ಬೀದರ್: ತೊಗರಿ ಬೆಳೆಗೆ ಬೆಂಬಲ ಬೆಲೆ ನಿಗದಿಯಾದ ಹಿಂದೆಯೇ ಜಿಲ್ಲೆಯಲ್ಲಿ ತೊಗರಿ ಬೆಳೆ ಖರೀದಿಗೆ ಚಾಲನೆ ನೀಡಲಾಗಿದ್ದು, ಗಾಂಧಿಗಂಜ್ನ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿ ಪ್ರಾಂಗಣದಲ್ಲಿ ಅರ್ಹ ರೈತರಿಗೆ ಟೋಕನ್ ನೀಡುವ ಪ್ರಕ್ರಿಯೆ ಆರಂಭವಾಯಿತು.
ಇಂದು, ಸಾಂಕೇತಿಕವಾಗಿ ತೂಕದ ಯಂತ್ರಕ್ಕೆ ಪೂಜೆ ನೆರವೇರಿಸಿ ಚಾಲನೆ ನೀಡಲಾಗಿದೆ. ಆದರೆ, ಯಾವುದೇ ಖರೀದಿ ನಡೆದಿಲ್ಲ. ರೈತರಿಗೆ ಟೋಕನ್ ನೀಡುವ ಕಾರ್ಯ ಆರಂಭಿಸಿದ್ದು, ಎರಡು ದಿನದಲ್ಲಿ ಖರೀದಿ ಆರಂಭವಾಗಬಹುದು ಎಂದು ಅಧಿಕಾರಿಗಳು ಸೂಚಿಸಿದರು.
ಕೇಂದ್ರ ಸರ್ಕಾರವು 2012-13ನೇ ಸಾಲಿನ ಮುಂಗಾರು ಹಂಗಾಮಿನಲ್ಲಿ ತೊಗರಿ ಖರೀದಿಸಲು ಎಫ್ಎಕ್ಯೂ ಗುಣಮಟ್ಟದ ತೊಗರಿಗೆ ಕ್ವಿಂಟಲ್ಗೆ ರೂ. 4,500 ಬೆಂಬಲ ಬೆಲೆ ನಿಗದಿಪಡಿಸಿದೆ.
ಆ ಪ್ರಕಾರ ಖರೀದಿ ನಡೆಯಲಿದೆ. ಕರ್ನಾಟಕ ತೊಗರಿ ಅಭಿವೃದ್ಧಿ ಮಂಡಳಿಯ ತೊಗರಿಯನ್ನು ಖರೀದಿಸಲಿದೆ. ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿಯ ಅಧ್ಯಕ್ಷ ವೀರೇಂದ್ರ ಭೀಮರಾವ್ ಪಾಟೀಲ ಗುನ್ನಳ್ಳಿ, ಸದಸ್ಯರಾದ ಚನ್ನಮಲ್ಲಪ್ಪಾ, ರಾಜಶೇಖರ ಪಾಟೀಲ, ಚಂದ್ರಶೇಖರ ಗಾದಗಿ, ಕಾರ್ಯದರ್ಶಿ ಮಂಜುನಾಥ, ರೈತ ಸಂಘದ ವಿಶ್ವನಾಥ ಕೌಠಾ, ಸಿದ್ದಪ್ಪ ಸಣ್ಣಮಣಿ ಇದ್ದರು.
ರೈತರು ಪರಣಿ, ಫೋಟೋ ಗುರುತುಪತ್ರ, ಬ್ಯಾಂಕ್ ಪುಸ್ತಕದ ಜೆರಾಕ್ಸ್ ಪ್ರತಿಯನ್ನು ಹಾಜರುಪಡಿಸಿ ಹೆಸರು ನೋಂದಣಿ ಮಾಡಿಸಲು ತೊಗರಿ ಬೆಳೆಗಾರರಿಗೆ ಕೋರಲಾಗಿದೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.