ADVERTISEMENT

ಜನಪ್ರತಿನಿಧಿ, ಅಧಿಕಾರಿ ನಡುವೆ ಸಾಮರಸ್ಯ ಅಗತ್ಯ

​ಪ್ರಜಾವಾಣಿ ವಾರ್ತೆ
Published 21 ಜನವರಿ 2012, 8:55 IST
Last Updated 21 ಜನವರಿ 2012, 8:55 IST

ಔರಾದ್: ಜನಪ್ರತಿನಿಧಿಗಳು ಮತ್ತು ಅಧಿಕಾರಿಗಳು ಸಾಮರಸ್ಯದಿಂದ ಕೆಲಸ ಮಾಡುವಂತೆ ಶಾಸಕ ಪ್ರಭು ಚವ್ಹಾಣ ಸಲಹೆ ನೀಡಿದರು.

ಇಲ್ಲಿಯ ತಾಲ್ಲೂಕು ಪಂಚಾಯ್ತಿ ಸಭಾಂಗಣದಲ್ಲಿ ಈಚೆಗೆ ನಡೆದ ಅಧಿಕಾರಿಗಳು ಮತ್ತು ಜನಪ್ರತಿನಿಧಿಗಳ ಸಭೆಯಲ್ಲಿ ಪಾಲ್ಗೊಂಡು ಅವರು ಮಾತನಾಡಿದರು. ಅಧಿಕಾರಿಗಳು ಸರ್ಕಾರಿ ಕೆಲಸ  ಕಾರ್ಯಗಳ ಸಂಬಂಧ ನಮ್ಮನ್ನು ಕಡೆಗಣಿಸುತ್ತಿದ್ದಾರೆ ಎಂದು ಕೆಲ ಪ್ರತಿನಿಧಿಗಳು ಗೋಳು ತೋಡಿಕೊಂಡರು. ಯಾವುದೇ ಇಲಾಖೆ ಕಾಮಗಾರಿ ಸಂಬಂಧ ಆಯಾ ಕ್ಷೇತ್ರದ ತಾಲ್ಲೂಕು ಪಂಚಾಯ್ತಿ ಮತ್ತು ಜಿಲ್ಲಾ ಪಂಚಾಯ್ತಿ ಸದಸ್ಯರನ್ನು ವಿಶ್ವಾಸಕ್ಕೆ ತೆಗೆದುಕೊಳ್ಳುವಂತೆ ಸಲಹೆ ನೀಡಿದರು.

ಮಂಜೂರಿಯಾದ ಅನುದಾನ ಸಮಯಾನುಸಾರವಾಗಿ ಬಳಸಿಕೊಳ್ಳಬೇಕು. ಬೇಸಿಗೆ ಸಮೀಪಿಸುತ್ತಿರುವ ಹಿನ್ನೆಲೆಯಲ್ಲಿ ಕುಡಿಯುವ ನೀರಿನ ಸಮಸ್ಯೆ ಇರುವ ಕುರಿತು ಮಾಹಿತಿ ಕಲೆ ಹಾಕುವಂತೆ ಸೂಚಿಸಿದರು. ಎಲ್ಲಿಯೂ ನೀರಿನ ಸಮಸ್ಯೆ ಆಗದಂತೆ ನೋಡಿಕೊಳ್ಳಬೇಕು ಎಂದು ಹೇಳಿದರು. ತಾಲ್ಲೂಕು ಪಂಚಾಯ್ತಿ ಅಧ್ಯಕ್ಷ  ಶ್ರೀರಂಗ ಪರಿಹಾರ, ತಹಸೀಲ್ದಾರ್ ಶಿವಕುಮಾರ ಶೀಲವಂತ, ತಾಲ್ಲೂಕು ಪಂಚಾಯ್ತಿ  ಮುಖ್ಯಾಧಿಕಾರಿ ಪ್ರೇಮಸಿಂಗ ರಾಠೋಡ, ಜಿಲ್ಲಾ ಪಂಚಾಯ್ತಿ ಸದಸ್ಯ ಕಾಶಿನಾಥ  ಜಾಧವ್, ದಿಪೀಕಾ ರಾಠೋಡ, ನೀಲಮ್ಮ ವಡ್ಡೆ ವಿವಿಧ ಇಲಾಖೆ ಅಧಿಕಾರಿಗಳು ಉಪಸ್ಥಿತರಿದ್ದರು.

ರಸ್ತೆ ದುರಸ್ತಿ: ಬೀದರ್-ಔರಾದ್  ಮುಖ್ಯ ರಸ್ತೆಯ ಬೋರಾಳ ಎತ್ತರ ಪ್ರದೇಶದ ದುರಸ್ತಿಗಾಗಿ 50 ಲಕ್ಷ ರೂಪಾಯಿ ಮಂಜೂರಾಗಿದೆ ಎಂದು ಶಾಸಕ ಪ್ರಭು ಚವ್ಹಾಣ ಹೇಳಿದ್ದಾರೆ.

ತಾಲ್ಲೂಕಿನಲ್ಲಿ ಕೆಲ ರಸ್ತೆಗಳು ಹಾಳಾದ ಹಿನ್ನೆಲೆಯಲ್ಲಿ ದುರಸ್ತಿಗಾಗಿ ಲೋಕೋಪಯೋಗಿ ಇಲಾಖೆಗೆ ಸಲ್ಲಿಸಲಾದ ಪ್ರಸ್ತಾವನೆಗೆ  ಮಂಜೂರಾತಿ ಸಿಕ್ಕಿದೆ ಎಂದು ಹೇಳಿಕೆಯಲ್ಲಿ ತಿಳಿಸಿದ್ದಾರೆ. ಯನಗುಂದಾ-ಕರಂಜಿ, ಕೌಡಗಾಂವ್-ಜಮಗಿ, ಔರಾದ್-ಮುಧೋಳ, ಕಮಲನಗರ-ಭಾತಂಬ್ರಾ, ಎಕಂಬಾ-ಲಿಂಗಿ, ಸಾವರಗಾಂವ್-ಬೋಂತಿ, ಸಾವರಗಾಂವ್-ಹಂಗರಗಾ, ಚಿಂತಾಕಿ-ನಾಗನಪಲ್ಲಿ ರಸ್ತೆ ದುರಸ್ತಿಗಾಗಿ ಅನುದಾನ ಮಂಜೂರಾಗಿದೆ. ಕರಂಜಿ -ಆಂಧ್ರ ಗಡಿ ವರೆಗೆ, ಕುಶನೂರ-ದುಡಕನಾಳ ಮತ್ತು ಸಂಗಮ-ಸೋನಾಳ ರಸ್ತೆ ದುರಸ್ತಿಗೂ ಅನುದಾನ ಬಂದಿದೆ. ಶೀಘ್ರದಲ್ಲಿ ಟೆಂಡರ್ ಕರೆದು ಮಾರ್ಚ್ ಒಳಗೆ ಈ ಎಲ್ಲ ಕಾಮಗಾರಿ ಪೂರ್ಣಗೊಳ್ಳಲಿವೆ ಎಂದು ಹೇಳಿದರು. ಔರಾದ್‌ನಿಂದ ಬೋರಾಳ ವರೆಗೆ ದೊಡ್ಡ ರಸ್ತೆ ಮತ್ತು ನಡುವೆ ವಿಭಜಕ ಅಳವಡಿಸಿ ನಗರದ ಸೌಂರ್ದಯ ಹೆಚ್ಚಿಸಲಾಗುವುದು. ಈ ಕಾಮಗಾರಿ  ಶೀಘ್ರದಲ್ಲಿ ಆರಂಭವಾಗಲಿದೆ ಎಂದು ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.