ಪಡಿಸಲಾಗಿದ್ದ ಪರಿಸರ ಹಾಗೂ ವನ್ಯಜೀವಿ ಸಂರಕ್ಷಣೆ ಕುರಿತಾದ ವಿಚಾರ ಸಂಕಿರಣ ಹಾಗೂ ಛಾಯಾಚಿತ್ರ ಪ್ರದರ್ಶನ ಉದ್ಘಾಟಿಸಿ ಅವರು ಮಾತನಾಡಿದರು.
ಮುಖ್ಯ ಉಪನ್ಯಾಸ ನೀಡಿದ ಭಾರತೀಯ ವಾಯುಪಡೆಯ ಎನ್ಸಿಸಿ ಅಧಿಕಾರಿ ಪ್ರದಿಪ್ತೋ ಕುಮಾರ್ ಪಾಂಡ, ‘ಛಾಯಾಚಿತ್ರ ಬೆಳಕಿನೊಂದಿಗೆ ಆಡುವ ಆಟವಾಗಿದೆ. ಬೆಳಕನ್ನು ಸರಿಯಾಗಿ ಬಳಸಿಕೊಂಡು ಉತ್ತಮ ಛಾಯಾಚಿತ್ರಗಳನ್ನು ತೆಗೆಯಬಹುದಾಗಿದೆ’ ಎಂದು ಹೇಳಿದರು.ಅಧ್ಯಕ್ಷತೆ ವಹಿಸಿದ ಇತಿಹಾಸ ತಜ್ಞ ಪ್ರೊ. ಕೊಂಡಾ ಅವರು ಮಾತನಾಡಿ, ಪ್ರತಿಯೊಬ್ಬರಲ್ಲೂ ವಿಶೇಷವಾದ ಪ್ರತಿಭೆ ಇರುತ್ತದೆ. ಅದನ್ನು ಸರಿಯಾಗಿ ಗುರುತಿಸಿ ಗುರಿಯನ್ನು ಸಾಧಿಸಲು ಶ್ರಮ ವಹಿಸಬೇಕು. ಪರಿಸರ ಸಂರಕ್ಷಣೆ ನಮ್ಮೆಲ್ಲರ ಹೊಣೆಯಾಗಿದೆ. ಈ ಸಂಪತ್ತನ್ನು ಮುಂದಿನ ಪೀಳಿಗೆಗೆ ಉಳಿಸುವ ಜವಾಬ್ದಾರಿ ಎಲ್ಲರ ಮೇಲಿದೆ. ಇಲ್ಲಿ ಆಯೋಜಿಸಲಾಗಿರುವ ಛಾಯಾಚಿತ್ರ ಪ್ರದರ್ಶನ ಪರಿಸರದ ಕುರಿತು ಜನರಲ್ಲಿ ಕಾಳಜಿ ಮೂಡಿಸಲು ಪ್ರೇರಣೆಯಾಗಲಿ ಎಂದು ತಿಳಿಸಿದರು.
ಬೀದರ್ ಉತ್ಸವ ಸಂದರ್ಭದಲ್ಲಿ ಬೀದರಿನ ಶಿವನಗರ ಬಡಾವಣೆಯ ವಿವೇಕಾನಂದ ಬಾಬುರಾವ ಹಳ್ಳಿಖೇಡಕರ್ ಹಾಗೂ ಪಂಢರಿನಾಥ ಕಾಶಿನಾಥ ಭೂತೆ ಅವರು ತೆಗೆದಿರುವ ಅಪರೂಪದ ನಿಸರ್ಗ ಕುರಿತಾದ ಛಾಯಾಚಿತ್ರಗಳ ಪ್ರದರ್ಶನ ಆಯೋಜಿಸಲಾಗಿದೆ.ಪಾಪನಾಶ ಪರಿಸರದಲ್ಲಿ ಈ ಜೋಡಿ ತೆಗೆದಿರುವ ಹೂವು, ಪಾತರಗಿತ್ತಿಗಳ ಅಪರೂಪದ ಚಿತ್ರಗಳು ಇಲ್ಲಿವೆ. ಹಾಕ್ ವಿಮಾನದ ಎಂಜಿನಿಯರ್ ಬ್ರಿಟನ್ನ ಇಯಾನ್ ಆಸ್ಲೀನ್ ಅವರ ಜತೆಗೆ ಓಡಾಡಿ ಈ ಹುಡುಗರು ಛಾಯಾಗ್ರಾಹಣದ ಮೂಲಪಾಠ ಕಲಿತುಕೊಂಡಿದ್ದಾರೆ.ವಾರ್ತಾ ಇಲಾಖೆ ಸಹಾಯಕ ನಿರ್ದೇಶಕ ಶಫಿ ಸಾದುದ್ದೀನ್ ಸ್ವಾಗತಿಸಿ ಕಾರ್ಯಕ್ರಮ ನಿರೂಪಿಸಿದರು. ಛಾಯಾಗ್ರಾಹಕ ವಿವೇಕಾನಂದ ಮಾತನಾಡಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.