ADVERTISEMENT

ಭಂಕೂರ ರಸ್ತೆಗೆ ಮುರುಮ್ ಹಾಕಿದ ಗ್ರಾಮ ಪಂಚಾಯಿತಿ!

​ಪ್ರಜಾವಾಣಿ ವಾರ್ತೆ
Published 19 ಜುಲೈ 2013, 8:06 IST
Last Updated 19 ಜುಲೈ 2013, 8:06 IST

ಶಹಾಬಾದ: ಚಿತ್ತಾಪುರ ತಾಲ್ಲೂಕಿನ ಭಂಕೂರ ಗ್ರಾಮದ ಸಮಸ್ಯೆ ಕುರಿತು `ಪ್ರಜಾವಾಣಿ' ಬುಧವಾರದಂದು (ದಿನಾಂಕ ಜುಲೈ17 ರ ಸಂಚಿಕೆಯಲ್ಲಿ) ಪ್ರಕಟಿಸಿದ್ದ `ಗ್ರಾಮಾಯಣ'ದ `ಭಂಕೂರ: ಸಮಸ್ಯೆಗಳ ಊರು' ಲೇಖನಕ್ಕೆ ಸ್ಪಂದಿಸಿ ಗ್ರಾಮದ ಮುಖ್ಯರಸ್ತೆ ಬಗ್ಗೆ ತಕ್ಷಣವೆ ಕ್ರಮ ತೆಗೆದುಕೊಂಡಿದೆ. ಮಳೆಯಿಂದಾಗಿ ಅಡ್ಡಾಡಲು ತೊಂದರೆಯಾದ್ದ ಮುಖ್ಯರಸ್ತೆಗೆ ಗುರುವಾರ ಮುರುಮ್ ಹಾಕಿಸಿ ತಾತ್ಕಾಲಿಕ ದುರಸ್ತಿ ಮಾಡಿಸಿದೆ.

ಗ್ರಾಮದ ಮುಖ್ಯರಸ್ತೆ ಕಾಮಗಾರಿ ಕಳೆದ ಮೂರು ವರ್ಷಗಳಿಂದ ನೆನೆಗುದಿಗೆ ಬಿದ್ದಿದ್ದು ಸತತ ಒಂದು ವಾರದಿಂದ ಸುರಿಯುತ್ತಿರುವ ಮಳೆಗೆ  ರಸ್ತೆ `ಕೆಸರು ಗದ್ದೆ'ಯಂತಾಗಿತ್ತು. ಇದಕ್ಕೂ ಮೊದಲು ಗ್ರಾಮಕ್ಕೆ ಆಗಮಿಸಿದ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ನಾರಾಯಣ ಅವರನ್ನು `ಮುಖ್ಯರಸ್ತೆ'ಯಲ್ಲೆ ನಡೆಸಿಕೊಂಡು ಹೋದ ಗ್ರಾಮದ ಶರಣಗೌಡ ಕೊಡದೂರ, ಈರಣ್ಣ ಕಾರ್ಗಿಲ್, ನಾಗೇಂದ್ರ ಮಾಚನೂರ ಹಾಗೂ ಶರಣು ದೊಡ್ಡಮನಿ ರಸ್ತೆಯ ದುಃಸ್ಥಿತಿ ಬಗ್ಗೆ ವಿವರಣೆ ನೀಡಿದರು. 

ಟೆಂಡರ್ ಕೆಲಸ: ಭಂಕೂರ ಮುಖ್ಯರಸ್ತೆಗೆ ಈಚಿನ ವಿಧಾನಸಭೆ ಚುನಾವಣೆ ನಂತರ ಟೆಂಡರ್ ಪ್ರಕ್ರೀಯೆ ನಡೆದಿದ್ದು `ಟೆಂಡರ್' ನೀಡುವ ಕೆಲಸ ಬಾಕಿ ಇದೆ. ಈ ರಸ್ತೆ ಕಾಮಗಾರಿಯನ್ನು ಲೋಕೋಪಯೋಗಿ ಇಲಾಖೆ ಮಾಡದೆ ಪಂಚಾಯತ್ ರಾಜ್ಯ ಇಲಾಖೆಯಿಂದ ಕೈಗೆತ್ತಿಕೊಳ್ಳಲಾಗಿದ್ದು ಇದಕ್ಕಾಗಿ ಹೈದರಾಬಾದ್ ಕರ್ನಾಟಕ ಅಭಿವೃದ್ಧಿ ಮಂಡಳಿ(ಹೆಚ್.ಕೆ.ಡಿ.ಬಿ)ಯಿಂದ ಸುಮಾರು 26 ಲಕ್ಷ ರೂ ಅನುದಾನ ಬಿಡುಗಡೆಯಾಗಿದೆ.

ಸದ್ಯ ಮಳೆ ಸುರಿಯುತ್ತಿದ್ದು, ಮುಗಿದ ನಂತರ ಕಾಮಗಾರಿ ಕೈಗೆತ್ತಿಕೊಳ್ಳುವ ಸಾಧ್ಯತೆ ಇದೆ. ಕಾಮಗಾರಿ ತಡವಾಗಲು ಹಿಂದಿನ ಶಾಸಕ ವ್ಮಾಲೀಕ ನಾಯಕ ಅವರ `ಕಾಣಿಕೆ'ಯೂ ಇದೆ ಎಂದು ಭಂಕೂರ ಗ್ರಾಮ ಪಂಚಾಯಿತಿ ಮಾಜಿ ಉಪಾಧ್ಯಕ್ಷ ಲಕ್ಷ್ಮೀಕಾಂತ ಕಂದಗೋಳ ಆಪಾದಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.