ADVERTISEMENT

`ನೊಂದವರಿಗೆ ನೆರವಾಗುವುದೇ ಸಾರ್ಥಕ'

​ಪ್ರಜಾವಾಣಿ ವಾರ್ತೆ
Published 1 ಫೆಬ್ರುವರಿ 2013, 10:27 IST
Last Updated 1 ಫೆಬ್ರುವರಿ 2013, 10:27 IST
ಕಮಲನಗರ ಸಮೀಪದ ಠಾಣಾಕುಶನೂರ್ ಗ್ರಾಮದ ಜವಾಹರಲಾಲ್ ನೆಹರು ತಾಂತ್ರಿಕ ವಿದ್ಯಾಲಯ ಆವರಣದಲ್ಲಿ ಗುರುವಾರ ಅಧ್ಯಾತ್ಮಿಕ ಸೇವಾ ಸಮಿತಿ ಹಮ್ಮಿಕೊಂಡಿದ್ದ ಒಂದು ದಿನದ `ಅಧ್ಯಾತ್ಮಿಕ ಪ್ರವಚನ' ಕಾರ್ಯಕ್ರಮವನ್ನು ಡಾ.ಬಸವಲಿಂಗ ಪಟ್ಟದ್ದೇವರು ಉದ್ಘಾಟಿಸಿದರು.
ಕಮಲನಗರ ಸಮೀಪದ ಠಾಣಾಕುಶನೂರ್ ಗ್ರಾಮದ ಜವಾಹರಲಾಲ್ ನೆಹರು ತಾಂತ್ರಿಕ ವಿದ್ಯಾಲಯ ಆವರಣದಲ್ಲಿ ಗುರುವಾರ ಅಧ್ಯಾತ್ಮಿಕ ಸೇವಾ ಸಮಿತಿ ಹಮ್ಮಿಕೊಂಡಿದ್ದ ಒಂದು ದಿನದ `ಅಧ್ಯಾತ್ಮಿಕ ಪ್ರವಚನ' ಕಾರ್ಯಕ್ರಮವನ್ನು ಡಾ.ಬಸವಲಿಂಗ ಪಟ್ಟದ್ದೇವರು ಉದ್ಘಾಟಿಸಿದರು.   

ಕಮಲನಗರ: ಚಳಿಯಲ್ಲಿ ನಡಗುತ್ತಿರುವವರಿಗೆ ಕಂಬಳಿ, ಹಸಿದವನಿಗೆ ಅನ್ನ, ನಡೆಯಲಾರದವರನ್ನು ಕೈಹಿಡಿದು ನಡೆಸುವುದು, ಕಣ್ಣೀರು ಕಂಡರೆ ಒರೆಸುವುದು, ನೊಂದವರಿಗೆ ನೆರವು ನೀಡುವ ಗುಣಗಳನ್ನು ಮೈಗೂಡಿಸಿಕೊಳ್ಳುವುದರಿಂದ ಜೀವನ ಸಾರ್ಥಕವಾಗುತ್ತದೆ ಎಂದು ವಿಜಾಪುರ ಜ್ಞಾನಯೋಗಾಶ್ರಮದ ಸಿದ್ದೇಶ್ವರ ಸ್ವಾಮೀಜಿ ನುಡಿದರು.

ಇಲ್ಲಿಗೆ ಸಮೀಪದ ಠಾಣಾಕುಶನೂರ್ ಗ್ರಾಮದ ಜವಾಹರಲಾಲ್ ನೆಹರು ತಾಂತ್ರಿಕ ವಿದ್ಯಾಲಯ ಆವರಣದಲ್ಲಿ ಗುರುವಾರ ಅಧ್ಯಾತ್ಮಿಕ ಸೇವಾ ಸಮಿತಿ ಹಮ್ಮಿಕೊಂಡಿದ್ದ ಒಂದು ದಿನದ `ಅಧ್ಯಾತ್ಮಿಕ ಪ್ರವಚನ' ಕಾರ್ಯಕ್ರಮದಲ್ಲಿ ಆಶೀರ್ವಚನ ನೀಡಿದರು.
ಈ ಕ್ಷಣಿಕವಾದ ಜೀವನದಲ್ಲಿ ಒಳ್ಳೆಯ ಕಾರ್ಯಗಳನ್ನು ಮಾಡಿ, ಪರೋಪಕಾರ ಗುಣಗಳನ್ನು ಮೈಗೂಡಿಸಿಕೊಂಡು ತ್ಯಾಗಿಗಳಾಗಿ, ಇದರಿಂದ ನಮಗರಿವಿಲ್ಲದೇ ಅಪಾರ ಬಲ, ಆತ್ಮವಿಶ್ವಾಸ ವೃದ್ಧಿಯಾಗುತ್ತದೆ ಎಂದರು.
ಕಾರ್ಯಕ್ರಮವನ್ನು ಡಾ.ಬಸವಲಿಂಗ ಪಟ್ಟದ್ದೇವರು ಉದ್ಘಾಟಿಸಿ ಮಾತನಾಡಿ, ಅದ್ದೂರಿ, ಆಡಂಬರವಿಲ್ಲದೇ ನಿರಾಭಾರಿಯಾಗಿ ಅಧ್ಯಯನಶೀಲತೆಯನ್ನು ಮೈಗೂಡಿಸಿಕೊಂಡಿರುವ ಸಿದ್ದೇಶ್ವರ ಸ್ವಾಮಿಗಳು, ಸಂಸ್ಕೃತಿ, ಸಂಸ್ಕಾರ ಹಾಗೂ ಮಾನವೀಯ ಮೌಲ್ಯಗಳನ್ನು ಸರಳ ನುಡಿಗಳಲ್ಲಿ ತಿಳಿ ಹೇಳುವ ಪ್ರಭುತ್ವ ಸಾಧಿಸಿದ್ದು, ಅವರ ಸರಳ ಜೀವನದ ಆದರ್ಶಗಳು ಎಲ್ಲರಿಗೂ ಮಾದರಿಯಾಗಿವೆ ಎಂದರು.
ಠಾಣಾಕುಶನೂರ್ ವಿರಕ್ತ ಮಠದ ಸಿದ್ಧಲಿಂಗ ಮಹಾಸ್ವಾಮಿಗಳು, ಶಾಸಕ ಪ್ರಭು ಚವ್ಹಾಣ, ಜಿಲ್ಲಾ ಪಂಚಾಯಿತಿ ಸದಸ್ಯ ಧೂಳಪ್ಪ ಸುರಂಗೆ, ನೀಲಮ್ಮ ವಡ್ಡೆ, ಅನಿತಾ ದಿಲೀಪ, ರವೀಂದ್ರ ಮೀಸೆ, ಚಂದ್ರಪಾಲ ಪಾಟೀಲ, ಮಾದಪ್ಪಾ ಜೀರ್ಗೆ, ಓಂಕಾರ ಸ್ವಾಮಿ, ಜಗನ್ನಾಥ ಜೀರ್ಗೆ, ಶಿವಕುಮಾರ ಸಜ್ಜನಶೆಟ್ಟಿ, ಉಮೇಶ ಜೀರ್ಗೆ, ಮಹೇಶ ಬೋಚರೆ, ಉಮಾಕಾಂತ ಬಿರಾದಾರ್, ಬಾಬುರಾವ್ ವಾಘಮಾರೆ ಇದ್ದರು.
ಮುಖಂಡ ರಾಮಶೆಟ್ಟಿ ಪನ್ನಾಳೆ ಸ್ವಾಗತಿಸಿದರು. ಶಿವಶರಣಪ್ಪ ವಲ್ಲೆಪುರೆ ವಂದಿಸಿದರು. ಸಂಜೀವಕುಮಾರ ಜುಮ್ಮಾ ನಿರೂಪಿಸಿದರು.
ಇದೇ ಸಂದರ್ಭದಲ್ಲಿ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತರಾದ ಡಾ.ಬಸವಲಿಂಗ ಪಟ್ಟದ್ದೇವರಿಗೆ ಠಾಣಾಕುಶನೂರ್ ಗ್ರಾಮಸ್ಥರಿಂದ ನಾಗರಿಕ ಸನ್ಮಾನ ಜರುಗಿತು. ಕಾರ್ಯಕ್ರಮದಲ್ಲಿ ಠಾಣಾಕುಶನೂರ್ ಸುತ್ತಲಿನ ಅನೇಕ ಗ್ರಾಮದ ಸುಮಾರು 3 ಸಾವಿರ ಜನ  ಪಾಲ್ಗೊಂಡಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT