ಬೀದರ್: ಬೀದರ್ ಹಾಗೂ ಸುತ್ತಮುತ್ತಲಿನ ಜನರ ಅನುಕೂಲಕ್ಕಾಗಿ ನಗರದಲ್ಲಿಯೇ ನೆಮ್ಮದಿ ಕೇಂದ್ರ ಆರಂಭಿಸಿದರೂ ನಾಗರಿಕರಿಗೆ ಮಾತ್ರ `ನೆಮ್ಮದಿ~ ಸಿಗದಂತಾಗಿದೆ.ಈ ಹಿಂದೆ ತಾಲ್ಲೂಕಿನ ಚಿಮಕೋಡ್ನಲ್ಲಿ ನೆಮ್ಮದಿ ಕೇಂದ್ರ ಇತ್ತು. ಹೀಗಾಗಿ ಬೀದರ್ ನಗರ ಸೇರಿದಂತೆ ಸುತ್ತಮುತ್ತಲಿನ ಜನ ಆದಾಯ, ಜಾತಿ ಪ್ರಮಾಣ ಪತ್ರ ಮತ್ತಿತರ ಕೆಲಸ ಕಾರ್ಯಗಳಿಗಾಗಿ ಅಲ್ಲಿಗೆ ಹೋಗಬೇಕಾಗಿತ್ತು.
ನಾಗರಿಕರ ಬಹುದಿನಗಳ ಬೇಡಿಕೆಯ ನಂತರ ವರ್ಷದ ಹಿಂದಷ್ಟೇ ನಗರದಲ್ಲಿ ನೆಮ್ಮದಿ ಕೇಂದ್ರ ಆರಂಭಿಸಲಾಗಿದೆ. ಆದರೆ, ನೆಮ್ಮದಿ ಕೇಂದ್ರದ ಕೆಲಸ ಸುಸೂತ್ರ ನಡೆಯದಿರುವುದು ನಾಗರಿಕರ ಅಸಮಾಧಾನಕ್ಕೆ ಕಾರಣವಾಗಿದೆ.
ಸದ್ಯ ಶಾಲಾ ಕಾಲೇಜುಗಳು ಆರಂಭ ಆಗಿರುವುದರಿಂದ ಜಾತಿ ಮತ್ತು ಆದಾಯ ಪ್ರಮಾಣ ಪತ್ರ ಪಡೆಯುವುದಕ್ಕಾಗಿ ನೂರಾರು ವಿದ್ಯಾರ್ಥಿಗಳು ನೆಮ್ಮದಿ ಕೇಂದ್ರಕ್ಕೆ ಆಗಮಿಸುತ್ತಿದ್ದಾರೆ. ಆದರೆ, ನಿಗದಿತ ಅವಧಿಯ ಒಳಗೆ ಪ್ರಮಾಣ ಪತ್ರ ಸಿಗದೇ ಇರುವುದರಿಂದ ಹೈರಾಣಾಗುವಂತಾಗಿದೆ.
ನೆಮ್ಮದಿ ಕೇಂದ್ರಕ್ಕೆ ಹೊತ್ತು ಗೊತ್ತು ಇಲ್ಲ. ಮನಸ್ಸಿಗೆ ಬಂದಹಾಗೆ ಕಚೇರಿಯ ಬೀಗ ತೆರೆಯಲಾಗುತ್ತದೆ. ವಿನಾಕಾರಣ ನಾಳೆ, ನಾಡಿದ್ದು ಬನ್ನಿ ಎಂದು ಸತಾಯಿಸಲಾಗುತ್ತಿದೆ ಎಂಬ ಆರೋಪ ನಾಗರಿಕರದು.
ತಿಂಗಳಲ್ಲಿ 15 ದಿನ ವಿದ್ಯುತ್ ಇಲ್ಲ ಎಂಬ ಸಬೂಬು ಹೇಳುತ್ತಾರೆ.
ವಿದ್ಯುತ್ ಇದ್ದಾಗ ಇಂಟರ್ನೆಟ್ ಕೆಲಸ ಮಾಡುತ್ತಿಲ್ಲ. ಸರ್ವರ್ ಡೌನ್ ಆಗಿದೆ ಎಂಬ ಕಾರಣ ನೀಡುತ್ತಾರೆ. ಹೀಗಾದರೆ ಪ್ರಮಾಣ ಪತ್ರ ಪಡೆಯುವುದು ಹೇಗೆ? ಎಂದು ಪ್ರಶ್ನಿಸುತ್ತಾರೆ.
ನಿಗದಿತ ಸಮಯದಲ್ಲೇ ಕಚೇರಿಗೆ ಬೀಗ ಹಾಕಲಾಗುತ್ತಿದೆ. ನೆಮ್ಮದಿ ಕೇಂದ್ರದ ಜವಾಬ್ದಾರಿ ಹೊತ್ತವರು ಹೊರಗಡೆ ಕುಳಿತು ಕೆಲಸ ಮಾಡುತ್ತಿದ್ದಾರೆ. ನಾಗರಿಕರಿಗೆ ಹಣ ಕೇಳದಿದ್ದರೂ `ಬ್ರೋಕರ್~ಗಳಿಂದ ನಿಗದಿತ ಶುಲ್ಕಕ್ಕಿಂತ 5 ರೂಪಾಯಿ ಹೆಚ್ಚು ಶುಲ್ಕ ಪಡೆದು ತ್ವರಿತವಾಗಿ ಕೆಲಸ ಮಾಡಿಕೊಡಲಾಗುತ್ತಿದೆ ಎಂದು ಆರೋಪಿಸುತ್ತಾರೆ.
ಸಿಬ್ಬಂದಿ ಕೊರತೆಯಿಂದಾಗಿ ಕಚೇರಿ ಧೂಳು ತಿನ್ನುತ್ತಿದೆ. ಸಾಮಾನುಗಳು ಎಲ್ಲೆಂದರಲ್ಲಿ ಬಿದ್ದಿರುತ್ತವೆ ಎಂದು ಅಸಮಾಧಾನ ವ್ಯಕ್ತಪಡಿಸುತ್ತಾರೆ.ನಗರಸಭೆ ಕಾಂಪ್ಲೆಕ್ಸ್ನಲ್ಲಿ ಇರುವ ನೆಮ್ಮದಿ ಕೇಂದ್ರದಲ್ಲಿ ಹತ್ತಾರು ಅಂಗಡಿಗಳಿವೆ. ಆದರೆ, ಅವುಗಳಿಗೆ ಕಲ್ಪಿಸಲಾದ ವಿದ್ಯುತ್ ಸಂಪರ್ಕಕ್ಕೆ ಒಂದೇ ಮೀಟರ್ ಇದೆ. ಹೀಗಾಗಿ ಒಬ್ಬರು ಬಿಲ್ ಪಾವತಿಸದಿದ್ದರೂ ಇಡೀ ಕಾಂಪ್ಲೆಕ್ಸ್ಗೆ ವಿದ್ಯುತ್ ಮಾಡಲಾಗುತ್ತಿದೆ. ವಿಷಯ ನಗರಸಭೆ ಗಮನಕ್ಕೆ ತಂದರೂ ಯಾವುದೇ ಪ್ರಯೋಜನವಾಗಿಲ್ಲ ಎಂದು ಹೇಳುತ್ತಾರೆ.
ನೆಮ್ಮದಿ ಕೇಂದ್ರಕ್ಕೆ ಪ್ರತ್ಯೇಕ ಮೀಟರ್ ಅಳವಡಿಸಿ ವಿದ್ಯುತ್ ಕಡಿತವಾಗದಂತೆ ನೋಡಿಕೊಳ್ಳಬೇಕು. ಅಗತ್ಯ ಸಿಬ್ಬಂದಿ ಒದಗಿಸಬೇಕು. ಹಾಗೂ ತ್ವರಿತಗತಿಯಲ್ಲಿ ಕೆಲಸ ಆಗುವಂತೆ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸುತ್ತಾರೆ ನ್ಯೂ ಭಗತ್ಸಿಂಗ್ ಯುವ ಕ್ರಾಂತಿಕಾರಿ ಯುವಕ ಸಂಘದ ಅಧ್ಯಕ್ಷ ಸುನೀಲ ಭಾವಿಕಟ್ಟಿ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.