ADVERTISEMENT

ವಚನ ವಿಜಯೋತ್ಸವಕ್ಕೆ ಸಂಭ್ರಮದ ತೆರೆ

​ಪ್ರಜಾವಾಣಿ ವಾರ್ತೆ
Published 19 ಫೆಬ್ರುವರಿ 2011, 8:20 IST
Last Updated 19 ಫೆಬ್ರುವರಿ 2011, 8:20 IST
ವಚನ ವಿಜಯೋತ್ಸವಕ್ಕೆ ಸಂಭ್ರಮದ ತೆರೆ
ವಚನ ವಿಜಯೋತ್ಸವಕ್ಕೆ ಸಂಭ್ರಮದ ತೆರೆ   

ಬೀದರ್: ವಚನ ವಿಜಯೋತ್ಸವದ ಮೂರನೇ ದಿನವಾದ ಶುಕ್ರವಾರ ನಗರದಲ್ಲಿ ಎರಡು ಕುದುರೆಗಳ ಬೆಳ್ಳಿ ರಥದಲ್ಲಿ ಲಿಂಗಾಯತ ಧರ್ಮಗ್ರಂಥ ಹಾಗೂ ವಚನ ಸಾಹಿತ್ಯದ ಭವ್ಯ ಮೆರವಣಿಗೆ ನಡೆಯಿತು. ‘ಕಳಬೇಡ, ಕೊಲಬೇಡ, ಹುಸಿಯ ನುಡಿಯಲೂ ಬೇಡ ವಚನ ಹೇಳುವ ಮೂಲಕ ಜಿಲ್ಲಾಧಿಕಾರಿ ಸಮೀರ್ ಶುಕ್ಲಾ ಅವರು ನಗರದ ಬಸವೇಶ್ವರ ವೃತ್ತದಲ್ಲಿ ಮೆರವಣಿಗೆಗೆ ಚಾಲನೆ ನೀಡಿದರು. ಬೀದರ್ ಜಿಲ್ಲೆ ಬಸವಾದಿ ಶರಣರ ಪುಣ್ಯ ಭೂಮಿ ಆಗಿದೆ. ಇಲ್ಲಿ ಅಭಿವೃದ್ಧಿ ಕಾರ್ಯಗಳು ಭರದಿಂದ ನಡೆದಿವೆ ಎಂದು ಹೇಳಿದರು. ಆಲಮೇಲ್ ವಿರಕ್ತಮಠದ ಜಗದೇವ ಮಲ್ಲಿಬೊಮ್ಮ ಸ್ವಾಮೀಜಿ ಧ್ವಜಾಹರೋಹಣ ಷಟ್‌ಸ್ಥಲ ಧ್ವಜಾರೋಹಣ ಮಾಡಿದರು.

ವಚನ ಸಾಹಿತ್ಯ ಅಮೂಲ ಸಾಹಿತ್ಯವಾಗಿದೆ. ಹನ್ನೆರಡನೇ ಶತಮಾನದ ಶರಣರು ವಚನಗಳನ್ನು ರಚಿಸಿ ರಕ್ಷಿಸಿಕೊಂಡು ಬಂದಿದ್ದಾರೆ. ಹೀಗಾಗಿ ಮುಂದುಯೂ ರಕ್ಷಿಸಿಕೊಂಡು ಹೋಗುವ ಕೆಲಸ ಆಗಬೇಕಿದೆ ಎಂದು ಬಸವಸೇವಾ ಪ್ರತಿಷ್ಠಾನ ಅಕ್ಕ ಅನ್ನಪೂರ್ಣ ಹೇಳಿದರು. ಪ್ರತಿಯೊಬ್ಬರು ತಮ್ಮ ಮನೆಯಲ್ಲಿ ವಚನಗಳ ಪುಸ್ತಕ ಇರಿಸಿಕೊಳ್ಳಬೇಕು. ಅವುಗಳನ್ನು ಅರ್ಥ ಮಾಡಿಕೊಂಡು ಜೀವನದಲ್ಲಿ ಆಚರಣೆಗೆ ತರಬೇಕು ಎಂದು ಸಲಹೆ ಮಾಡಿದರು.

ಶಾಸಕರಾದ ಬಂಡೆಪ್ಪ ಕಾಶೆಂಪೂರ್, ರಹೀಮ್‌ಖಾನ್, ಜಿಲ್ಲಾ ಪಂಚಾಯಿತಿ ಅಧ್ಯಕ್ಷ ಕುಶಾಲ ಪಾಟೀಲ್, ಸದಸ್ಯ ಡಾ. ಶೈಲೇಂದ್ರ ಬೆಲ್ದಾಳೆ, ಬಾಬುರಾವ ಮದಕಟ್ಟಿ, ರಘುನಾಥ ಮಲ್ಕಾಪುರೆ ಮತ್ತಿತರರು ಉಪಸ್ಥಿತರಿದ್ದರು. ಬಸವೇಶ್ವರ ವೃತ್ತದಿಂದ ಆರಂಭಗೊಂಡ ಮೆರವಣೆಗೆಯು ಅಂಬೇಡ್ಕರ್ ವೃತ್ತ, ಶಿವಾಜಿ ವೃತ್ತ, ನೆಹರು ಸ್ಟೇಡಿಯಂ, ಮಡಿವಾಳ ವೃತ್ತ, ಹೊಸ ಬಸ ನಿಲ್ದಾಣದ ಮೂಲಕ ಹಾದು ಬಸವಗಿರಿಗೆ ತೆರಳಿ ಸಮಾವೇಶಗೊಂಡಿತ್ತು. ಮಹಿಳೆಯರು ಲಿಂಗಾಯತ ಧರ್ಮಗ್ರಂಥವನ್ನು ತಲೆ ಮೇಲೆ ಇಟ್ಟುಕೊಂಡಿದ್ದರು. ಮಕ್ಕಳ ಮಲ್ಲಕಂಬ ಪ್ರದರ್ಶನ ಗಮನ ಸೆಳೆಯಿತು. ಡೊಳ್ಳು ಕುಣಿತ, ಮಹಿಳೆಯರ ಕೊಲಾಟವೂ ಆಕರ್ಷಕ ಆಗಿತ್ತು. ಮಧ್ಯಾಹ್ನ ವಚನ ಸಾಹಿತ್ಯದ ಪಟ್ಟಾಭಿಷೇಕದ ಚತುರ್ಥ ಮಹೋತ್ಸವ ಹಾಗೂ ಸಮಾರೋಪ ಸಮಾರಂಭ ನಡೆಯಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.