ADVERTISEMENT

ರೈತನಿಗೆ ಕೈಕೊಟ್ಟ ಬೆಳೆ, ಕೈಹಿಡಿದ ರೇಷ್ಮೆ

​ಪ್ರಜಾವಾಣಿ ವಾರ್ತೆ
Published 24 ಡಿಸೆಂಬರ್ 2013, 6:05 IST
Last Updated 24 ಡಿಸೆಂಬರ್ 2013, 6:05 IST

ಔರಾದ್‌: ಇಪ್ಪತ್ತು ಎಕರೆಗೂ ಜಾಸ್ತಿ ಜಮೀನು ಇದ್ದರೂ ಸಂಕಷ್ಟದಲ್ಲೇ ಇದ್ದ ರೈತ ಕುಟುಂಬ ವೊಂದಕ್ಕೆ ರೇಷ್ಮೆ ಕೃಷಿ ನೆರವಿಗೆ ಬಂದಿದೆ.
ತಾಲ್ಲೂಕು ಕೇಂದ್ರದಿಂದ 20 ಕಿಲೋ ಮೀಟರ್‌ ದೂರದ ಭಂಡಾರಕುಮಟಾ ಗ್ರಾಮದ ಪಟೇಲ್‌ ಸಹೋದರರು ರೇಷ್ಮೆ ಕೃಷಿಯಲ್ಲಿ ಯಶಸ್ವಿಯಾಗಿದ್ದಾರೆ.

ಮಹಾರಾಷ್ಟ್ರದ ಶಾವು ಕಾಲೇಜಿನಿಂದ ಬಿ.ಎ. ಮುಗಿಸಿದ ಜಾಕಿರ್‌ ಪಟೇಲ್‌  ಈ ಯಶಸ್ಸಿನ ರೂವಾರಿ. ತಂದೆ ಮೆಹಮೂದ್‌ ಖಾನ್‌ ಮತ್ತು ಮೂವರು ಸಹೋದರರು ಹೊಲದಲ್ಲಿ ಮೈಮುರಿದು ದುಡಿದರೂ ಸಂಕಷ್ಟ ಮಾತ್ರ ತಪ್ಪುತ್ತಿರಲಿಲ್ಲ. ಒಂದೊಂದು ವರ್ಷ ಹಾಕಿದಷ್ಟು ಬೆಳೆ ಬಾರದೆ ಸಾಲ ಮಾಡುವುದು ಅನಿವಾ ರ್ಯವಾಗಿತ್ತು. ಇಂತಹ ಸಂದರ್ಭದಲ್ಲಿ ಇವರನ್ನು ರೇಷ್ಮೆ ಕೃಷಿ ಕೈಹಿಡಿದು ಮೇಲೆ ತಂದಿದೆ.

ಆರಂಭದಲ್ಲಿ 4 ಎಕರೆಯಲ್ಲಿ ರೇಷ್ಮೆ ಕೃಷಿ ಮಾಡಿದ ಇವರಿಗೆ ಅಷ್ಟೇನು ಲಾಭವಾಗಲಿಲ್ಲ. ರೋಗಬಾಧೆಯಿಂದ ಹುಳುಗಳ ಸಾವು ಮತ್ತು ಸೂಕ್ತ ಬೆಲೆ ಸಿಗದ ಕಾರಣ ಇದರ ಸಹವಾಸವೇ ಸಾಕು ಅನಿಸಿಬಿಟ್ಟಿತ್ತು. ಆದರೂ    ಛಲ ಬಿಡದೇ  ಮುಂದುವರೆ ಸಿಕೊಂಡು ಬಂದರು.

ಈಗ 12 ಎಕರೆ ಪ್ರದೇಶದಲ್ಲಿ ರೇಷ್ಮೆ ಕೃಷಿ ಮಾಡುತ್ತಿದ್ದಾರೆ. ಒಂದರಲ್ಲಿ 500 ಮೊಟ್ಟೆ ಇರುವ ಒಟ್ಟು ಮೂರು ರೇಷ್ಮೆ ಉತ್ಪಾದಕ ಘಟಕಗಳಿವೆ. ಒಂದು ಘಟಕದಲ್ಲಿ 3 ರಿಂದ ಮೂರೂವರೆ ಕ್ವಿಂಟಲ್‌ ರೇಷ್ಮೆ ಉತ್ಪನ್ನ ಬರುತ್ತದೆ. ಒಂದು ಕೆ.ಜಿ. ರೇಷ್ಮೆಗೆ ರೂ400 ರಿಂದ ರೂ500 ಬೆಲೆ ಸಿಗುತ್ತದೆ. ಹೀಗಾಗಿ ಒಂದು ಘಟಕದಲ್ಲಿ ರೂ1.25 ಲಕ್ಷ ಹಣ ಬರುತ್ತದೆ. ಇದು 25 ರಿಂದ 30 ದಿನಗಳ ಒಳಗೆ ಉತ್ಪನ್ನ ಬರಲಿರುವ ಹಿನ್ನೆಲೆಯಲ್ಲಿ ವರ್ಷದಲ್ಲಿ ಮೂರು ಘಟಕ ಸೇರಿ 6 ರಿಂದ 8 ಬಾರಿ ಉತ್ಪನ್ನ ತೆಗೆಯುತ್ತಾರೆ. ‘ಸರಾಸರಿ 25 ರಿಂದ 30 ಕ್ವಿಂಟಲ್‌ ಇಳುವರಿ ಬಂದು ರೂ 8 ರಿಂದ 10 ಲಕ್ಷ ಮೌಲ್ಯದ ರೇಷ್ಮೆ ಉತ್ಪಾದಿಸುತ್ತೆವೆ’ ಎಂದು ಜಾಕಿರ್ ಪಟೇಲ್‌ ಆತ್ಮವಿಶ್ವಾಸದಿಂದ ಹೇಳುತ್ತಾರೆ.

ಇವರು ಬೆಳೆದ ಸಿಎಸ್‌ಆರ್ ಬಿಳಿಗೂಡು ತಳಿಯ ರೇಷ್ಮೆಗೆ ಮಾರುಕಟ್ಟೆಯಲ್ಲಿಯೂ ಬೇಡಿಕೆ ಇದೆ. ಬೆಂಗಳೂರು ಪಕ್ಕದ ರಾಮನಗರದಲ್ಲಿ ದೊಡ್ಡ ರೇಷ್ಮೆ ಮಾರುಕಟ್ಟೆ ಇರುವುದರಿಂದ ರೇಷ್ಮೆ ಗೂಡನ್ನು ಅಲ್ಲಿಗೆ ಸಾಗಿಸು ತ್ತಾರೆ. ಮಾರಾಟವಾದ ದಿನ ಕೈಯಲ್ಲಿ ಹಣ ಬರುತ್ತೆ. ಜೊತೆಗೆ ಇವರು  ಹಿಂದುಳಿದ ತಾಲ್ಲೂಕಿನ ವರಾಗಿರುವು ದರಿಂದ ಸರ್ಕಾರ ಕೆ.ಜಿಗೆ ರೂ 40ರಿಂದ ರೂ50 ಪ್ರೋತ್ಸಾಹ ಧನ ನೀಡುತ್ತದೆ.
‘ರೇಷ್ಮೆ ಬೆಳೆಯುವರಿಗೆ ಸರ್ಕಾರದ ಸಹಕಾರ ಇದೆ. ಸೂಕ್ತ ತರಬೇತಿ ನೀಡಲಾಗುತ್ತದೆ. ಹಿಪ್ಪುನೇರಳೆ ಕಡ್ಡಿ ಮತ್ತು ಮೊಟ್ಟೆಗಳು ಪೂರೈಸಲಾಗು ತ್ತದೆ. ಇಲಾಖೆ ಮತ್ತು ಬ್ಯಾಂಕ್‌ ಗಳಿಂದ ಒಂದಿಷ್ಟು ಆರ್ಥಿಕ ನೆರವು ಸಿಗುತ್ತದೆ. ಮನಸ್ಸು ಮಾಡಿ ಸ್ವಲ್ಪ ಕಷ್ಟಪಟ್ಟರೆ ನಾಲ್ಕೈದು ಎಕರೆ ನೀರಾ ವರಿ ಜಮೀನು ಹೊಂದಿದ ರೈತರು ತಿಂಗಳಿಗೆ ರೂ 50 ರಿಂದ 60 ಸಾವಿರ ಮಾಡಿಕೊ ಳ್ಳಬಹುದು’ ಎಂದು ಜಾಕಿರ್ ಪಟೇಲ್‌ ಸಲಹೆನೀಡುತ್ತಾರೆ.

ರೇಷ್ಮೆ ಕೃಷಿಯಲ್ಲಿ ಜಾಕಿರ್‌ ಪಟೇಲ್ ಅವರ ಹೆಸರು ಮಹಾರಾಷ್ಟ್ರ ಮತ್ತು ಆಂಧ್ರಪ್ರದೇಶ ದಲ್ಲೂ ಪರಿಚಯವಾಗಿದೆ. ನಿಜಾಮಾಬಾದ್‌, ಬೋದನ, ನಾರಾಯಣಖೇಡ್, ಪರಳಿ, ನಳೆಗಾಂವ್‌, ಅಹಮ್ಮದಪುರ ಸೇರಿದಂತೆ ವಿವಿಧೆ ಡೆಯ ರೈತರು ಇವರ ಸಲಹೆ ಕೇಳು ಬರುತ್ತಾರೆ. ತಮ್ಮಲ್ಲಿಗೆ ಬಂದ ರೈತರಿಗೆ ಉತ್ತಮ ಮಾರ್ಗದರ್ಶನ ನೀಡಿ ರೇಷ್ಮೆ ಬೆಳೆಸಲು ಪ್ರೋತ್ಸಾಹಿಸುತ್ತಾರೆ (09686774060)

‘ರೇಷ್ಮೆ ಲಾಭದಾಯಕ ಕೃಷಿ’
ಭಂಟಾರಕುಮಟಾದ ರೈತ ಜಾಕಿರ್‌ ಪಟೇಲ್‌ ರೇಷ್ಮೆ ಕೃಷಿಯಲ್ಲಿ ಯಶಸ್ಸು ಕಂಡವರು. ಗ್ರಾಮದಲ್ಲಿ ಈಗ 25ಕ್ಕೂ ಹೆಚ್ಚು ರೈತರು ಸುಮಾರು 50 ಎಕರೆ ಪ್ರದೇಶದಲ್ಲಿ ರೇಷ್ಮೆ ಬೆಳೆಯುತ್ತಿದ್ದಾರೆ. ಹೀಗಾಗಿ ಭಂಡಾರಕುಮಟಾ ರೇಷ್ಮೆ ಗ್ರಾಮ ಎಂಬ ಖ್ಯಾತಿ ಪಡೆದಿದೆ. ಇವರಿಂದ ಪ್ರೇರಣೆ ಪಡೆದು ಖೇರ್ಡಾ, ಸಾವರಗಾಂವ್‌, ದಾಬಕಾ, ಅಕನಾಪುರ ಸೇರಿದಂತೆ ತಾಲ್ಲೂಕಿನ ವಿವಿಧೆಡೆ ರೈತರು ರೇಷ್ಮೆ ಬೆಳೆಯಲು ಮುಂದಾಗಿದ್ದಾರೆ. ಪದವಿ ಪಡೆದ ಎಷ್ಟೋ ರೈತರ ಮಕ್ಕಳು ನೌಕರಿ ಬದಲು ರೇಷ್ಮೆ ಕೃಷಿ ಮಾಡಿ ಜೀವನ ಕಟ್ಟಕೊಳ್ಳುವಂತೆ ಪ್ರೋತ್ಸಾಹಿಸುತ್ತಿದ್ದೇವೆ.

ರೇಷ್ಮೆ ಗೂಡಿನ ಮನೆ ಕಟ್ಟಲು ಸರ್ಕಾರದ ಸಹಾಯಧನ ರೂ75 ಸಾವಿರ ದಿಂದ ರೂ 1 ಲಕ್ಷಕೆ ಹೆಚ್ಚಿದೆ. ವಿವಿಧ ಬ್ಯಾಂಕ್‌ಗಳಿಂದ ಸಾಲ ಸಗುತ್ತದೆ. ರೇಷ್ಮೆ ಕಡ್ಡಿ ನಾಟಿ ಮಾಡಲು ಎಕರೆಗೆ ರೂ 7200 ಮತ್ತು 1 ಕ್ವಿಂಟಲ್‌ ರೇಷ್ಮೆ ಉತ್ಪಾದಿಸಿದರೆ ರೂ 4 ಸಾವಿರ ಪ್ರೋತ್ಸಾಹ ಧನ ನೀಡಲಾಗುವುದು.
–ಕುಪೇಂದ್ರ ಎಸ್. ಬಡಿಗೇರ್, ರೇಷ್ಮೆ ವಲಯ ಅಧಿಕಾರಿ, ಭಂಡಾರಕುಮಟಾ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT