ADVERTISEMENT

ಬಾರದ ನಗರಸಭೆ ಸಿಬ್ಬಂದಿ: ಪೌರಾಯುಕ್ತ ತರಾಟೆಗೆ!

​ಪ್ರಜಾವಾಣಿ ವಾರ್ತೆ
Published 19 ಜುಲೈ 2013, 8:07 IST
Last Updated 19 ಜುಲೈ 2013, 8:07 IST

ಶಹಾಬಾದ: ಸ್ಥಳೀಯ ನಗರಸಭೆಯ ಬಹುತೇಕ ಸಿಬ್ಬಂದಿ ಕಚೇರಿಗೆ ಸರಿಯಾದ ಸಮಯಕ್ಕೆ ಬರದಿರುವುದನ್ನು ಪ್ರತಿಭಟಿಸಿ ಮಾಜಿ ನಗರಸಭೆ ಸದಸ್ಯ ಸೇರಿದಂತೆ ಇತರೆ ಕೆಲವರು ಪೌರಾಯುಕ್ತರನ್ನು ತರಾಟೆಗೆ ತೆಗೆದುಕೊಂಡ ಘಟನೆ ಬುಧವಾರ ನಡೆದಿದೆ.

ಬೆಳಿಗ್ಗೆ 11.30 ರ ಸುಮಾರಿಗೆ ನಗರಸಭೆಯ ಮಾಜಿ ಸದಸ್ಯ ನಾಗಣ್ಣ ರಾಂಪುರೆ ಹಾಗೂ ಬಿಜೆಪಿ ಮುಖಂಡ ಚಂದ್ರಕಾಂತ ಗೊಬ್ಬೂರ್, ಮತ್ತಿತರರು ಕೆಲಸದ ನಿಮಿತ್ತ ಕಚೇರಿಗೆ ಹೋಗಿದ್ದಾರೆ. ಆದರೆ ಅಲ್ಲಿ ಯಾವುದೆ ಸಿಬ್ಬಂದಿ ಇಲ್ಲದಿರುವುದನ್ನು ಕಂಡು ಆಕ್ರೋಶಗೊಂಡು ದೂರವಾಣಿ ಮೂಲಕ ಸಂಬಂಧಿಸಿದವರನ್ನು ಸಂಪರ್ಕಿಸಲು ಪ್ರಯತ್ನಿಸಿದ್ದಾರೆ.

ಅಷ್ಟರಲ್ಲೇ ಕಚೇರಿಗೆ ಆಗಮಿಸಿದ ಪೌರಾಯುಕ್ತ ಪುಟ್ಟನಾಯಕ್ ಅವರನ್ನು ತರಾಟೆಗೆ ತೆಗೆದುಕೊಂಡ ನಾಗಣ್ಣ ರಾಂಪುರೆ `ಸಿಬ್ಬಂದಿ ಸಮಯಕ್ಕೆ ಸರಿಯಾಗಿ ಆಗಮಿಸದೆ ಇರುವುದರಿಂದ ಸಾರ್ವಜನಿಕರಿಗೆ ತೊಂದರೆಯಾಗುತ್ತಿದೆ. ಉಮಾಕಾಂತ ಸೂರ್ಯವಂಶಿ ಎನ್ನುವವರು `ವರ್ಗಾವಣೆ ಪತ್ರ'(ಮ್ಯುಟೇಶನ್)ಕ್ಕಾಗಿ ಕಳೆದ ಮೂರು ತಿಂಗಳಿಂದ ಪರದಾಡುತ್ತಿದ್ದಾರೆ. ಇಂತಹ ಅನೇಕ ಉದಾಹರಣೆಗಳಿವೆ. ಇದು ಸಾರ್ವಜನಿಕರ ಕೆಲಸಗಳ ಬಗ್ಗೆ ತೋರುತ್ತಿರುವ ನಿರಾಸಕ್ತಿ' ಎಂದು ದೂರಿದರು.

ಚಂದ್ರಕಾಂತ ಗಬ್ಬೂರ `ಜನರ ಸೇವೆಗಾಗಿ ಸರ್ಕಾರ ಹಲವು ಯೋಜನೆ ತಂದಿದೆ. ಸಿಬ್ಬಂದಿ ಇರದಿದ್ದಲ್ಲಿ ಈ ಯೋಜನೆಗಳ ಬಗ್ಗೆ ಮಾಹಿತಿ ನೀಡುವವರು ಯಾರು?' ಎಂದು ಕೋಪ ವ್ಯಕ್ತಪಡಿಸಿದರು. ನಂತರ ಹಾಜರಾತಿ ಪುಸ್ತಕ ತರಿಸಿ, ಸಿಬ್ಬಂದಿ `ಗೈರು ಹಾಜರಿ' ಎಂದು ನಮೂದಿಸಲು ಆಗ್ರಹಿಸಿದರು.

ಸಿಬ್ಬಂದಿ ಮೇಲೆ ಸೂಕ್ತಕ್ರಮ ತೆಗೆದುಕೊಳ್ಳುವ ಭರವಸೆ ನೀಡಿದ ಪೌರಾಯುಕ್ತರು, ಸಿಬ್ಬಂದಿ ಹೆಸರಿನಲ್ಲಿ `ಗೈರು ಹಾಜರಿ' ಎಂದು ನಮೂದಿಸಿ ಪ್ರಕರಣಕ್ಕೆ ಮುಕ್ತಾಯ ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.