ಬೀದರ್: ಮುಂಗಾರು ಆಗಮನ, ಕೃಷಿ ಚಟುವಟಿಕೆಯ ಹಿನ್ನೆಲೆಯಲ್ಲಿ ಬಿತ್ತನೆಗೆ ಬೇಕಾದ ಬೀಜ ಮತ್ತು ರಸಗೊಬ್ಬರವನ್ನು ಅಗತ್ಯ ಪ್ರಮಾಣದಲ್ಲಿ ದಾಸ್ತಾನು ಮಾಡಬೇಕು ಮತ್ತು ಬೇಡಿಕೆಗೆ ಅನುಸಾರವಾಗಿ ಪೂರೈಸಲು ಸಜ್ಜಾಗಿರಬೇಕು ಎಂದು ಜಿಲ್ಲಾ ಉಸ್ತುವಾರಿ ಸಚಿವ ಡಾ. ಶರಣ ಪ್ರಕಾಶ ಪಾಟೀಲ ಗುರುವಾರ ತಾಕೀತು ಮಾಡಿದರು.
ಜಿಲ್ಲಾ ಪಂಚಾಯಿತಿ ಸಭಾಂಗಣದಲ್ಲಿ ನಡೆದ ಅಭಿವೃದ್ಧಿ ಕಾರ್ಯಕ್ರಮಗಳ ಪ್ರಗತಿ ಪರಿಶೀಲನೆ ಸಭೆಯಲ್ಲಿ ಕೃಷಿ ಇಲಾಖೆಯ ಅಧಿಕಾರಿಗಳಿಗೆ ಈ ಕುರಿತು ಸ್ಪಷ್ಟ ನಿರ್ದೇಶನ ನೀಡಿದ ಅವರು, ಮಳೆಯ ಪ್ರಮಾಣ ಆಧರಿಸಿ ಯಾವ ನಮೂನೆಯ ಬೀಜ ಮತ್ತು ರಸಗೊಬ್ಬರಕ್ಕೆ ಬೇಡಿಕೆ ಬರಬಹುದು ಎಂದು ಅಂದಾಜಿಸಿ ಸಿದ್ಧತೆ ಮಾಡಬೇಕು ಎಂದರು.
ಅಲ್ಲದೆ, ನಿಗದಿ ಪಡಿಸಿದ ದರಕ್ಕಿಂತಲೂ ಹೆಚ್ಚಿನ ದರಕ್ಕೆ ರಸಗೊಬ್ಬರ ಮಾರಾಟ ಆಗದಂತೆ ಎಚ್ಚರ ವಹಿಸಬೇಕು ಹಾಗೂ ಕೃಷಿ ಪರಿಕರಗಳನ್ನು ಖರೀದಿಗೆ ಬರುವ ರೈತರಿಗೆ ಇಂಥದೇ ಕಂಪನಿಯ ಉತ್ಪನ್ನಗಳನ್ನು ಖರೀದಿಸಬೇಕು ಎಂದು ಒತ್ತಾಯ ಮಾಡಬಾರದು ಎಂದು ಅಧಿಕಾರಿಗಳಿಗೆ ನಿರ್ದೇಶಿಸಿದರು.
ಕೆಲವು ಅಧಿಕಾರಿಗಳು ಹೀಗೆ ರೈತರಿಗೆ ನಿರ್ದೇಶನ ನೀಡುತ್ತಿದ್ದಾರೆ ಎಂಬ ಮಾಹಿತಿ ಇದೆ. ಇದು ಸರಿಯಲ್ಲ. ಇಂಥ ದೂರುಗಳು ಕಂಡುಬಂದಲ್ಲಿ ಕಟ್ಟುನಿಟ್ಟಿನ ಕ್ರಮ ಜರುಗಿಸಲಾಗುವುದು ಎಂದು ಎಚ್ಚರಿಸಿದರು.
ಸಭೆಗೆ ಮಾಹಿತಿ ನೀಡಿದ ಜಂಟಿ ಕೃಷಿನಿರ್ದೇಶಕ ಜಿ.ಟಿ.ಪುಥ್ರಾ ಅವರು, ಜಿಲ್ಲೆಯಲ್ಲಿ ಹುಮನಾಬಾದ್, ಬಸವಕಲ್ಯಾಣ ಮತ್ತು ಬೀದರ್ ತಾಲ್ಲೂಕಿನಲ್ಲಿ ಮಳೆ ಸಮಧಾನಕರ ಆಗಿದ್ದು ಬಿತ್ತನೆ ಚಟುವಟಿಕೆ ಆರಂಭವಾಗಿದೆ. ಭಾಲ್ಕಿ, ಔರಾದ್ ತಾಲ್ಲೂಕಿನ ಕೆಲವೆಡೆ ಮಳೆಯಾಗಿದೆ. ಬಿತ್ತನೆ ಚಟುವಟಿಕೆ ಪೂರ್ಣ ಆರಂಭವಾಗಬೇಕಿದೆ ಎಂರರು.
ಜಿಲ್ಲೆಯಲ್ಲಿ ಪ್ರಸ್ತುತ ವಿವಿಧ ಬೆಳೆಗಳ ಒಟ್ಟಾರೆ 43,050 ಕ್ವಿಂಟಾಲ್ ಬೀಜ ದಾಸ್ತಾನು ಇದ್ದು, ಸೋಯಾಬಿನ್ ಬೀಜಕ್ಕೆ ಬೇಡಿಕೆ ಇದೆ. ಅಂತೆಯೇ, 28,371 ಮೆಟ್ರಿಕ್ಟನ್ ರಸಗೊಬ್ಬರ ದಾಸ್ತಾನು ಇದೆ. ಯಾವುದೇ ಕೊರತೆ ಇಲ್ಲ. ಡಿಎಪಿ ಗೊಬ್ಬರಕ್ಕೆ ಹೆಚ್ಚಿನ ಬೇಡಿಕೆ ಬರಬಹುದು ಎಂಬ ಹಿನ್ನೆಲೆಯಲ್ಲಿ ಅದನ್ನೇ ಹೆಚ್ಚು ದಾಸ್ತಾನಿಸಲಾಗಿದೆ ಎಂದರು.
ಟ್ರಾನ್ಸ್ಫಾರ್ಮರ್ ದುರಸ್ತಿ ವಿಳಂಬಕ್ಕೆ ತರಾಟೆ: ಕುಡಿಯುವ ನೀರು ಉದ್ದೇಶ ಸೇರಿದಂತೆ ಕೆಟ್ಟು ನಿಂತಿರುವ ಟ್ರಾನ್ಸ್ಫಾರ್ಮರ್ಗಳ ದುರಸ್ತಿಗೆ ಜೆಸ್ಕಾಂ ಅಧಿಕಾರಿಗಳು ವಿಳಂಬ ಮಾಡುತ್ತಿದ್ದಾರೆ ಎಂದು ಶಾಸಕರು ಪಕ್ಷಭೇದ ಮರೆತು ತರಾಟೆಗೆ ತೆಗೆದುಕೊಂಡರು.
ಶಾಸಕರಾದ ಮಲ್ಲಿಕಾರ್ಜುನ ಖೂಬಾ, ಅಶೋಕ್ ಖೇಣಿ, ಈಶ್ವರ ಖಂಡ್ರೆ, ರಾಜಶೇಖರ ಪಾಟೀಲ, ಗುರುಪಾದಪ್ಪಾ ನಾಗಮಾರಪಳ್ಳಿ ಅವರು ಈ ಕುರಿತು ಗಮನಸೆಳೆದರು. ಅಶೋಕ್ ಖೇಣಿ ಅವರು, ಕೆಲವೆಡೆ ಕೆಟ್ಟಿರುವ ಟ್ರಾನ್ಸ್ಫಾರ್ಮರ್ ದುರಸ್ತಿಗೆ 10 ಸಾವಿರ ಕೇಳುತ್ತಿದ್ದು, ಈ ಬಗೆಗೆ ಸರ್ಕಾರದ ಆದೇಶವಿದೆಯೇ ಎಂದು ಪ್ರಶ್ನಿಸಿದರು.
ಇದಕ್ಕೆ ದನಿಗೂಡಿಸಿದ ಈಶ್ವರ ಖಂಡ್ರೆ ಅವರು, ಮದ್ಯವರ್ತಿಗಳು ಹೀಗೆ ಹಣ ವಸೂಲಿ ಮಾಡುತ್ತಿದ್ದಾರೆ. ಕೆಲ ಪ್ರಕರಣಗಳಲ್ಲಿ ಮೇಲಿನ ಅಧಿಕಾರಿಗಳಿಗೂಮಾಹಿತಿ ಇರಬಹುದು. ಇದಕ್ಕೆ ಅವಕಾಶ ನೀಡದೇ ನಿಗದಿತ ಕಾಲಮಿತಿಯಲ್ಲಿ ಟ್ರಾನ್ಸ್ಫಾರ್ಮರ್ ಬದಲಿಸುವ ಕೆಲಸ ಆಗಬೇಕು ಎಂದು ಒತ್ತಾಯಿಸಿದರು.
ಖೇಣಿ ಅವರು, `ಟಿ.ಸಿ ಕೆಟ್ಟಿರುವ ಬಗೆಗೆ ದೂರು ದಾಖಲಿಸಲು ಕಾಲ್ ಸೆಂಟರ್ ಆರಂಭಿಸಬೇಕು. ಹೀಗೆ ದಾಖಲಾಗುವ ದೂರುಗಳಿಗೆ ಸ್ಪಂದಿಸಿ ಬದಲಿಸಲು ಹೆಚ್ಚುವರಿಯಾಗಿ ಟಿ.ಸಿ.ಗಳನ್ನು ಕಾದಿಡಬೇಕು' ಎಂದು ಸಲಹೆ ಮಾಡಿದರು.
ಸಚಿವರು ದನಿಗೂಡಿಸಿ ಇಂಥ ದೂರುಗಳನ್ನು ದಾಖಲಿಸಲು ಕೇಂದ್ರೀಕೃತ ವ್ಯವಸ್ಥೆ ಮಾಡಬೇಕು ಮತ್ತು ತ್ವರಿತಗತಿಯಲ್ಲಿ ಸಮಸ್ಯೆ ಬಗೆಹರಿಸಬೇಕು ಎಂದು ಅಧಿಕಾರಿಗಳಿಗೆ ನಿರ್ದೇಶನ ನೀಡಿದರು.
ಜಿಲ್ಲಾಧಿಕಾರಿ ಡಾ. ಪಿ.ಸಿ.ಜಾಫರ್, ಜಿಲ್ಲಾ ಪಂಚಾಯಿತಿ ಸಿಇಒ ಉಜ್ವಲ್ ಕುಮಾರ್ ಘೋಷ್, ಪೊಲೀಸ್ ವರಿಷ್ಠಾಧಿಕಾರಿ ಡಾ. ತ್ಯಾಗರಾಜನ್, ಜಿಲ್ಲಾ ಪಂಚಾಯಿತಿ ಅಧ್ಯಕ್ಷೆ ದೀಪಿಕಾ, ಉಪಾಧ್ಯಕ್ಷೆ ಲತಾ ಅವರೂ ಸಭೆಯಲ್ಲಿ ಉಪಸ್ಥಿತರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.