ಬೀದರ್: ಮತೀಯ ನಿರ್ದೇಶಿತ ಹಿಂಸಾಚಾರ ಮಸೂದೆ ಜಾರಿಗೊಳಿಸಲು ಹೊರಟಿರುವ ಕೇಂದ್ರ ಸರ್ಕಾರದ ಕ್ರಮವನ್ನು ಖಂಡಿಸಿ ಬಿಜೆಪಿ ಯುವ ಮೋರ್ಚಾ ನಗರ ಹಾಗೂ ಗ್ರಾಮಾಂತರ ಘಟಕದಿಂದ ನಗರದಲ್ಲಿ ಮಂಗಳವಾರ ಪ್ರತಿಭಟನೆ ನಡೆಸಲಾಯಿತು.
ಪಕ್ಷದ ಜಿಲ್ಲಾ ಕಚೇರಿ ಎದುರು ಜಮಾಯಿಸಿದ ಕಾರ್ಯಕರ್ತರು ಅಲ್ಲಿಂದ ಗುರುನಾನಕ ಗೇಟ್ವರೆಗೆ ಪ್ರತಿಭಟನಾ ರ್ಯಾಲಿ ನಡೆಸಿದರು. ಅಲ್ಲಿ ಟೈರ್ಗೆ ಬೆಂಕಿ ಹಚ್ಚಿ ಆಕ್ರೋಶ ವ್ಯಕ್ತಪಡಿಸಿದರು. ಮಾನವ ಸರಪಳಿ ರಚಿಸಿ ಕೆಲ ಕಾಲ ರಸ್ತೆತಡೆ ನಡೆಸಿದರು.
ಮತೀಯ ಹಿಂಸಾಚಾರ ತಡೆ ಶಾಸನ ಹಿಂದುಗಳ ಪಾಲಿಗೆ ಭಯಾನಕ ಶಾಸನ ಆಗಲಿದೆ. ಹೀಗಾಗಿ ಪ್ರತಿಯೊಬ್ಬರು ವಿರೋಧಿಸಬೇಕು ಎಂದು ಪ್ರತಿಭಟನಾಕಾರರನ್ನು ಉದ್ದೇಶಿಸಿ ಮಾತನಾಡಿದ ಬಿಜೆಪಿ ಯುವ ಮೋರ್ಚಾ ಜಿಲ್ಲಾ ಅಧ್ಯಕ್ಷ ವಿಜಯಕುಮಾರ ಎಸ್. ಪಾಟೀಲ್ ಗಾದಗಿ ಹೇಳಿದರು.
ಕಾಂಗ್ರೆಸ್ ನೇತೃತ್ವದ ಕೇಂದ್ರದ ಯು.ಪಿ.ಎ. ಸರ್ಕಾರ ಹಿಂದು ವಿರೋಧಿ ನೀತಿ ಅನುಸರಿಸುತ್ತಿದೆ. ಮತೀಯ ಹಿಂಸಾಚಾರ ತಡೆ ಶಾಸನ ಜಾರಿಯಾದಲ್ಲಿ ಮತೀಯ ಸಾಮರಸ್ಯಕ್ಕೆ ಧಕ್ಕೆ ಉಂಟಾಗಲಿದೆ. ಹಿಂದು ಮತ್ತು ಮುಸ್ಲಿಂ ಸಂಘರ್ಷಕ್ಕೆ ನಾಂದಿ ಹಾಡುವುದು ಇದರ ಉದ್ದೇಶವಾಗಿದೆ. ಹೀಗಾಗಿ ಎಲ್ಲರೂ ಇದನ್ನು ಧಿಕ್ಕರಿಸಬೇಕು ಎಂದರು.
ಮತೀಯ ನಿರ್ದೇಶಿತ ಹಿಂಸಾಚಾರ ಮಸೂದೆ ಜಾರಿಗೆ ಬಂದಲ್ಲಿ ಸರ್ಕಾರವೇ ಹಿಂದುಗಳ ಜೀವ ಮತ್ತು ಮಾನಹಾನಿಗೆ ಅವಕಾಶ ಮಾಡಿಕೊಟ್ಟಂತಾಗುತ್ತದೆ. ಆದ್ದರಿಂದ ಈ ಕುರಿತು ಹಿಂದುಗಳು ಎಚ್ಚರಗೊಳ್ಳಬೇಕು ಎಂದು ಯುವ ಮೋರ್ಚಾ ರಾಜ್ಯ ಉಪಾಧ್ಯಕ್ಷ ಅಶೋಕ ಹೊಕ್ರಾಣೆ ತಿಳಿಸಿದರು.
ಯುವ ಮೋರ್ಚಾ ನಗರ ಘಟಕದ ಅಧ್ಯಕ್ಷ ಶಿವಕುಮಾರ ಆಣದೂರು, ಗ್ರಾಮಾಂತರ ಘಟಕದ ಅಧ್ಯಕ್ಷ ಸಂತೋಷ ಪಾರಾ ಮಾತನಾಡಿದರು.
ಯುವ ಮೋರ್ಚಾ ಜಿಲ್ಲಾ ಪ್ರಧಾನ ಕಾರ್ಯದರ್ಶಿ ರಾಜು ಬಿರಾದಾರ, ಪ್ರಮುಖರಾದ ಅನೀಲ ಉಪ್ಪೆ, ಸಂತೋಷ ಚೊಂಡಿ, ಶಿವರಾಜ ನಾವದಗೇರಿ, ಸಂತೋಷ ಪಾಟೀಲ್, ಸಂತೋಷ ಸೋರಳ್ಳಿ, ಕಿರಣ ಹೊಸಮನಿ, ಇಂದ್ರಜೀತ್ ಪಾಟೀಲ್, ಡಾ. ಮಹೇಶ, ಪವನ ಬಿರಾದಾರ, ಭೀಮರಾವ ಕುಲಕರ್ಣಿ, ರವಿ ಕೆಂಪಯ್ಯ, ಸುಜೀತ ರಾಠೋಡ್, ದತ್ತು ಕೋಟೆ ಮತ್ತಿತರರು ಪಾಲ್ಗೊಂಡಿದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.