ಬೀದರ್: ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ನೌಕರರ ಬಡ್ತಿ ಮೀಸಲಾತಿಯನ್ನು ಸಂರಕ್ಷಿಸಲು ರಾಜ್ಯ ಸರ್ಕಾರ ಸುಪ್ರೀಂಕೋರ್ಟ್ಗೆ ತಕ್ಷಣ ಮರುಪರಿಶೀಲನಾ ಅರ್ಜಿ ಸಲ್ಲಿಸಬೇಕು ಎಂದು ಆಗ್ರಹಿಸಿ ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡದ ವಿವಿಧ ಸಂಘಟನೆಗಳ ಒಕ್ಕೂಟದ ಸದಸ್ಯರು ನಗರದಲ್ಲಿ ಮಂಗಳವಾರ ಮೆರವಣಿಗೆ ನಡೆಸಿದರು.
ಜನವಾಡ ರಸ್ತೆಯಲ್ಲಿರುವ ಹಿಂದುಳಿದ ವರ್ಗ ಹಾಗೂ ಅಲ್ಪಸಂಖ್ಯಾತರ ವಿದ್ಯಾರ್ಥಿ ವಸತಿ ನಿಲಯದ ಆವರಣದಿಂದ ಮೆರವಣಿಗೆ ಆರಂಭಿಸಿ ನೀಲಿ ಧ್ವಜ ಹಾಗೂ ಪೋಸ್ಟರ್ಗಳನ್ನು ಹಿಡಿದುಕೊಂಡು ಘೋಷಣೆಗಳನ್ನು ಕೂಗುತ್ತ ಸುಡು ಬಿಸಿಲಲ್ಲೇ ಜಿಲ್ಲಾಧಿಕಾರಿ ಕಚೇರಿ ಆವರಣಕ್ಕೆ ಬಂದರು.
ನಂತರ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಬರೆದ ಮನವಿಪತ್ರವನ್ನು ಜಿಲ್ಲಾಧಿಕಾರಿ ಕಚೇರಿಯ ಅಧಿಕಾರಿಗೆ ಸಲ್ಲಿಸಿದರು. ರೈತ ಮುಖಂಡ ಮಾರುತಿ ಮಾನ್ಪಡೆ ಒಕ್ಕೂಟದ ಸದಸ್ಯರನ್ನು ಉದ್ದೇಶಿಸಿ ಮಾತನಾಡಿದರು.
ಬಳಿರಾಮ ಮಹಾರಾಜ, ಕಾಂತ ಸ್ವಾಮೀಜಿ, ಒಕ್ಕೂಟದ ಜಿಲ್ಲಾ ಅಧ್ಯಕ್ಷ ಬಾಬುರಾವ್ ಪಾಸ್ವಾನ್, ಜಿಲ್ಲಾ ಉಪಾಧ್ಯಕ್ಷ ಬಸವರಾಜ ಪವಾರ್, ಕಲ್ಯಾಣರಾವ್ ಭೋಸ್ಲೆ, ರಾಜಕುಮಾರ ಮೂಲಭಾರತಿ, ಒಕ್ಕೂಟದ ಜಿಲ್ಲಾ ಸಹ ಕಾರ್ಯದರ್ಶಿ ಅರುಣ ಕುದರೆ, ಶ್ರೀಪತರಾವ್ ದೀನೆ, ಶಿವಕುಮಾರ ನೀಲಿಕಟ್ಟಿ, ರಾಜಕುಮಾರ ಬನ್ನೇರ್, ರಘುನಾಥ ಗಾಯಕವಾಡ, ಮಾರುತಿ ಸೂರ್ಯವಂಶಿ, ಎಂ.ಪಿ.ಮುದಾಳೆ, ಗೋವರ್ಧನ ರಾಠೋಡ, ರಾಮಚಂದ್ರ ಸುಡಗಾಡ, ಶಾಲಿವಾನ ಬಡಿಗೇರ, ಪ್ರದೀಪ ನಾಟಿಕರ್ ಇದ್ದರು.
ಔರಾದ್ ವರದಿ: ಪರಿಶಿಷ್ಟ ಜಾತಿ ಪಂಗಡ ಬಡ್ತಿ ಮೀಸಲು ಕುರಿತಂತೆ ಸುಪ್ರೀಂ ಕೋರ್ಟ್ಗೆ ಮೇಲ್ಮನವಿ ಸಲ್ಲಿಸಲು ಆಗ್ರಹಿಸಿ ದಲಿತ ಸಂಘರ್ಷ ಸಮಿತಿ ಕಾರ್ಯಕರ್ತರು ಮಂಗಳವಾರ ಇಲ್ಲಿನ ಬಸವೇಶ್ವರ ವೃತ್ತದಿಂದ ಕನ್ನಡಾಂಬೆ ವೃತ್ತದವರೆಗೆ ಮೆರವಣಿಗೆ ನಡೆಸಿದರು.
‘ಮೀಸಲಾತಿಗೆ ಸಂಬಂಧಿಸಿದಂತೆ ಕೋರ್ಟ್ಗೆ ರಾಜ್ಯ ಸರ್ಕಾರ ವಾಸ್ತವಿಕ ಮಾಹಿತಿ ಸಲ್ಲಿಸದ ಕಾರಣ ರಾಜ್ಯದ ದಲಿತ ನೌಕರರು ಹಿಂಬಡ್ತಿ ಎದುರಿಸಬೇಕಿದೆ.
ಸರ್ಕಾರ ಕೋರ್ಟ್ಗೆ ವಾಸ್ತವಿಕ ಮಾಹಿತಿ ಜತೆ ಮೇಲ್ಮನವಿ ಸಲ್ಲಿಸಬೇಕು’ ಎಂದು ಆಗ್ರಹಿಸಿದರು. ಸಮಿತಿ ಪ್ರಮುಖ ಧನರಾಜ ಮುಸ್ತಾಪುರ, ಸುಭಾಷ ಲಾಧಾ, ಶಿವಕುಮಾರ ಕಾಂಬಳೆ, ಗಣಪತಿ ವಾಸುದೇವ, ತಾನಾಜಿ ತೋರಣೆಕರ್, ಸಂಜು ಜಾಧವ್ ಇದ್ದರು.
****
ಒಕ್ಕೂಟದ ಪ್ರಮುಖ ಬೇಡಿಕೆಗಳು
ಪರಿಶಿಷ್ಟ ಜಾತಿ ಮತ್ತು ಪಂಗಡ ನೌಕರರಿಗೆ ಬಡ್ತಿಯಲ್ಲಿ ರಾಜ್ಯ ಸರ್ಕಾರ ಕಲ್ಪಿಸಿದ್ದ ಶೇ 18 ರಷ್ಟು ಮೀಸಲಾತಿಯನ್ನು ಸುಪ್ರೀಂಕೋರ್ಟ್ ರದ್ದುಪಡಿಸಿದ ಕಾರಣ 16,000 ನೌಕರರು ಹಿಂಬಡ್ತಿ ಪಡೆಯುವ ಆತಂಕದಲ್ಲಿದ್ದಾರೆ. ಕೇಂದ್ರ ಸರ್ಕಾರ ಮಧ್ಯ ಪ್ರವೇಶಿಸಿ ನ್ಯಾಯ ಒದಗಿಸಬೇಕು. ಸುಪ್ರೀಂಕೋರ್ಟ್ ತಾನು ನೀಡಿದ ಆದೇಶದಲ್ಲಿನ ನ್ಯೂನ್ಯತೆಗಳನ್ನು ಸರಿಪಡಿಸಬೇಕು.
ಲೋಕಸಭೆಯಲ್ಲಿ ನನೆಗುದಿಗೆ ಬಿದ್ದಿರುವ ಬಡ್ತಿ ಮೀಸಲಾತಿ ಮಸೂದೆಯನ್ನು ಜಾರಿಗೊಳಿಸಲು ಕೇಂದ್ರ ಸರ್ಕಾರ ಸಂವಿಧಾನದ 117ನೇ ತಿದ್ದುಪಡಿ ವಿಧೇಯಕ ಅಂಗೀಕರಿಸಿ ಆದೇಶ ಹೊರಡಿಸಬೇಕು. ಬ್ಯಾಕ್ಲಾಗ್ ಹುದ್ದೆಗಳನ್ನು ಭರ್ತಿ ಮಾಡಲು ಕ್ರಮ ತೆಗೆದುಕೊಳ್ಳಬೇಕು.
****
ಎಸ್ಸಿ, ಎಸ್ಟಿ, ಹಿಂದುಳಿದ ಹಾಗೂ ಅಲ್ಪಸಂಖ್ಯಾತ ಸಮುದಾಯದವರು ದೇಶದಲ್ಲಿ ಶೇ 85ರಷ್ಟು ಇದ್ದರೂ ಉನ್ನತ ಹುದ್ದೆಗಳಲ್ಲಿ ಇರುವ ಅವರ ಪ್ರಮಾಣ ಶೇ 23ರಷ್ಟು.
ಮಾರುತಿ ಮಾನ್ಪಡೆ, ರೈತ ಮುಖಂಡ