ಚಿಟಗುಪ್ಪ: ‘ಚಿಟಗುಪ್ಪ ತಾಲ್ಲೂಕು ಕೇಂದ್ರದಲ್ಲಿ ಸರ್ಕಾರ ಆರಂಭಿಸಬೇಕಿರುವ 33 ಇಲಾಖೆಗಳ ಕಚೇರಿಗಳನ್ನು ನಿರ್ಮಿಸಲು ಸಾರ್ವಜನಿಕರು ಭೂ ದಾನ ಮಾಡಲು ಮುಂದೆ ಬರಬೇಕು’ ಎಂದು ತಹಶೀಲ್ದಾರ ಡಿ.ಎಂ.ಪಾಣಿ ಮನವಿ ಮಾಡಿದರು.
ಪುರಸಭೆ ಕಚೇರಿಯಲ್ಲಿ ಈಚೆಗೆ ನಡೆದ ಗಣ್ಯರ, ಪುರಸಭೆ ಸದಸ್ಯರು, ಅಧಿಕಾರಿಗಳ ಸಮಾಲೋಚನಾ ಸಭೆಯಲ್ಲಿ ರೈತ ನಂದಕುಮಾರ ರಾಮಚಂದ್ರರಾವ ಐನಾಪುರ ಅವರು ಮಿನಿ ವಿಧಾನ ಸೌಧ ನಿರ್ಮಿಸಲು ಮೂರು ಎಕರೆ ಭೂಮಿ ದಾನ ಮಾಡಿದ ದಾಖಲಾತಿಗಳನ್ನು ಸ್ವೀಕರಿಸಿ ಅವರು ಮಾತನಾಡಿದರು.
‘ಸರ್ಕಾರದ ವಿವಿಧ ಇಲಾಖೆಗಳ ಕಚೇರಿಗಳ ನಿರ್ಮಾಣಕ್ಕೆ ಭೂಮಿ ದಾನ ಮಾಡಲು ಪಟ್ಟಣದ ಸುತ್ತಮುತ್ತಲಿನ ರೈತರು ಸ್ವಯಂ ಮುಂದೆ ಬಂದು ವಿಶೇಷ ತಹಶೀಲ್ದಾರ ಕಚೇರಿಯಲ್ಲಿ ಅಥವಾ ಹುಮನಾಬಾದ್ ತಹಶೀಲ್ದಾರ್ ಕಚೇರಿಯಲ್ಲಿ ದಾಖಲೆಗಳೊಂದಿಗೆ ಅರ್ಜಿ ಕೊಡಬೇಕು. ಸರ್ಕಾರ ಪರಿಶೀಲನೆ ನಡೆಸಿ, ಅವಶ್ಯಕತೆ ಎನಿಸಿದಲ್ಲಿ ಭೂಮಿ ಪಡೆಯುವುದು’ ಎಂದು ತಿಳಿಸಿದರು.
ತಾಲ್ಲೂಕು ಪಂಚಾಯಿತಿ ಕಾರ್ಯನಿರ್ವಾಹಕ ಅಧಿಕಾರಿ ಡಾ.ಗೋವಿಂದರಾವ್, ವಿಶೇಷ ತಹಶೀಲ್ದಾರ್ ಜಿಯಾವುಲ್ಲ, ಮುಖ್ಯಾಧಿಕಾರಿ ಹುಸಾಮೋದ್ದೀನ್, ಕೃಷಿ ಇಲಾಖೆಯ ತಾಲ್ಲೂಕು ಅಧಿಕಾರಿ ಮಲ್ಲಿಕಾರ್ಜುನ್, ಪುರಸಭೆ ಅಧ್ಯಕ್ಷೆ ಗೌರಮ್ಮ,, ಉಪಾಧ್ಯಕ್ಷ ಮಹ್ಮದ್ ಲೈಕ್, ಶಿಕ್ಷಣ ಸಂಯೋಜನಾಧಿಕಾರಿ ರಮೇಶ್ ರಾಜೋಳೆ, ಬಿ.ಆರ್.ಸಿ ಶಿವಕುಮಾರ್ ಇದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.