ADVERTISEMENT

ಮಾನವೀಯತೆ ಮರೆದ ಬಸವಲಿಂಗ ಪಟ್ಟದ್ದೇವರು

​ಪ್ರಜಾವಾಣಿ ವಾರ್ತೆ
Published 25 ಏಪ್ರಿಲ್ 2018, 7:37 IST
Last Updated 25 ಏಪ್ರಿಲ್ 2018, 7:37 IST
ಭಾಲ್ಕಿಯ ಕುಂಬಾರ ಗುಂಡಯ್ಯ ಕಲ್ಯಾಣ ಮಂಟಪದಲ್ಲಿ ಗದಗ ಜಿಲ್ಲೆಯ ಅನಾಥ ಯುವತಿ ಸೌಭಾಗ್ಯ ಅವರ ವಿವಾಹ ಗಣಪತಿ ಅವರೊಂದಿಗೆ ನೆರವೇರಿತು
ಭಾಲ್ಕಿಯ ಕುಂಬಾರ ಗುಂಡಯ್ಯ ಕಲ್ಯಾಣ ಮಂಟಪದಲ್ಲಿ ಗದಗ ಜಿಲ್ಲೆಯ ಅನಾಥ ಯುವತಿ ಸೌಭಾಗ್ಯ ಅವರ ವಿವಾಹ ಗಣಪತಿ ಅವರೊಂದಿಗೆ ನೆರವೇರಿತು   

ಭಾಲ್ಕಿ: ಇಲ್ಲಿಯ ಕುಂಬಾರ ಗುಂಡಯ್ಯ ಕಲ್ಯಾಣ ಮಂಟಪದಲ್ಲಿ ಸೋಮವಾರ ಗದಗನ ಅನಾಥ ಯುವತಿ ಸೌಭಾಗ್ಯ ಅವರ ವಿವಾಹವನ್ನು ಯರನಳ್ಳಿ ಗ್ರಾಮದ ಗಣಪತಿ ಅವರೊಂದಿಗೆ ನೆರವೇರಿಸಿ ಕೊಡುವ ಮೂಲಕ ಅನುಭವ ಮಂಟಪದ ಅಧ್ಯಕ್ಷ ಬಸವಲಿಂಗ ಪಟ್ಟದ್ದೇವರು ಮಾನವೀಯತೆ ಮೆರೆದಿದ್ದಾರೆ.

ಚಿಕ್ಕಂದಿನಿಂದಲೇ ಸೌಭಾಗ್ಯ ಮತ್ತು ಅವರ ಇಬ್ಬರು ಸಹೋದರಿಯರಿಗೆ ಬಸವಲಿಂಗ ಪಟ್ಟದ್ದೇವರೇ ಆಶ್ರಯ ನೀಡಿ ಚನ್ನಬಸವೇಶ್ವರ ಗುರುಕುಲ ವಸತಿ ಶಾಲೆಯಲ್ಲಿ ಉಚಿತವಾಗಿ ಶಿಕ್ಷಣ ನೀಡಿದ್ದಾರೆ. ಸದ್ಯ ಯುವತಿ ಬಿಎಸ್ಸಿ ಅಂತೀಮ ವರ್ಷದಲ್ಲಿ ಓದುತ್ತಿದ್ದಾಳೆ. ಯುವತಿಗೆ ತಂದೆಯ ಸ್ಥಾನದಲ್ಲಿ ನಿಂತು ಮದುವೆ ಮಾಡಿಸುವ ಮೂಲಕ ಸುಂದರ ಬದುಕು ಕಲ್ಪಿಸಿಕೊಟ್ಟಿದ್ದಾರೆ.

ಗದಗ್‌ನ ಸಿದ್ಧಲಿಂಗ ಸ್ವಾಮೀಜಿ ಮಾತನಾಡಿ, ಸಮಾಜದಲ್ಲಿರುವ ದೀನ, ದುರ್ಬಲ, ಅನಾಥ ಮಕ್ಕಳಿಗೆ ಆಶ್ರಯ ನೀಡುವುದು ಪುಣ್ಯದ ಕಾರ್ಯ. ಇಂತಹ ಸತ್ಕಾರ್ಯಗಳನ್ನು ಮಾಡುತ್ತಿರುವ ಬಸವಲಿಂಗ ಪಟ್ಟದ್ದೇವರು ಇತರ ಸ್ವಾಮೀಜಿಗಳಿಗೆ ಮಾದರಿ ಆಗಿದ್ದಾರೆ ಎಂದು ಪ್ರಶಂಸಿಸಿದರು. ಬಸವಲಿಂಗ ಪಟ್ಟದ್ದೇವರು ಮಾತನಾಡಿ, ಬಸವಣ್ಣನರ ಆಶಯದಂತೆ ಎಲ್ಲ ಜೀವಿಗಳಿಗೂ ಉತ್ತಮ ಬದುಕು ಕಲ್ಪಿಸಿಕೊಡಬೇಕು ಎಂದು ಪ್ರಯತ್ನಿಸುತ್ತಿದ್ದೇನೆ ಎಂದು ಹೇಳಿದರು.

ADVERTISEMENT

ಗುರುಬಸವ ಪಟ್ಟದ್ದೇವರು ಮದುವೆ ವಿಧಿ ವಿಧಾನ ನಡೆಸಿಕೊಟ್ಟರು. ಮಹಾಲಿಂಗ ಸ್ವಾಮೀಜಿ, ಕಲ್ಲೇಶ್ವರ ಸ್ವಾಮೀಜಿ, ಬಸವಲಿಂಗ ಸ್ವಾಮೀಜಿ, ಅಶೋಕ ರಾಜೋಳೆ, ಪ್ರದೀಪ ಬಿರಾದರ, ತಾಲ್ಲೂಕು ವೈದ್ಯಾಧಿಕಾರಿ ಸಂತೋಷ ಕಾಳೆ ಕಾರ್ಯಕ್ರಮದಲ್ಲಿ ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.