ADVERTISEMENT

ಜನಪದದಲ್ಲಿ ಬಸವಣ್ಣನ ಚರಿತ್ರೆ

​ಪ್ರಜಾವಾಣಿ ವಾರ್ತೆ
Published 4 ಡಿಸೆಂಬರ್ 2017, 7:04 IST
Last Updated 4 ಡಿಸೆಂಬರ್ 2017, 7:04 IST

ಬೀದರ್‌: ಬಸವಣ್ಣನವರನ್ನು ಸಂಪೂರ್ಣವಾಗಿ ಎಲ್ಲ ರಂಗಗಳಲ್ಲೂ ಕಾಣಲು ಸಾಧ್ಯ. ಅಂತರರಾಷ್ಟ್ರೀಯ ಮಟ್ಟದಲ್ಲಿ ಬಸವಣ್ಣನವರ ಬಗೆಗೆ 400 ಮೌಲಿಕ ಗ್ರಂಥಗಳಿವೆ. ಅವರನ್ನು ಪುರಾಣ, ಕಾವ್ಯ, ರಗಳೆ, ವಚನಗಳಲ್ಲಿ ನೋಡುತ್ತೇವೆ. ಲಿಂಗಾಯತ ಧರ್ಮ ಬಸವಣ್ಣನವರಿಂದಲೇ ಪ್ರಾರಂಭವಾಗಿದೆ ಎನ್ನುವುದಕ್ಕೆ ಜನಪದದಲ್ಲಿ ಆಧಾರಗಳಿವೆ.

ಬಸವಣ್ಣನವರ ಜೀವನ ವೃತ್ತಾಂತ ಜನಪದ ಸಂಸ್ಕೃತಿಯಲ್ಲಿ ಕಾಣಸಿಗುತ್ತದೆ. ಜನಪದದಲ್ಲಿ 950 ವರ್ಷಗಳಿಂದ ಹಾಡುಗಳಿವೆ. ಬಸವಣ್ಣನವರು ವೇದಾಗಮ, ಶಾಸ್ತ್ರ ಎಲ್ಲವನ್ನೂ ತಮ್ಮ ವಚನಗಳಲ್ಲಿ ತೆಗೆದುಕೊಂಡಿದ್ದಾರೆ. ವೇದದೊಳಗಣ ಹುಸಿಯ, ಭೇದವನ್ನು ಬಹಿರಂಗಗೊಳಿಸಿದರು.

ಜನಪದಕ್ಕೆ ತೇದುಂಡ ಜೀವಿ ಎನ್ನುವ ಮೂಲಕ ವೇದದೊಳಗಿರುವ ಸುಳ್ಳನ್ನು ಬಿಚ್ಚಿಟ್ಟರು. ಗೋವುಗಳಲ್ಲಿ 38 ಕೋಟಿ ದೇವರೆಂಬುದು ಸುಳ್ಳು. ಅದು ರೈತನ ಒಡನಾಡಿ. ಪ್ರವಚನವೆಂದರೆ ಪ್ರಸಾದವೇ ಹೊರತು ವ್ಯವಹಾರವಲ್ಲ. ದೇವರಿಗೋಸ್ಕರ ಖರ್ಚು ಮಾಡುವ ದುಡ್ಡನ್ನು ಮನೆ ಖರ್ಚಿಗೆ ಬಳಸಬೇಕು. ಯುವಕರು ವ್ಯಸನಮುಕ್ತರಾಗಿ ಜೀವನವನ್ನು ಆನಂದದಿಂದ ಅನುಭವಿಸಬೇಕು. ಕಾಯಕ ಪ್ರವೃತ್ತಿ ಬೆಳೆಸಿಕೊಳ್ಳಬೇಕು, ಪರಸ್ತ್ರೀಯರನ್ನು ಅಕ್ಕ ತಂಗಿಯರಂತೆ ಭಾವಿಸಿದರೆ ಈ ದೇಶದಲ್ಲಿ ಅತ್ಯಾಚಾರಗಳು ನಡೆಯುವುದಿಲ್ಲ.

ADVERTISEMENT

12ನೇ ಶತಮಾನದಲ್ಲಿ ನಾವೆಲ್ಲರೂ ಅಸ್ಪೃಶ್ಯರಾಗಿದ್ದೇವು. ಪೇಜಾವರ ಶ್ರೀಗಳು ದಲಿತರ ಜತೆ ಊಟ ಮಾಡುವುದು ದೊಡ್ಡದಲ್ಲ, ಲಿಂಗಾಯತ ಗುರುಗಳ ಜತೆ ಊಟ ಮಾಡಬೇಕು. ಅಸ್ಪೃಶ್ಯತೆ ನಿವಾರಣೆ ಕುರಿತು ಆತ್ಮಾವಲೋಕನ ಮಾಡಿಕೊಳ್ಳಬೇಕು. ನಮ್ಮ ಮನೆಗೆ ಬಂದವರ ಜಾತಿ ಕೇಳದೆ ಪ್ರೀತಿಯಿಂದ ಕಾಣಬೇಕು. ದಲಿತರೂ ಬದಲಾಗಬೇಕು. ಅಂದಾಗ ಮಾತ್ರ ಈ ದೇಶ ಉಳಿಯುತ್ತದೆ. ಭಾರತವು ಬಹು ಸಂಸ್ಕೃತಿ, ಬಹುಜನಾಂಗದ ದೇಶ. ನಾವು ಧರ್ಮ, ಜಾತಿ ಆಧಾರಿತ ಹಿಂದೂ ರಾಷ್ಟ್ರ ಕಟ್ಟುವುದು ಬೇಡ, ಭಾವೈಕ್ಯದ ತಳಹದಿಯಲ್ಲಿ ಅಭಿವೃದ್ಧಿಪಥದ ಮೇಲೆ ರಾಷ್ಟ್ರ ಕಟ್ಟಬೇಕು. ನಮಗೆ ರಾಮರಾಜ್ಯ ಬೇಡ, ಅಭಿವೃದ್ಧಿಪರ ಕಲ್ಯಾಣ ರಾಜ್ಯ ಬೇಕು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.