ADVERTISEMENT

`ಯಾದಗಿರಿಯಲ್ಲಿ ಜೈವಿಕ ಇಂಧನ ಪಾರ್ಕ್'

​ಪ್ರಜಾವಾಣಿ ವಾರ್ತೆ
Published 8 ಡಿಸೆಂಬರ್ 2012, 6:38 IST
Last Updated 8 ಡಿಸೆಂಬರ್ 2012, 6:38 IST

ಜನವಾಡ: `ಯಾದಗಿರಿ ಜಿಲ್ಲೆಯ ತಿಂಥಣಿ ಗ್ರಾಮದಲ್ಲಿ ಗುರುತಿಸಿರುವ 40 ಎಕರೆಪ್ರದೇಶದಲ್ಲಿ ಪ್ರದೇಶದಲ್ಲಿ ಜೈವಿಕ ಇಂಧನ ಪಾರ್ಕ್ ಅನ್ನು ಸ್ಥಾಪಿಸಲು ಉದ್ದೇಶಿಸಲಾಗಿದೆ' ಎಂದು ರಾಯಚೂರು ಕೃಷಿ ವಿಶ್ವವಿದ್ಯಾಲಯದ ಕುಲಪತಿ ಡಾ. ಬಿ.ವಿ. ಪಾಟೀಲ್ ತಿಳಿಸಿದರು.
ಬೀದರ್ ತಾಲ್ಲೂಕಿನ ಜನವಾಡ ಕೃಷಿ ವಿಜ್ಞಾನ ಕೇಂದ್ರದಲ್ಲಿ ಶುಕ್ರವಾರ ನಡೆದ ಜಿಲ್ಲಾ ಜೈವಿಕ ಇಂಧನ ಮಾಹಿತಿ ಹಾಗೂ ಪ್ರಾತ್ಯಕ್ಷಿಕೆ ಕೇಂದ್ರದ ಉದ್ಘಾಟನಾ ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿದರು.

ನೈಸರ್ಗಿಕವಾಗಿ ದೊರೆಯುವ ಬಿಸಲು, ಗಾಳಿಯ ಜೊತೆಗೆ ಜೈವಿಕ ಇಂಧನ ಸಸಿಗಳನ್ನು ನೆಟ್ಟು ಇಂಧನದ ಅವಶ್ಯಕತೆ ನೀಗಿಸಿಕೊಳ್ಳಬಹುದು. ಈ ಹಿನ್ನೆಲೆಯಲ್ಲಿ ಕೃಷಿಕರಲ್ಲಿ ಜಾಗೃತಿ ಮೂಡಿಸಲು ಜೈವಿಕ ಇಂಧನ ಪಾರ್ಕ್ ಸ್ಥಾಪನೆಗೆ ಚಿಂತನೆ ಒತ್ತು ನೀಡಲಾಗಿದೆ ಎಂದು ತಿಳಿಸಿದರು.

ಕೇಂದ್ರ ಉದ್ಘಾಟಿಸಿದ ಕರ್ನಾಟಕ ರಾಜ್ಯ ಜೈವಿಕ ಇಂಧನ ಅಭಿವೃದ್ಧಿ ಮಂಡಳಿ ಅಧ್ಯಕ್ಷ ವೈ.ವಿ. ರಾಮಕೃಷ್ಣ ಅವರು, ಜೈವಿಕ ಇಂಧನ ಸಸಿಗಳಿಂದ ರಾಜ್ಯದಲ್ಲಿ ಪ್ರತಿ ವರ್ಷ 135 ದಶಲಕ್ಷ ಲೀಟರ್ ಇಥೆನಾಲ್ ಉತ್ಪಾದನೆ ಆಗುತ್ತಿದೆ. ಶೇ 5 ರಿಂದ ಶೇ 20 ರಷ್ಟು ಇಥೆನಾಲ್ ಅನ್ನು ಡೀಸೆಲ್‌ನಲ್ಲಿ ಮಿಶ್ರಣ ಮಾಡಬಹುದು ಎಂದು ತಿಳಿಸಿದರು.

ಕರ್ನಾಟಕದಲ್ಲಿ ಈಗಾಗಲೇ ಶೇ 5ರಷ್ಟುಇಥೆನಾಲ್ ಅನ್ನು ಡೀಸೆಲ್‌ನಲ್ಲಿ ಮಿಶ್ರಣ ಮಾಡಲಾಗುತ್ತಿದೆ. ಶೇ 20ರವರೆಗೂ ಮಿಶ್ರಣ ಮಾಡಬಹುದಾದಷ್ಟುಉತ್ಪಾದನೆ ಆಗುತ್ತಿದೆ ಎಂದು ಅವರು ಹೇಳಿದರು.

ರೈತರು ತಮ್ಮ ಹಾಳು ಬಿದ್ದ ಜಮೀನಿನಲ್ಲಿ ಹೊಂಗೆ, ಬೇವು, ಹಿಪ್ಪೆ ಮತ್ತಿತರ ಜೈವಿಕ ಇಂಧನ ಸಸಿಗಳನ್ನು ಬೆಳೆಯಬೇಕು. ಹತ್ತಿ ಗಿಡ ಮತ್ತು ತೊಗರಿ ಕಟ್ಟಿಗೆಯಿಂದಲೂ ಇಥೆನಾಲ್ ಅನ್ನು ಉತ್ಪಾದಿಸಬಹುದು. ಈ ಕುರಿತು ಒಟ್ಟಾಗಿ ಜಾಗೃತಿ ಮೂಡಿಸುವುದೇ ಕೇಂದ್ರದ ಉದ್ದೇಶ. ಜೈವಿಕ ಇಂಧನ ಜಾಗೃತಿ ಜನಾಂದೋಲನ ಆಗಬೇಕು ಎಂದು ಸಲಹೆ ಮಾಡಿದರು.

ಹೊಂಗೆ ಮರದ ಹಿಂಡಿಯನ್ನು ಬಳಸಿ ಬೆಳೆಗಳಲ್ಲಿ ಕೀಟ ನಿರ್ವಹಿಸಬಹುದು ಎಂದು ರಾಯಚೂರು ಕೃಷಿ ವಿಶ್ವವಿದ್ಯಾಲಯದ ವಿಸ್ತರಣಾ ನಿರ್ದೇಶಕ ಕೆ.ಪಿ. ವಿಶ್ವನಾಥ ತಿಳಿಸಿದರು.

ವಿಶ್ವವಿದ್ಯಾಲಯದ ಸಂಶೋಧನಾ ನಿರ್ದೇಶಕ ಡಾ. ಬಿ.ಎಸ್. ಜನಗೌಡರ, ಕೃಷಿ ಜಂಟಿ ನಿರ್ದೇಶಕ ಡಾ. ಜಿ.ಟಿ. ಪುಥ್ರಾ, ತೋಟಗಾರಿಕೆ ಕಾಲೇಜು ಡೀನ್ ಡಾ. ರೇವಣಪ್ಪ, ಕೃಷಿ ವಿಜ್ಞಾನ ಕೇಂದ್ರದ ಕಾರ್ಯಕ್ರಮ ಸಂಯೋಜಕ ಡಾ. ರವಿ ದೇಶಮುಖ, ಕೃಷಿ ಸಂಶೋಧನಾ ಕೇಂದ್ರದ ಮುಖ್ಯಸ್ಥ ಡಾ. ಸಿ.ಆರ್. ಕೊಂಡಾ, ಕೃಷಿ ವಿಜ್ಞಾನಿಗಳಾದ ಡಾ. ಸುನೀಲ್‌ಕುಮಾರ್ ಎನ್.ಎಂ., ಡಾ. ಕೆ. ಭವಾನಿ, ಡಾ. ಮಲ್ಲಿಕಾರ್ಜುನ ಉಪಸ್ಥಿತರಿದ್ದರು. 

ಇಂದು, ನಾಳೆ ಉಚಿತ ನರ, ಮೂಳೆ ತಪಾಸಣಾ ಶಿಬಿರ
ಬೀದರ್:
ನಗರದ ಹೈಟೆಕ್ ಬೀದರ ಎಂಆರ್‌ಐ ಹಾಗೂ ಡಯಾಗ್ನೊಸ್ಟಿಕ್ ಕೇಂದ್ರದಲ್ಲಿ ಯಶಸ್ವಿನಿ ಹಾಗೂ ಬಿಪಿಎಲ್ ಕಾರ್ಡುದಾರರಿಗೆ ಇದೇ 8 ಮತ್ತು 9 ರಂದು ಉಚಿತ ನರ ಹಾಗೂ ಮೂಳೆ ತಪಾಸಣಾ ಶಿಬಿರ ನಡೆಯಲಿದೆ. ಶಿಬಿರ ಬೆಳಿಗ್ಗೆ 9 ರಿಂದ ಮಧ್ಯಾಹ್ನ 2 ಗಂಟೆವರೆಗೆ ನಡೆಯಲಿದ್ದು, ಡಾ. ರಾಜಶೇಖರ ಸೇಡಂಕರ, ಡಾ. ಶರಣಬಸಪ್ಪ ಎಚ್. ಹಾಗೂ ಡಾ. ಕಿಣ್ಣಿಕರ ತಪಾಸಣೆ ನಡೆಸುವರು ಎಂದು ಹೇಳಿಕೆ ತಿಳಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT