ಬೀದರ್: ಫೆಬ್ರುವರಿ ಆರಂಭವಾಗುತ್ತಿದ್ದಂತೆಯೇ ಬಿಸಿಲಿನ ಝಳ ಹೆಚ್ಚುತ್ತಿದ್ದು, ಬೇಸಿಗೆಯ ಆರಂಭದ ಮುನ್ಸೂಚನೆಯೂ ದೊರೆಯುತ್ತಿದೆ. ರಾತ್ರಿಯ ಹೊತ್ತು ಚಳಿ ಪ್ರಮಾಣ ಕಡಿಮೆ ಆಗುತ್ತಿದ್ದರೆ, ಬೆಳಗಿನ ಹೊತ್ತು ಸುಡು ಬಿಸಿಲ ಪ್ರಮಾಣ ಹೆಚ್ಚುತ್ತಿದೆ.
ಬೇಸಿಗೆಯ ಅವಧಿ ಹೆಚ್ಚುತ್ತಿರುವಂತೆ ನೀರಿನ ಅಂಶ ಹೆಚ್ಚಿರುವ ಹಣ್ಣುಗಳಿಗೆ ಬೇಡಿಕೆ ಇದ್ದರೆ, ಇನ್ನೊಂದೆಡೆ ರಸ್ತೆಗಳಲ್ಲಿ ತಂಪು ಪಾನೀಯ ಮಾರುವ ಗಾಡಿಗಳು ಕಾಣಿಸಿಕೊಳ್ಳುತ್ತಿವೆ. ಲಸ್ಸಿ ಅಂಗಡಿಗಳು ಅಲ್ಲಲ್ಲಿ ತಲೆ ಎತ್ತುತ್ತಿವೆ.
ಆದರೆ, ಹೀಗೆ ತಂಪು ಪಾನೀಯ ಮಾರುವಲ್ಲಿ ಇಟ್ಟಿರುವ ಮಂಜುಗಡ್ಡೆ, ಲೋಟಗಳನ್ನು ಬಯಲಿಗೆ ತೆರೆದುಕೊಂಡಂತೆ ಇಡುವ ಕಾರಣ ಧೂಳು ಸೇರಿದಂತೆ ಸಾಂಕ್ರಾಮಿಕ ರೋಗಗಳ ಭೀತಿಯೂ ಕಾಡುವ ಸಾಧ್ಯತೆಗಳು ಇವೆ. ಆದರೆ, ಬಿಸಿಲು ಈ ಎಚ್ಚರಿಕೆಯನ್ನು ಮರೆ ಮಾಚುತ್ತಿದೆ.
ಸಾಮಾನ್ಯವಾಗಿ ಫೆಬ್ರುವರಿ ಅಂತ್ಯ ಅಥವಾ ಮಾರ್ಚ್ ಆರಂಭದಲ್ಲಿ, ಶಿವರಾತ್ರಿ ಹಬ್ಬವು ಕಳೆದ ನಂತರ ಬಿಸಿಲಿನ ಪ್ರಮಾಣ ಹೆಚ್ಚಾಗುತ್ತಿತ್ತು. ಆದರೆ, ಈಗ ಶಿವರಾತ್ರಿ ಹಬ್ಬ ಇನ್ನೂ ಎರಡು ವಾರ ಇರುವಂತೇ, ಫೆಬ್ರುವರಿ ಆರಂಭದಲ್ಲಿಯೇ ಬಿಸಿಲಿನ ಪ್ರಖರತೆಯು ಏರುತ್ತಿದೆ.
ಮಧ್ಯಾಹ್ನ 12ರ ನಂತರ ಬಿಸಿಲು, ಧಗೆಯಿಂದ ಬಸವಳಿದ ಜನರು ಎಳೆನೀರು, ಲಸ್ಸಿ, ಮುಸುಂಬಿ, ಕಿತ್ತಳೆ, ದ್ರಾಕ್ಷಿ, ಚಿಕ್ಕು, ಸೇಬು ಮತ್ತಿತರ ಹಣ್ಣುಗಳ ತಂಪು ಪಾನೀಯಗಳಿಗೆ ಮೊರೆ ಹೋಗುತ್ತಿದ್ದಾರೆ.
‘ಬಿಸಿಲಿನ ಝಳ ನಿಧಾನಕ್ಕೆ ಹೆಚ್ಚುತ್ತಿದೆ. ಜನರು ತಂಪು ಪಾನೀಯ ಕುಡಿದು ಧಣಿವಾರಿಸಿಕೊಳ್ಳಲು ಬಯಸುತ್ತಿದ್ದಾರೆ. ಲಸ್ಸಿ ಅಂಗಡಿ ವಾರದ ಹಿಂದೆ ಶುರು ಮಾಡಿದ್ದು, ವ್ಯಾಪಾರವು ದಿನೇ ದಿನೇ ಹೆಚ್ಚುತ್ತಿದೆ’ ಎನ್ನುತ್ತಾರೆ ಅಂಬೇಡ್ಕರ್ ವೃತ್ತದಲ್ಲಿ ಲಸ್ಸಿ ಮಾರಾಟದಲ್ಲಿ ತೊಡಗಿದ್ದ ವ್ಯಾಪಾರಿಯೊಬ್ಬರು.
ಇನ್ನೊಂದೆಡೆ, ನಗರದ ಪ್ರಮುಖ ರಸ್ತೆಗಳ ಬದಿಯಲ್ಲ ಕಲ್ಲಂಗಡಿ ಹಣ್ಣುಗಳ ರಾಶಿಯೂ ಕಂಡು ಬರುತ್ತಿದ್ದು, ಬೇಸಿಗೆ ಆಗಮನದ ಸೂಚನೆಯನ್ನೂ ನೀಡಿದೆ.
ಸ್ವಚ್ಛತೆ ಅಗತ್ಯ: ಬಿಸಿಲಿನ ಧಗೆ ಹೆಚ್ಚುತ್ತಿದ್ದಂತೆ ನಗರದ ವಿವಿಧೆಡೆ ತಂಪು ಪಾನೀಯ, ಜ್ಯೂಸ್ ಅಂಗಡಿಗಳು ತಲೆ ಎತ್ತುತ್ತಿವೆ. ಸಾರ್ವಜನಿಕರು ಈ ಅಂಗಡಿಗಳಲ್ಲಿ ತಂಪು ಪಾನೀಯ ಕುಡಿಯುತ್ತಿದ್ದರೂ ಸ್ವಚ್ಛತೆ ಕಾಪಾಡುತ್ತಿಲ್ಲ. ರಸ್ತೆಗೆ ಹೊಂದಿಕೊಂಡಂತೆ ಇರುವ ಕಾರಣ ಧೂಳೂ ಆವರಿಸುತ್ತಿದೆ. ಶುದ್ಧ ನೀರು, ಐಸ್ಗಳನ್ನು ಬಳಸುತ್ತಿರುವ ಕುರಿತು ಖಾತರಿಯಿಲ್ಲ.
ಇದು, ರೋಗ ರುಜಿನ ಹರಡುವ ಸಾಧ್ಯತೆ ಇದೆ. ಕೋಲ್ಡ್ ಡ್ರಿಂಕ್ಸ್, ಜ್ಯೂಸ್ ಮಾರುವ ಅಂಗಡಿ ಅವರು ಜನರ ಆರೋಗ್ಯದ ದೃಷ್ಟಿಯಿಂದ ಸ್ವಚ್ಛತೆ ಕಾಪಾಡಬೇಕಾಗಿದೆ.
ಬೇಸಿಗೆಯ ಹಿನ್ನೆಲೆಯಲ್ಲ ಸಾಂಕ್ರಾಮಿಕ ರೋಗಗಳು ಕಾಣಿಸಿಕೊಳ್ಳದಂತೆ ನಗರಸಭೆ ಮತ್ತು ಆರೋಗ್ಯ ಇಲಾಖೆಯ ಅಧಿಕಾರಿಗಳು ಇತ್ತ ಗಮನ ಹರಿಸಬೇಕಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.