ADVERTISEMENT

ಲಿಗಾಡೆತಾಯಿ `ಭಕ್ತಿಭವನ' ಸ್ಮಾರಕವಾಗಲಿ

​ಪ್ರಜಾವಾಣಿ ವಾರ್ತೆ
Published 2 ಜುಲೈ 2013, 5:30 IST
Last Updated 2 ಜುಲೈ 2013, 5:30 IST

ಬಸವಕಲ್ಯಾಣ: ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷೆಯಾಗಿದ್ದ ಸಾಹಿತಿ ಜಯದೇವಿ ತಾಯಿ ಲಿಗಾಡೆಯವರು ಕೊನೆಗಾಲದಲ್ಲಿ ವಾಸಿಸಿದ್ದ ಮತ್ತು ಅವರ ಸಮಾಧಿ ಸ್ಥಳ ಇರುವ ಬಸವಕಲ್ಯಾಣದಲ್ಲಿನ ಭಕ್ತಿಭವನವನ್ನು ಸರ್ಕಾರ ಸ್ಮಾರಕವನ್ನಾಗಿ ಮಾಡಬೇಕು ಎಂದು ಲೇಖಕ ದೇವೇಂದ್ರ ಬರಗಾಲೆ ಆಗ್ರಹಿಸಿದ್ದಾರೆ.

ತಾಲ್ಲೂಕಿನ ನಾರಾಯಣಪುರದ ಸರ್ಕಾರಿ ಪ್ರೌಢಶಾಲೆಯಲ್ಲಿ ಕನ್ನಡ ಸೇವಾ ಪ್ರತಿಷ್ಠಾನದಿಂದ ಸೋಮವಾರ ಹಮ್ಮಿಕೊಂಡ ಜಯದೇವಿ ತಾಯಿಯ ಜನ್ಮದಿನಾಚರಣೆಯಲ್ಲಿ ಮಾತನಾಡಿದರು.

ಜಯದೇವಿತಾಯಿ ಕನ್ನಡ ಮತ್ತು ಮರಾಠಿ ಭಾಷೆಯಲ್ಲಿ ಕೃತಿಗಳನ್ನು ರಚಿಸಿ ಸಾಹಿತ್ಯ ಸೇವೆ ಮಾಡಿದ್ದಾರೆ. ಅವರ ಕನ್ನಡ ಕೃತಿಗಳು ಬಹುಮಹತ್ವದ್ದಾಗಿವೆ ಎಂದರು.

ಶಿಕ್ಷಕಿ ಪವಿತ್ರಾ ಗಿರಗಂಟೆ ಮಾತನಾಡಿ ನಿಜಾಮ ಅರಸರ ಕಾಲದಲ್ಲಿ ರಜಾಕಾರರ ದಬ್ಬಾಳಿಕೆ ಹೆಚ್ಚಾದಾಗ ಹೈದರಾಬಾದ ಕರ್ನಾಟಕ ಭಾಗದ ಕನ್ನಡಿಗರಿಗೆ ತಮ್ಮ ಮನೆಯಲ್ಲಿ ಆಶ್ರಯ ಕೊಟ್ಟಿದ್ದರು. ಮಹಾರಾಷ್ಟ್ರದ ಸೊಲ್ಲಾಪುರ ಕರ್ನಾಟಕಕ್ಕೆ ಸೇರಬೇಕು ಎಂಬ ಕನಸು ಅವರದ್ದಾಗಿತ್ತು ಎಂದು ಹೇಳಿದರು.

ನಿವೃತ್ತ ಶಿಕ್ಷಕ ಬಕ್ಕಯ್ಯ ಸ್ವಾಮಿ ಮಾತನಾಡಿ ಒಬ್ಬ ಸಾಹಿತಿಯಾಗಿ ಜಯದೇವಿತಾಯಿ ಕನ್ನಡದ ಅಪಾರ ಸೇವೆ ಮಾಡಿದ್ದಾರೆ. ಅವರನ್ನು ಉಪೇಕ್ಷಿಸುವುದು ಸಲ್ಲದು ಎಂದರು. ಹಣಮಂತರಾಯ ವಿಸಾಜಿ ಮಾತನಾಡಿ ಲಿಗಾಡೆತಾಯಿಯವರ ಹತ್ತಿರ ಅಪಾರ ಸಂಪತ್ತಿದ್ದರೂ ಸರಳ ಜೀವನ ನಡೆಸಿದ್ದರು. ತ್ಯಾಗಜೀವಿ ಆಗಿದ್ದರು ಎಂದರು.

ಭೀಮಾಶಂಕರ ಮಾಶಾಳಕರ್ ಮಾತನಾಡಿದರು. ಎಸ್.ಜಿ.ಹುಡೇದ್ ಉದ್ಘಾಟಿಸಿದರು. ಮುಖ್ಯ ಶಿಕ್ಷಕಿ ಶಕುಂತಲಾ ದಾಂಡೇಕರ್ ಅಧ್ಯಕ್ಷತೆ ವಹಿಸಿದ್ದರು. ಉಪನ್ಯಾಸಕ ಕ್ಷೇಮಲಿಂಗ ಗದ್ಲೇಗಾಂವ ನಿರೂಪಿಸಿದರು. ಸಾವಿತ್ರಮ್ಮ ಜಮಾದಾರ ವಂದಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.