ADVERTISEMENT

ಬಂಪರ್ ಬೆಳೆ: ದುಬಾರಿ ಕಳೆ

​ಪ್ರಜಾವಾಣಿ ವಾರ್ತೆ
Published 7 ಆಗಸ್ಟ್ 2012, 7:50 IST
Last Updated 7 ಆಗಸ್ಟ್ 2012, 7:50 IST

ಭಾಲ್ಕಿ: ತಾಲ್ಲೂಕಿನಾದ್ಯಂತ ಈ ಸಲ ಮುಂಗಾರು ಫಸಲು ಉತ್ತಮವಾಗಿ ಬಂದಿದೆ. ಆದರೆ ಬೆಳೆಗಳ ಮಧ್ಯದಲ್ಲಿ ತೊಂದರೆಯಾಗಿರುವ ಕಳೆಯದ್ದೇ ಸಾಕಷ್ಟು ಚಿಂತೆ ಮಾಡಿದೆ. ಬೆಳೆಯನ್ನು ಸುಧಾರಿಸಲು ಕಳೆ ತೆಗೆಯಲು ಕಾರ್ಮಿಕರೇ ಸಿಗುತ್ತಿಲ್ಲ. ಸಿಕ್ಕರೂ ದಿನಗೂಲಿಗೆ ಯಾರೂ ಬರುತ್ತಿಲ್ಲ.
 
ಏನಿದ್ದರೂ ಎಕರೆಗೆ 4ಸಾವಿರದಿಂದ 8ಸಾವಿರದ ವರೆಗೆ ಗುತ್ತಿಗೆ ಪಡೆದು ಕಾರ್ಮಿಕರು ಬರುತ್ತಿದ್ದಾರೆ ಎಂಬುದು ರೈತರ ಆತಂಕ. 3 ಎಕರೆ ಜಮೀನು ಉಳ್ಳ ಒಬ್ಬ ರೈತನಿಗೆ ಬಿತ್ತನೆಗೆ 5 ಸಾವಿರ ಖರ್ಚಾದರೆ, ಈಗ ಕಳೆ ತೆಗೆಸಲು 15 ಸಾವಿರ ಹಣ ಖರ್ಚು ಮಾಡಬೇಕಿದೆ.

ಇದ್ದ ಊರಿನಲ್ಲಿ ಕಾರ್ಮಿಕರು ಸಿಗದಿದ್ದರೆ ಪರ ಊರಿನಿಂದ ಬಸ್ ಖರ್ಚು ಕೊಟ್ಟು ಜನರನ್ನು ತರುವಂಥ ಪರಿಸ್ಥಿತಿ ಹಲವೆಡೆ ನಿರ್ಮಾಣವಾಗಿದೆ. ಇನ್ನೂ ಔಷಧ ಹೊಡೆಸೋದು, ಆಳು ಕಾಳು, ನಿರ್ವಹಣೆ ಅಂದರೆ ರಾಶಿ ಮಾಡುವವರೆಗೆ 10 ಸಾವಿರವಾದರೂ ಖರ್ಚು ಬರುತ್ತಿದೆ ಎನ್ನುತ್ತಾರೆ ಮೇಳಕುಂದಾದ ರೈತ ಸಿದ್ದಪ್ಪ ಧನ್ನೆ. ರಾಶಿ ಮಾಡುವಾಗಲೂ ಸಹ ಸಣ್ಣ ರೈತರಿಗೆ ಆಳುಗಳ ಸಮಸ್ಯೆ ಇದ್ದೇ ಇದೆ.

ಅವರು ಹೇಳಿದಂತೆ ಕೊಟ್ಟರೆ ಅರ್ಧದಷ್ಟು ಕಾಳುಗಳು ಕೂಲಿಗೆ ಹೋಗುತ್ತವೆ. ಇಷ್ಟಾದ ಮೇಲೂ ಬೆಳೆ ಸಮೃದ್ಧವಾಗಿ ಬೆಳೆದು ರಾಶಿ ಮಾಡಿ ಧಾನ್ಯಗಳು ಮನೆಗೆ ಸೇರುವವರೆಗೆ ಖಾತ್ರಿ ಇಲ್ಲ. ಹೊಲಕ್ಕೆ ಹಾಕಿದ ಬಂಡವಾಳವಾದರೂ ವಾಪಸ್ ಬಂದರೆ ಸಾಕಪ್ಪ ಅನಿಸುತ್ತಿದೆ ಎನ್ನುತ್ತಾರೆ ರೈತ ಶಾನೂರ್‌ಸಾಬ್. ಒಟ್ಟಾರೆ ಈ ಸಲ ಬೆಳೆ ಸಮೃದ್ಧವಾಗಿ ಕಂಡರೂ ರೈತರಿಗೆ ಹೊಲದ ನಿರ್ವಹಣಾ ವೆಚ್ಚದ್ದೇ ಭಾರೀ ಚಿಂತೆಯ ವಿಷಯವಾಗಿದೆ.   

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.