ಕಮಲನಗರ: ಪಟ್ಟಣದಲ್ಲಿ ಬಸವ ಜಯಂತಿ ಅಂಗವಾಗಿ ಬಸವಾಭಿಮಾನಿಗಳು ಮಂಗಳವಾರ ಬೃಹತ್ ಬೈಕ್ ರ್ಯಾಲಿ ನಡೆಸಿದರು.
ಪಟ್ಟಣದ ಬಸವೇಶ್ವರ ಮಂದಿರದಿಂದ ಆರಂಭವಾದ ರ್ಯಾಲಿ ಬಸವೇಶ್ವರ ವೃತ್ತ, ಚನ್ನಬಸವ ಪಟ್ಟದ್ದೇವರ ವೃತ್ತ, ಅಲ್ಲಂಪ್ರಭು ವೃತ್ತ, ಶನಿದೇವರ ಮಂದಿರ, ಶಿವಾಜಿ ವೃತ್ತದ ಮೂಲಕ ತೆರಳಿ ಅಕ್ಕಮಹಾದೇವಿ ವೃತ್ತದ ಬಳಿ ಸಮಾರೋಪಗೊಂಡಿತು.
ಬಸವ ಸಮಿತಿ ಉತ್ಸವ ಸಮಿತಿಯಿಂದ ಆಯೋಜಿಸಿದ್ದ ರ್ಯಾಲಿಯಲ್ಲಿ ಬಸವಾಭಿಮಾನಿಗಳು ಭಾಗವಹಿಸಿದ್ದರು. ಯುವಕರು ಬಸವೇಶ್ವರ ಚಿತ್ರವಿದ್ದ ಕೇಸರಿ ಬಣ್ಣದ ಧ್ವಜಗಳನ್ನು ಹಿಡಿದು ಸಾಗಿದರು. ‘ಬಸವಣ್ಣನವರಿಗೆ ಜಯವಾಗಲಿ, ಬಸವ ಜಯಂತಿ ಉತ್ಸವಕ್ಕೆ ಜಯವಾಗಲಿ’ ಎಂದು ಘೋಷಣೆ ಕೂಗಿದರು.
ಬೈಕ್ ರ್ಯಾಲಿಗೆ ಚಾಲನೆ ನೀಡಿದ ಬಸವ ಸಮಿತಿ ಉತ್ಸವ ಸಮಿತಿ ಅಧ್ಯಕ್ಷ ಸೂರ್ಯಕಾಂತ ಶಿವಣಕರ್ ಮಾತನಾಡಿ, ‘ಬಸವ ಜಯಂತಿಯನ್ನು ಅತ್ಯಂತ ಅರ್ಥಪೂರ್ಣವಾಗಿ ಆಚರಿಸಲು ಸಕಲ ಸಿದ್ಧತೆಗಳನ್ನು ಕೈಗೊಳ್ಳಲಾಗಿದೆ’ ಎಂದು ಹೇಳಿದರು.
ಸಮಿತಿ ಕೋಶಾಧ್ಯಕ್ಷ ಅಮರ್ ಶಿವಣಕರ್, ಗ್ರಾಮ ಪಂಚಾಯಿತಿ ಉಪಾಧ್ಯಕ್ಷ ಸಂತೋಷ ಬಿರಾದಾರ್, ಮುಖಂಡ ಶಿವಾನಂದ ವಡ್ಡೆ, ಬಸವರಾಜ ಪಾಟೀಲ, ಶಿವಕುಮಾರ ಝುಲ್ಪೆ, ಅಜಿತ್ ರಾಗಾ, ಬಸವರಾಜ ಭವರಾ, ಸಂಜೀವಕುಮಾರ ಮಹಾಜನ, ಹಾವಗಿ ಟೊಣ್ಣೆ, ಜೀತೇಂದ್ರ ಮಹಾಜನ್, ಓಂಕಾರ್ ವಡ್ಡೆ, ಚಂದ್ರಕಾಂತ ಸಂಗಮೆ, ಮಲ್ಲಿಕಾರ್ಜುನ ನವಾಡೆ ಇದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.