ADVERTISEMENT

ದಾದಿಯರ ನೇಮಕಕ್ಕೆ ಆಗ್ರಹಿಸಿ ರ‌್ಯಾಲಿ

​ಪ್ರಜಾವಾಣಿ ವಾರ್ತೆ
Published 7 ಸೆಪ್ಟೆಂಬರ್ 2013, 5:04 IST
Last Updated 7 ಸೆಪ್ಟೆಂಬರ್ 2013, 5:04 IST

ಬೀದರ್: ಜಿಲ್ಲೆಯ ಖಾಸಗಿ ಆಸ್ಪತ್ರೆ ಮತ್ತು ನರ್ಸಿಂಗ್ ಹೋಂಗಳಲ್ಲಿ ತರಬೇತಿ ಹೊಂದಿದ ಶುಶ್ರೂಷಕರನ್ನೇ ನೇಮಕ ಮಾಡಿಕೊಳ್ಳಬೇಕು ಎಂದು ಆಗ್ರಹಿಸಿ ಕರ್ನಾಟಕ ರಾಜ್ಯ ತರಬೇತಿ ಹೊಂದಿದ ಶುಶ್ರೂಷಕರ ಒಕ್ಕೂಟವು ನಗರದಲ್ಲಿ ಶುಕ್ರವಾರ ಪ್ರತಿಭಟನೆ ನಡೆಸಿತು.
ನಗರದ ಜಿಲ್ಲಾ ಸರ್ಕಾರಿ ಆಸ್ಪತ್ರೆ ಬಳಿ ಸೇರಿದ ತರಬೇತಿ ಹೊಂದಿದ ಶುಶ್ರೂಷಕರು ಅಲ್ಲಿಂದ ಅಂಬೇಡ್ಕರ್ ವೃತ್ತದ ಮೂಲಕ ಮಹಾವೀರ ವೃತ್ತದವರೆಗೆ ಮೆರವಣಿಗೆ ನಡೆಸಿದರು.

ವೃತ್ತದ ಸುತ್ತ ಮಾನವ ಸರಪಳಿ ರಚಿಸಿ ರಸ್ತೆತಡೆ ನಡೆಸಲು ಪ್ರಯತ್ನಿಸಿದರಾದರೂ ಪೊಲೀಸರು ಅವಕಾಶ ನೀಡಲಿಲ್ಲ. ಬಳಿಕ ಅಲ್ಲಿಂದ ಜಿಲ್ಲಾಧಿಕಾರಿ ಕಚೇರಿಗೆ ತೆರಳಿ ಮನವಿ ಪತ್ರ ಸಲ್ಲಿಸಿದರು.

ಜಿಲ್ಲೆಯ ಬಹುತೇಕ ಖಾಸಗಿ ಆಸ್ಪತ್ರೆಗಳಲ್ಲಿ ತರಬೇತಿ ಹೊಂದಿರದ ಶುಶ್ರೂಷಕರನ್ನು ನೇಮಕ ಮಾಡಿಕೊಂಡು ಅನ್ಯಾಯ ಮಾಡಲಾಗುತ್ತಿದೆ ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವರಿಗೆ ಬರೆದ ಮನವಿ ಪತ್ರದಲ್ಲಿ ದೂರಿದ್ದಾರೆ.

ಖಾಸಗಿ ಆಸ್ಪತ್ರೆ ಮತ್ತು ನರ್ಸಿಂಗ್ ಹೋಂಗಳಲ್ಲಿ ಕಾರ್ಯ ನಿರ್ವಹಿಸುತ್ತಿರುವ ತರಬೇತಿ ಹೊಂದಿದ ಶುಶ್ರೂಷಕ/ಶುಶ್ರೂಷಕಿಯರಿಗೆ ಕನಿಷ್ಠ ವೇತನ ಹಾಗೂ ಇತರೆ ಸೌಲಭ್ಯಗಳನ್ನು ಕಲ್ಪಿಸುತ್ತಿಲ್ಲ ಎಂದು ಆಪಾದಿಸಿದ್ದಾರೆ.

ಕನಿಷ್ಠ 5,214 ರೂ. ವೇತನ ನೀಡಬೇಕು. ಪ್ರತಿ ವರ್ಷ ಶೇ 20 ರಷ್ಟು ವೇತನ ಹೆಚ್ಚಳ ಮಾಡಬೇಕು. ಮಾಸಿಕ ನಾಲ್ಕು ರಜೆ ಕೊಡಬೇಕು. ವಿಮೆ ಸೌಲಭ್ಯ ಒದಗಿಸಬೇಕು.

ಅನಾರೋಗ್ಯದಿಂದ ಕರ್ತವ್ಯಕ್ಕೆ ಗೈರು ಹಾಜರಾಗುವ ಸಂದರ್ಭಗಳಲ್ಲಿ ಅರ್ಧ ವೇತನ ಕೊಡಬೇಕು. ಪಿ.ಎಫ್. ಸೌಲಭ್ಯ ಕಲ್ಪಿಸಬೇಕು ಎಂದು ಆಗ್ರಹಿಸಿದ್ದಾರೆ.

ಒಕ್ಕೂಟದ ಅಧ್ಯಕ್ಷ ಯೇಸುದಾಸ್ ಆಣದೂರೆ, ಪ್ರಧಾನ ಕಾರ್ಯದರ್ಶಿ ಸಿದ್ಧಾರ್ಥ ಲಾಂಬಳೆ, ಖಜಾಂಚಿ ರೋಸ್ ಫಿಲೊಮಿನ್, ಪ್ರಮುಖರಾದ ರೇಣುಕಾದೇವಿ ವಿಲ್ಸನ್, ಗಂಗಮ್ಮ ಯೇಸುದಾಸ್, ರಮಾ ಪುಂಡಲಿಕ, ರೆಬೆಕಾ, ಪ್ರಕಾಶ್ ಮೆಲ್ದೊಡ್ಡಿ ಮತ್ತಿತರರು ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.