ಔರಾದ್: ಬೀದರ್ನ ಪಶುವೈದ್ಯಕೀಯ ಮಹಾವಿದ್ಯಾಲಯ ಸುಜಲಾ-3 ತಂಡದ ವತಿಯಿಂದ ತಾಲ್ಲೂಕಿನ ಬಾಚೇಪಳ್ಳಿ ಗ್ರಾಮದಲ್ಲಿ ಗುರುವಾರ ಹಸಿರು ಮೇವಿನ ಬೆಳೆಗಳ ಮಹತ್ವ ಹಾಗೂ ಹಸಿರು ಮೇವಿನಿಂದ ರಸಮೇವು ತಯಾರಿಸುವ ಪ್ರಾತ್ಯಕ್ಷಿಕೆ ಕಾರ್ಯಕ್ರಮ ನಡೆಯಿತು.
ಪಶುವೈದ್ಯಕೀಯ ಮಹಾವಿದ್ಯಾಲಯದ ಸಹಾಯಕ ಪ್ರಾಧ್ಯಾಪಕ ಡಾ. ಪ್ರಕಾಶಕುಮಾರ ರಾಠೋಡ ಅವರು ಪಶುಪಾಲನೆ ಮತ್ತು ಹೈನುಗಾರಿಕೆಯಲ್ಲಿ ಹಸಿರು ಮೇವಿನ ಬೆಳೆಗಳು ಹಾಗೂ ರಸಮೇವಿನ ಮಹತ್ವ ಬಗ್ಗೆ ಮಾಹಿತಿ ನೀಡಿದರು.
‘ಈ ಗ್ರಾಮದಲ್ಲಿ ಹಸಿರು ಮೇವಿನ ನರ್ಸರಿ ಘಟಕ ಸ್ಥಾಪಿಸಲಾಗಿದ್ದು, ಅದರ ಪ್ರಯೊಜನೆ ಪಡೆಯಬೇಕು. ಹಸಿರು ಮೇವನ್ನು ವರ್ಷವಿಡೀ ಒದಗಿಸಲು ರಸ ಮೇವಾಗಿ ತಯಾರಿಸಿ ಮೇವು ಸಿಗದ ಸಮಯದಲ್ಲಿ ಬಳಸಲು ಅನುಕೂಲವಾಗಲಿದೆ. ದಪ್ಪ ಕಾಂಡ ವುಳ್ಳ ಏಕದಳ ಮೇವಿನ ಬೆಳೆಗಳಾದ ಗೋವಿನ ಜೋಳ, ಜೋಳ. ಸಜ್ಜೆ, ಹೈಬ್ರಿಡ್ ಹುಲ್ಲು ಮಾಡಲು ಬಳಸಬಹುದು’ ಎಂದರು.
ಇದೇ ವೇಳೆ ರೈತರಿಗೆ ರಸ ಮೇವು ತಯಾರಿಕೆಯ ಪ್ರಾತ್ಯಕ್ಷಿಕೆ ಮಾಡಿ ತೋರಿಸಿದರು. ಪಶುವೈದ್ಯಾಧಿಕಾರಿ ಡಾ. ರವಿಕಾಂತ ವಿವಿಧ ಯೋಜನೆಗಳ ಮಾಹಿತಿ ನೀಡಿದರು.
ರೈತ ಸಂಘದ ಅಧ್ಯಕ್ಷ ಶ್ರೀಮಂತರಾವ ಬಿರಾದಾರ ಮಾತನಾಡಿದರು. ಸುಜಲಾ- 3 ಯೋಜನೆ ತಂಡದ ದತ್ತು ರೆಡ್ಡಿ, ಶ್ರೀಕಾಂತ, ಏಕನಾಥ ಮತ್ತಿತರರು ಉಪಸ್ಥಿತರಿದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.