ಭಾಲ್ಕಿ: ಮೂರು ದಿನಗಳಿಂದ ಸುರಿಯುತ್ತಿರುವ ಮಳೆಯಿಂದ ತಾಲ್ಲೂಕಿನ ಕಣಜಿ ಗ್ರಾಮದ ಪಶು ಚಿಕಿತ್ಸಾಲಯ ಕೇಂದ್ರದಲ್ಲಿ ನೀರು ನಿಂತಿದ್ದು, ರೈತರಿಗೆ ಮತ್ತು ಜಾನುವಾರುಗಳಿಗೆ ತೊಂದರೆ ಆಗುತ್ತಿದೆ.
‘ಚಿಕಿತ್ಸಾ ಕೇಂದ್ರಕ್ಕೆ ಹುಣಜಿ (ಕೆ), ನೆಲವಾಡ, ಕಟ್ಟಿ ತೂಗಾಂವ ಗ್ರಾಮಗಳಿಂದ ರೈತರು ದನಗಳಿಗೆ ಚಿಕಿತ್ಸೆ ಕೊಡಿಸಲು ನಿತ್ಯವೂ ಬರುತ್ತಾರೆ. ಆದರೆ, ಮಳೆಗಾಲ ಶುರು ಆದಾಗಿನಿಂದ ಆಗಾಗ್ಗೆ ಚಿಕಿತ್ಸಾ ಕೇಂದ್ರದಲ್ಲಿ ನೀರು ಸಂಗ್ರಹವಾಗುತ್ತಿದೆ. ಇದರಿಂದ ವೈದ್ಯರಿಗೂ ಕೇಂದ್ರದ ಒಳಗೆ ಹೋಗಲು ಆಗುತ್ತಿಲ್ಲ’ ಎಂದು ಎಂದು ರೈತರಾದ ಹುಲೇಪ್ಪಾ ಮಾನಕಾರ ತಿಳಿಸಿದರು.
‘ಗ್ರಾಮ ಪಂಚಾಯಿತಿ ವತಿಯಿಂದ ಚಿಕಿತ್ಸಾ ಕೇಂದ್ರದಲ್ಲಿ ಮರಬು (ಉಸುಕು) ಹಾಕುವಂತೆ ಸಾಕಷ್ಟು ಬಾರಿ ಮನವಿ ಮಾಡಲಾಗಿದೆ. ಆದರೆ, ಸಂಬಂಧಪಟ್ಟವರು ನಿರ್ಲಕ್ಷ್ಯ ತೋರುತ್ತಿದ್ದಾರೆ. ಹಿರಿಯ ಕೂಡಲೇ ಕ್ರಮ ಕೈಗೊಂಡು ಪಶು ಚಿಕಿತ್ಸಾ ಕೇಂದ್ರ ರೈತರಿಗೆ ಸದ್ಬಳಕೆಯಾಗುವಂತೆ ಕ್ರಮ ಕೈಗೊಳ್ಳಬೇಕು. ಇಲ್ಲದಿದ್ದರೆ, ಉಗ್ರ ಸ್ವರೂಪದ ಪ್ರತಿಭಟನೆ ನಡೆಸುತ್ತೇವೆ’ ಎಂದು ಅವರು ಎಚ್ಚರಿಕೆ ನೀಡಿದ್ದಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.