ADVERTISEMENT

ನೀರಿನ ಸಮಸ್ಯೆ ನೀಗಿಸಿದ ಜೆಡಿಎಸ್‌ ಕಾರ್ಯಕರ್ತ

ತುಂಗಭದ್ರೆ ಬರಿದಾದ ಹಿನ್ನೆಲೆಯಲ್ಲಿ ನೀರಿಗೆ ಹಾಹಾಕಾರ

​ಪ್ರಜಾವಾಣಿ ವಾರ್ತೆ
Published 13 ಮಾರ್ಚ್ 2018, 10:26 IST
Last Updated 13 ಮಾರ್ಚ್ 2018, 10:26 IST
ಲಕ್ಷ್ಮೇಶ್ವರದ ವಾರ್ಡ್‌ವೊಂದರಲ್ಲಿ ನೀರು ಪೂರೈಸುತ್ತಿರುವ ಝಾಕೀರ್‌ಹುಸೇನ್‌ ಹವಾಲ್ದಾರ್‌
ಲಕ್ಷ್ಮೇಶ್ವರದ ವಾರ್ಡ್‌ವೊಂದರಲ್ಲಿ ನೀರು ಪೂರೈಸುತ್ತಿರುವ ಝಾಕೀರ್‌ಹುಸೇನ್‌ ಹವಾಲ್ದಾರ್‌   

ಲಕ್ಷ್ಮೇಶ್ವರ: ತುಂಗಭದ್ರಾ ನದಿ ಬತ್ತಿರುವ ಹಿನ್ನೆಲೆಯಲ್ಲಿ ಇಲ್ಲಿನ ಜೆಡಿಎಸ್ ಕಾರ್ಯಕರ್ತ ಝಾಕೀರ್‌ ಹುಸೇನ್ ಹವಾಲ್ದಾರ ಅವರು ಉಚಿತ ನೀರು ಪೂರೈಸುವ ಮೂಲಕ ಜನರ ಮೆಚ್ಚುಗೆಗೆ ಕಾರಣರಾಗಿದ್ದಾರೆ.

ಪಟ್ಟಣದ ವಾರ್ಡ್‌ ನಂಬರ್ 1 ಮತ್ತು 5ರಲ್ಲಿ ಮೂರು ಟ್ಯಾಂಕರ್‌ಗಳಲ್ಲಿ ಉಚಿತ ನೀರು ಪೂರೈಸಿದ ಅವರು ಸೋಮವಾರ ವಾರ್ಡ್‌ ನಂಬರ್‌ 15ರಲ್ಲಿ ನೀರು ಪೂರೈಕೆಗೆ ವ್ಯವಸ್ಥೆ ಮಾಡಿದ್ದಾರೆ.

ತುಂಗಭದ್ರಾ ನದಿಯಲ್ಲಿ ನೀರಿಲ್ಲದ ಕಾರಣ ಕಳೆದ 20 ದಿನಗಳಿಂದ ಪಟ್ಟಣದ ಜನತೆ ನೀರಿನ ಸಮಸ್ಯೆಯಿಂದ ಬಳಲುತ್ತಿದ್ದಾರೆ. ಕೆಲ ವಾರ್ಡ್‌ಗಳಲ್ಲಿ ನೀರಿನ ಸಮಸ್ಯೆ ತೀವ್ರವಾಗಿದ್ದು ಅಲ್ಲಿನ ನಿವಾಸಿಗಳು ನೀರಿಗಾಗಿ ಕಂಡ ಕಂಡಲ್ಲಿ ಕೊಡಗಳನ್ನು ಹಿಡಿದುಕೊಂಡು ಅಲೆಯುತ್ತಿರುವುದು ಸಾಮಾನ್ಯ ದೃಶ್ಯವಾಗಿದೆ.

ADVERTISEMENT

ಝಾಕೀರ್‌ಹುಸೇನ್‌ ಹವಾಲ್ದಾರ್‌ ಸಂಜೆ 5ರಿಂದ ರಾತ್ರಿ 11ರವರೆಗೆ ಪ್ರತಿ ಟ್ಯಾಂಕ್‌ಗೆ ₹100 ಕೊಟ್ಟು ನೀರನ್ನು ಖರೀದಿಸಿ ಪಟ್ಟಣದ ವಿವಿಧ ವಾರ್ಡ್‌ಗಳ ಜನರಿಗೆ ಪೂರೈಸುತ್ತಿದ್ದಾರೆ.

‘ಝಾಕೀರ್‌ ಅವರಂತೆ ಇತರ ಯುವಕರು ಸಮಾಜ ಸೇವೆಗೆ ಮುಂದಾಗಬೇಕಾದ ಅಗತ್ಯ ಇದೆ. ಕಷ್ಟದಲ್ಲಿದ್ದವರಿಗೆ ಸೇವೆ ಮಾಡುವುದೇ ದೇವರ ಪೂಜೆ’ ಎಂದು ಪದ್ಮನಾಭ ಶೆಟ್ಟಿ ಮತ್ತು ಪದ್ಮರಾಜ ಪಾಟೀಲ ಖುಷಿ ವ್ಯಕ್ತಪಡಿಸುತ್ತಾರೆ.

*
ನೀರಡಿಸಿದವರಿಗೆ ನೀರು ಕೊಡುವುದು ಪುಣ್ಯದ ಕೆಲಸ. ಇಂಥ ಭಾಗ್ಯ ಕರುಣಿಸಿದ ದೇವರು ದೊಡ್ಡವನು.
–ಝಾಕೀರ್‌ ಹುಸೇನ್ ಹವಾಲ್ದಾರ, ಜೆಡಿಎಸ್‌ ಕಾರ್ಯಕರ್ತ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.