ADVERTISEMENT

ವಿದ್ಯಾರ್ಥಿಗಳ ಜತೆಗೆ ಶ್ರೀಗಳ ಸಂವಾದ

​ಪ್ರಜಾವಾಣಿ ವಾರ್ತೆ
Published 8 ಡಿಸೆಂಬರ್ 2012, 6:37 IST
Last Updated 8 ಡಿಸೆಂಬರ್ 2012, 6:37 IST

ಬೀದರ್:  ನಗರದಲ್ಲಿ ನಡೆಯುತ್ತಿರುವ ಶರಣ ಸಂಸ್ಕೃತಿ ಉತ್ಸವದ ಸಾನಿಧ್ಯ ವಹಿಸಿರುವ ಚಿತ್ರದುರ್ಗದ ಶಿವಮೂರ್ತಿ ಮುರುಘಾ ಶರಣರು ಮೊದಲ ದಿನ ಸಭಾಂಗಣದಲ್ಲಿದ್ದ ವಿದ್ಯಾರ್ಥಿಗಳೊಂದಿಗೆ ಸಂವಾದ ನಡೆಸುವ ಮೂಲಕ ಉತ್ಸಾಹ ಮೂಡಿಸಿದರು.
ಒಲಂಪಿಕ್ ಕ್ರೀಡಾಕೂಟದಲ್ಲಿ ಭಾರತ ಗೆದ್ದ ಚಿನ್ನದ ಪದಕ ಎಷ್ಟು? ಭವಿಷ್ಯದಲ್ಲಿ ಏನಾಗಬೇಕು ಎಂದು ಬಯಸಿದ್ದೀರಿ; ಜೀವನದಲ್ಲಿ ಎಂದಾದರೂ ಕಳವು ಮಾಡಿದ್ದೀರಾ ಎಂಬ ಪ್ರಶ್ನೆಗಳ ಮೂಲಕ ಶ್ರೀಗಳು ನೇರ ಸಂವಾದ ನಡೆಸಿದರು.

`ಯಾರು ಎಂದಾದರೂ ಕಳವು ಮಾಡಿದ್ದೀರಾ. ಇದ್ದರೆ ಕೈ ಎತ್ತಿ' ಎಂಬಪ್ರಶ್ನೆಯೇ ಮೊದಲಿಗೆ ಬಂದಾಗ ವಿದ್ಯಾರ್ಥಿಗಳು ತಬ್ಬಿಬ್ಬು. ಮೊದಲು ಯಾರು ಕೈ ಎತ್ತಲಿಲ್ಲ. ನಿಜ ಹೇಳಿ ಎಂದು ಶ್ರೀಗಳು ಕೇಳಿದಾಗ `ಬಹುತೇಕ ವಿದ್ಯಾರ್ಥಿಗಳು ಕೈ ಎತ್ತಿದರು!

ಇದಕ್ಕೆ ಪ್ರತಿಕ್ರಿಯಿಸಿದ ಅವರು, `ಬೇಕಾದ ವಸ್ತುಗಳು ಕೇಳಿ ಪಡೆಯಬೇಕೇ ವಿನಾಹ ಕಳ್ಳತನ ಮಾಡಬಾರದು. ಮೋಸ, ವಂಚನೆ ಮಾಡುವುದರಿಂದ ವ್ಯಕ್ತಿತ್ವ ನಿರ್ಮಾಣ ಆಗುವುದಿಲ್ಲ. ಪ್ರಾಮಾಣಿಕತೆಯಿಂದ ಬದುಕು ನಡೆಸಲು ಪ್ರಯತ್ನಿಸಬೇಕು' ಎಂದು ಕಿವಿಮಾತು ಹೇಳಿದರು.

ಒಲಂಪಿಕ್‌ನಲ್ಲಿ ಭಾರತ ಗಳಿಸಿದ ಪದಕ ಎಷ್ಟು ಎಂಬ ಪ್ರಶ್ನೆಗೂ ವಿಭಿನ್ನ ಉತ್ತರಗಳು ಬಂದವು. ಪ್ರಶ್ನೆಯೊಂದಕ್ಕೆ ವಿದ್ಯಾರ್ಥಿನಿಯೊಬ್ಬಬರು `ಬದುಕಿನಲ್ಲಿ ನಾನು ಒಳ್ಳೆಯ ಮನುಷ್ಯಳಾಗಲು ಬಯಸುತ್ತೇನೆ' ಎಂದು ಉತ್ತರಿಸಿದಳು. ಇದಕ್ಕೆ ಆಕೆಗೆ ಅಭಿನಂದನೆಯ ಗೌರವವೂ ದೊರೆಯಿತು. ಶ್ರೀಗಳ ಈ ಚರ್ಚೆ, ಸಂವಾದ ವಿದ್ಯಾರ್ಥಿಗಳಷ್ಟೇ ಅಲ್ಲ, ಸಭಾಂಗಣದಲ್ಲಿದ್ದ ಹಿರಿಯರಿಗೂ ಕುತೂಹಲ ಮೂಡಿಸಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.