ADVERTISEMENT

ಪಾಟೀಲಗೆ ಮಾಹಿತಿ ಕೊರತೆ: ಶಾಸಕ ಪಾಟೀಲ

​ಪ್ರಜಾವಾಣಿ ವಾರ್ತೆ
Published 3 ಆಗಸ್ಟ್ 2012, 5:15 IST
Last Updated 3 ಆಗಸ್ಟ್ 2012, 5:15 IST

ಹುಮನಾಬಾದ್: ರಾಜ್ಯದಲ್ಲಿ ಕೈಗೊಳ್ಳುವ ಅಭಿವೃದ್ಧಿ ಕಾರ್ಯಗಳಿಗೆ ಪಕ್ಷ ಅನುದಾನ ನೀಡುವುದಿಲ್ಲ. ರಾಜ್ಯದಲ್ಲಿ ಅಸ್ತಿತ್ವದಲ್ಲಿರುವ ಸರ್ಕಾರ ಎನ್ನುವ ಕುರಿತು ಜಿಲ್ಲಾ ಪಂಚಾಯಿತಿ ಮಾಜಿ ಅಧ್ಯಕ್ಷರೂ ಆದ ರಾಜ್ಯ ಬಿಜೆಪಿ ಮುಖಂಡ ಪದ್ಮಾಕರ ಪಾಟೀಲ ಅವರಿಗೆ ಕನಿಷ್ಠ ಮಾಹಿತಿ ಇಲ್ಲದೇ ಇರುವುದು ನೋವಿನ ಸಂಗತಿ ಎಂದು ಶಾಸಕ ರಾಜಶೇಖರ ಪಾಟೀಲ ಹೇಳಿದರು.
 
ಮಾಜಿ ಶಾಸಕ ರಾಜೇಂದ್ರ ವರ್ಮಾ ನೇತೃತ್ವದಲ್ಲಿ ತಾಲ್ಲೂಕಿನ ಚಂದನಹಳ್ಳಿ ಗ್ರಾಮದಲ್ಲಿ ಈಚೆಗೆ ನಡೆದ ಬಿಜೆಪಿ ಕಾರ್ಯಕರ್ತರ ಸಭೆ ಬಳಿಕ- ಹುಮನಾಬಾದ್ ಕ್ಷೇತ್ರದಲ್ಲಿ ಶಾಸಕ ಪಾಟೀಲ ಅವರು ಯಾವುದೇ ಹೇಳಿಕೊಳ್ಳುವಂತ ಅಭಿವೃದ್ಧಿ ಕಾರ್ಯ ಕೈಗೊಂಡಿಲ್ಲ. ಈವರಗೆ ನಡೆದ ಅಭಿವೃದ್ಧಿಗೆ ರಾಜ್ಯದ ಬಿಜೆಪಿ ಸರ್ಕಾರ ಅನುದಾನ ನೀಡಿದೆ ಎಂದು ಸುದ್ದಿಗಾರರಿಗೆ ಹೇಳಿಕೆ ನೀಡಿದ್ದಕ್ಕೆ ಪ್ರತಿಯಾಗಿ ಶಾಸಕ ರಾಜಶೇಖರ ಪಾಟೀಲ ಸುದ್ದಿಗಾರರ ಎದುರು ಮೇಲಿನಂತೆ ಪ್ರತಿಕಿಯಿಸಿದ್ದಾರೆ.

ಇನ್ನೂ ಜಿಲ್ಲಾ ಪಂಚಾಯಿತಿ ಸದಸ್ಯ ಹಾಗೂ ಅಧ್ಯಕ್ಷರಾಗಿ ಸೇವೆ ಸಲ್ಲಿಸಿದ ಅನುಭವ ಇರುವ ಹಿನ್ನೆಲೆಯಲ್ಲಿ ಸುಭಾಷ ಕಲ್ಲೂರ ಅವರು ಟಿಕೇಟ ಆಕಾಂಕ್ಷಿಗಳ ಪಟ್ಟಿಯಿಂದ ದೂರ ಸರಿದರೆ ಈ ಕ್ಷೇತ್ರದಿಂದ ಸ್ಪರ್ಧಿಸುವುದಕ್ಕೆ  ತಾವು ಮಾನಸಿಕ ಸಿದ್ಧತೆ ಮಾಡಿಕೊಂಡಿರುವುದಾಗಿ ಹೇಳಿಕೆ ನೀಡಿರುವುದಕ್ಕೆ ಶಾಸಕ ಪಾಟೀಲ ಪ್ರತಿಕ್ರಿಯೆ ನೀಡಿದ್ದು ಹೀಗೆ ಪದ್ಮಾಕರ ಪಾಟೀಲ ಅವರು ಜಿಲ್ಲಾ ಪಂಚಾಯಿತಿ ಸದಸ್ಯ ಹಾಗೂ ಅಧ್ಯಕ್ಷರಾಗಿ ಮಾಡಿರುವ ಅಭಿವೃದ್ಧಿ ಕಾರ್ಯ ನೋಡಿಯೇ ಕ್ಷೇತ್ರದ ಜನ ಅವರ ಪತ್ನಿಯನ್ನು ದುಬಲಗುಂಡಿ ಕ್ಷೇತ್ರದಿಂದ  ಸೋಲಿಸಿರಬಹುದೆ ಎಂದು ಶಾಸಕ ಪಾಟೀಲ ವ್ಯಂಗವಾಗಿ ನುಡಿದರು. 

ಸುಲ್ತಾನಬಾದ್‌ವಾಡಿ ಮೊದಲಾದ ಗ್ರಾಮಗಳಲ್ಲಿ ನಡೆದ ಸುವರ್ಣ ಗ್ರಾಮ ಯೋಜನೆ ಕಾಮಗಾರಿ ಚಾಲನೆ ಕಾರ್ಯಕ್ರಮದಲ್ಲಿ ಭಾಗವಹಿಸಿ, ಶಾಸಕ ರಾಜಶೇಖರ ಪಾಟೀಲ ಅತ್ಯುತ್ತಮ ಕಾರ್ಯ ಮಾಡುತ್ತಿದ್ದಾರೆ ಎನ್ನುವುದಕ್ಕೆ ಘಾಟಬೋರಾಳ ಕ್ಷೇತ್ರಲ್ಲಿ ಅತೀ ಹೆಚ್ಚು ಗ್ರಾಮಗಳನ್ನು ಸುವರ್ಣ ಗ್ರಾಮೋದಯಕ್ಕೆ ಆಯ್ಕೆ ಮಾಡಿಕೊಂಡಿರುವುದೇ ತಾಜಾ ನಿದರ್ಶನ ಎಂದು ಕೆಲವೇ ತಿಂಗಳ ಹಿಂದೆ ಹೇಳಿದ ಮಾತು ಇಷ್ಟೊಂದು ಬೇಗನೆ ಮರೆತು ಹೋಗಿರುವುದು ನೋಡಿದರೇ ಬಹುತೇಕ ಅವರು ಮಾನಸಿಕ ಅಸ್ವಸ್ಥರಾದಂತೆ ಭಾಸವಾಗುತ್ತಿದೆ ಎಂದು ಲೇವಡಿ ಮಾಡಿದರು.  

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.