ADVERTISEMENT

ಫುಟ್‌ಪಾತ್ ಕೆಲಸ ಮತ್ತೆ ವಿಳಂಬ: ಆಕ್ರೋಶ

​ಪ್ರಜಾವಾಣಿ ವಾರ್ತೆ
Published 5 ನವೆಂಬರ್ 2012, 5:25 IST
Last Updated 5 ನವೆಂಬರ್ 2012, 5:25 IST

ಔರಾದ್:  ಪಟ್ಟಣದ ಕನ್ನಡಾಂಬೆ ವೃತ್ತದಿಂದ ಬಸ್ ನಿಲ್ದಾಣ ವರೆಗೆ ಅಲ್ಲಲ್ಲಿ ಫುಟ್‌ಪಾತ್ ಕಾಮಗಾರಿ ಹಾಗೆ ಉಳಿದಿರುವುದು ಪಟ್ಟಣ ಪಂಚಾಯ್ತಿ ಸದಸ್ಯರು ಮತ್ತು ಸಾರ್ವಜನಿಕರನ್ನು ಕರೆಳಿಸಿದೆ.

ಶನಿವಾರ ಇಲ್ಲಿಯ ಪ್ರವಾಸಿ ಮಂದಿರದಲ್ಲಿ ನಡೆದ ಸಭೆಯಲ್ಲಿ ನಿರ್ಮಿತಿ ಕೇಂದ್ರದವರು ಫುಟಪಾತ್ ಕಾಮಗಾರಿ ಬೇಗನೆ ಪೂರ್ಣಗೊಳಿಸದೆ ನೆನೆಗುದಿಗೆ ಹಾಕುತ್ತಿದ್ದಾರೆ ಎಂದು ಪಟ್ಟಣ ಪಂಚಾಯ್ತಿ ಕೆಲ ಸದಸ್ಯರು ಶಾಸಕರ ಎದರು ಅಸಮಾಧಾನ ವ್ಯಕ್ತಪಡಿಸಿದರು. ಮುಂದೆ ಪಟ್ಟಣ ಪಂಚಾಯ್ತಿ ಚುನಾವಣೆ ಬರುತ್ತಿವೆ. ಈ ರೀತಿ ಕಾಮಗಾರಿ ನೆನೆಗುದಿಗೆ ಬಿದ್ದರೆ ನಾವು ಜನರಿಗೆ ಏನು ಉತ್ತರ ಕೊಡಬೇಕು ಎಂದು ಸದಸ್ಯರೊಬ್ಬರು ತೀವ್ರ ಆಕ್ರೋಶ ವ್ಯಕ್ತಪಡಿಸಿದರು ಎಂದು ಗೊತ್ತಾಗಿದೆ.

ಈಗ ದೀಪಾವಳಿ ಹಬ್ಬ ಇರುವುದರಿಂದ ವ್ಯಾಪಾರಿಗಳು ಬಾಡಿಗೆ ಅಂಗಡಿ ಪಡೆಯುತ್ತಾದರೆ. ಫುಟಪಾತ್ ಕಾಮಗಾರಿ ಮುಗಿದರೆ ಒಂದು ಹಂತಕ್ಕೆ ಬಂದು ವ್ಯಾಪಾರ ವಹಿವಾಟಕ್ಕೂ ಅನುಕೂಲವಾಗುತ್ತದೆ. ಈ ವಿಷಯ ಜಿಲ್ಲಾಧಿಕಾರಿಗಳ ಗಮನಕ್ಕೆ ತಂದು ಕಾಮಗಾರಿ ಪೂರ್ಣಗೊಳಿಸುವಂತೆ ಶಾಸಕ ಪ್ರಭು ಚವ್ಹಾಣ್ ಮುಖ್ಯಾಧಿಕಾರಿಗಳಿಗೆ ಸೂಚಿಸಿದರು.

ಆದಷ್ಟು ಬೇಗ ಕಾಮಗಾರಿ ಮುಗಿಸುವಂತೆ ನಿರ್ಮಿತಿ ಕೇಂದ್ರದ ಅಧಿಕಾರಿಗೆ ಸೂಚನೆ ನೀಡಿದ್ದೇವೆ. ಕಾಮಗಾರಿ ವಿಳಂಬ ಹಾಗೂ ಅದರಿಂದ ಜನರಿಗೆ ಆಗುತ್ತಿರುವ ತೊಂದರೆ ಕುರಿತು ಜಿಲ್ಲಾಧಿಕಾರಿಗಳಿಗೆ ಲಿಖಿತ ಮನವಿ ಸಲ್ಲಿಸಲಾಗುವುದು ಎಂದು ಪಟ್ಟಣ ಪಂಚಾಯ್ತಿ ಮುಖ್ಯಾಧಿಕಾರಿ ಮಹ್ಮದ್ ಯೂಸುಫ್ ತಿಳಿಸಿದ್ದಾರೆ.

ಅಂಗಡಿ ಟೆಂಡರ್: ಪಟ್ಟಣದ ಗಣೇಶ ಮಾರುಕಟ್ಟೆಯಲ್ಲಿ ಒಟ್ಟು 17 ಹೊಸ ಅಂಗಡಿ ನಿರ್ಮಿಸಲಾಗಿದೆ. ಕಾಮಗಾರಿ ಅಂತಿಮ ಹಂತದಲ್ಲಿದ್ದು, 15 ದಿನಗಳಲ್ಲಿ ಪೂರ್ಣಗೊಳಿಸಿ ವ್ಯಾಪಾರಿಗಳಿಗೆ ಹರಾಜು ಮಾಡಲಾಗುವುದು. ಇತರೆ ಅಂಗಡಿಗಳ ಕೆಲಸ ಶುರುವಾಗಲಿದೆ ಎಂದು ಹೇಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT