ADVERTISEMENT

ಬೀಜ ಕೊರತೆ: ರೈತ ಮಹಿಳೆಯರ ಪರದಾಟ

​ಪ್ರಜಾವಾಣಿ ವಾರ್ತೆ
Published 20 ಜೂನ್ 2011, 8:55 IST
Last Updated 20 ಜೂನ್ 2011, 8:55 IST
ಬೀಜ ಕೊರತೆ: ರೈತ ಮಹಿಳೆಯರ ಪರದಾಟ
ಬೀಜ ಕೊರತೆ: ರೈತ ಮಹಿಳೆಯರ ಪರದಾಟ   

ಔರಾದ್: ಸೋಯಾ ಬೀಜದ ಕೊರತೆಯಿಂದಾಗಿ ತಾಲ್ಲೂಕಿನಾದ್ಯಂತ ರೈತರು ಪರದಾಡುವ ದೃಶ್ಯ ಸಾಮಾನ್ಯವಾಗಿದೆ. ತಾಲ್ಲೂಕಿನ ಎಲ್ಲ 15 ವಿತರಣೆ ಕೇಂದ್ರಗಳಲ್ಲೂ ಸೋಯಾ ಬೀಜಕ್ಕಾಗಿ ರೈತರು ಕಾದು ಸುಸ್ತಾಗಿ ಮನೆಗೆ ಮರಳುತ್ತಿದ್ದಾರೆ.

ಬೀಜ ವಿತರಣೆ ವಿಳಂಬದಿಂದಾಗಿ ಕೆಲವೆಡೆ ರೈತರು ಮತ್ತು ಅಧಿಕಾರಿಗಳ ನಡುವೆ ಜಟಾಪಟಿ ನಡೆಯುತ್ತಿದೆ. ಔರಾದ್ ರೈತ ಸಂಪರ್ಕ ಕೇಂದ್ರದಲ್ಲಿ ಶನಿವಾರ ಮತ್ತು ಭಾನುವಾರ ಸೋಯಾ ಬೀಜ ಇಲ್ಲದೆ ರೈತರು ಪರದಾಡಿದರು. ಭಾನುವಾರ ಸಂಜೆ ಹೊತ್ತಿಗೆ ಒಂದು ಲಾರಿ ಸೋಯಾ ಬಂದಿದ್ದು, ಸೋಮವಾರ ಬೆಳಿಗ್ಗೆಯಿಂದ ವಿತರಿಸಲಾಗುವುದು ಎಂದು ಕೃಷಿ ಸಹಾಯಕರು ತಿಳಿಸಿದ್ದಾರೆ.

ದಾಸ್ತಾನು ಕೊರತೆ: ತಾಲ್ಲೂಕಿಗೆ 13 ಸಾವಿರ ಕ್ವಿಂಟಲ್ ಸೋಯಾ ಬೀಜದ ಬೇಡಿಕೆ ಸಲ್ಲಿಸಲಾಗಿದೆ. ಈಗಾಗಲೇ 5 ಸಾವಿರ ಕ್ವಿಂಟಲ್ ಬೀಜ ವಿತರಿಸಲಾಗಿದೆ. ಇನ್ನು 8 ಸಾವಿರ ಕ್ವಿಂಟಲ್ ಸೋಯಾ ಬರಬೇಕಿದೆ. ಇತರ ಯಾವುದೇ ಬೀಜದ ಕೊರತೆ ಇಲ್ಲ ಎಂದು ಸಹಾಯಕ ಕೃಷಿ ನಿರ್ದೇಶಕ ಕಾಶಿನಾಥ ಹೈಬತ್ತಿ ತಿಳಿಸಿದ್ದಾರೆ.

ಔರಾದ್ ರೈತ ಸಂಪರ್ಕ ಕೇಂದ್ರಕ್ಕೆ ಒಟ್ಟು 1300 ಕ್ವಿಂಟಲ್ ಸೋಯಾ ಬೀಜ ಬರಬೇಕು. 600 ಕ್ವಿಂಟಲ್ ವಿತರಣೆಯಾಗಿದ್ದು, 700 ಕ್ವಿಂಟಲ್ ಬರಬೇಕಾಗಿದೆ. ಎಲ್ಲ ರೈತರಿಗೂ ಬೀಜ ವಿತರಿಸಲಾಗುವುದು.

ಯಾವುದೇ ಕಾರಣಕ್ಕೂ ಅವಸರ ಮಾಡಬಾರದು ಎಂದು ಕೃಷಿ ಅಧಿಕಾರಿಗಳು ರೈತರಲ್ಲಿ ಮನವಿ ಮಾಡಿಕೊಂಡಿದ್ದಾರೆ. ರೈತರು ಸೋಯಾ ಬಿತ್ತನೆಗೆ ಹೆಚ್ಚಿನ ಆಸಕ್ತಿ ತೋರುತ್ತಿದ್ದಾರೆ ಎಂದು ಹಿರಿಯ ರೈತರೊಬ್ಬರು ತಿಳಿಸಿದ್ದಾರೆ.

ಶ್ರೀಮಂತರಿಗೆ ವಿತರಣೆ: ಜನಪ್ರತಿನಿಧಿಗಳು ಮತ್ತು ಅವರ ಸಂಬಂಧಿಕರು ಅಧಿಕಾರಿಗಳ ಮೇಲೆ ಒತ್ತಡ ಹಾಕಿ ತಮಗೆ ಬೇಕಾದಷ್ಟು ಬೀಜ ಕೊಂಡೊಯ್ಯುತ್ತಿದ್ದಾರೆ.

ಅಧಿಕಾರಿಗಳ ಸ್ಪಷ್ಟನೆ: ನಾವು ನಿಯಮಾನುಸಾರ ಸಣ್ಣ ಮತ್ತು ಅತಿ ಸಣ್ಣ ರೈತರಿಗೆ ಮಾತ್ರ ಬೀಜ ವಿತರಿಸುತ್ತಿದ್ದೇವೆ. ಯಾವುದೇ ಕಾರಣಕ್ಕೂ ನೆರೆ ರಾಜ್ಯಗಳಿಗೆ ಬೀಜ ಹೋಗುವುದಕ್ಕೆ ಆಸ್ಪದ ಕೊಡುತ್ತಿಲ್ಲ.ಆದರೆ ನಮ್ಮ ರೈತರು ಇಲ್ಲಿಯ ಬೀಜ ಪಡೆದು ಪಕ್ಕದ ರಾಜ್ಯದ ತಮಗೆ ಬೇಕಾದವರಿಗೆ ಕೊಟ್ಟರೆ ನಾವೇನು ಮಾಡಲು ಬರುವುದಿಲ್ಲ ಎಂದು ಕೃಷಿ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.