ADVERTISEMENT

ಸೇತುವೆ ಶಿಥಿಲ: ಪ್ರಯಾಣಿಕರಿಗೆ ಆತಂಕ

​ಪ್ರಜಾವಾಣಿ ವಾರ್ತೆ
Published 13 ಅಕ್ಟೋಬರ್ 2017, 5:35 IST
Last Updated 13 ಅಕ್ಟೋಬರ್ 2017, 5:35 IST
ಬೀದರ್‌– ಔರಾದ್ ರಸ್ತೆಯಲ್ಲಿ ಮಾಂಜ್ರಾ ನದಿಗೆ ನಿರ್ಮಿಸಿರುವ ಸೇತುವೆ
ಬೀದರ್‌– ಔರಾದ್ ರಸ್ತೆಯಲ್ಲಿ ಮಾಂಜ್ರಾ ನದಿಗೆ ನಿರ್ಮಿಸಿರುವ ಸೇತುವೆ   

ಔರಾದ್: ಬೀದರ್‌– ಔರಾದ್ ರಾಜ್ಯ ಹೆದ್ದಾರಿಯಲ್ಲಿನ ಬರುವ ಕೌಠಾ(ಬಿ) ಸೇತುವೆ ಶಿಥಿಲಾವಸ್ಥೆಗೆ ತಲುಪಿದ್ದು, ಪ್ರಯಾಣಿಕರಲ್ಲಿ ಆತಂಕ ಮನೆಮಾಡಿದೆ. ಸೇತುವೆ ಒಂದು ಭಾಗದ ತಡೆಗೋಡೆ ಕುಸಿದಿದ್ದು, ಜನರಿಗೆ ಆತಂಕ ಶುರುವಾಗಿದೆ. ಸಾಮಾಜಿಕ ಹೋರಾಟಗಾರ ಗುರುನಾಥ ವಡ್ಡೆ ಅವರು ಸೇತುವೆಯ ಸ್ಥಿತಿಗತಿ ಕುರಿತು ಸರ್ಕಾರಕ್ಕೆ ಮಾಹಿತಿ ಸಲ್ಲಿಸಿದ್ದಾರೆ.

‘ನಾಲ್ಕು ದಶಕದ ಹಿಂದೆ ಮಾಂಜ್ರಾ ನದಿಗೆ ಅಡ್ಡಲಾಗಿ ನಿರ್ಮಿಸಲಾದ ಕೌಠಾ ಸೇತುವೆ ಒಂದೊಂದು ಭಾಗ ಕುಸಿಯುವ ಹಂತಕ್ಕೆ ತಲುಪಿದೆ. ಯಾವುದೇ ಸಮಯದಲ್ಲಿ ಅಪಾಯ ಸಂಭವಿಸಬಹುದು. ಹೊಸ ಸೇತುವೆ ನಿರ್ಮಾಣವಾಗುವ ತನಕ ಪರ್ಯಾಯ ವ್ಯವಸ್ಥೆ ಮಾಡುವುದು ಸೂಕ್ತ’ ಎಂದು ಅವರು ಸರ್ಕಾರವನ್ನು ಆಗ್ರಹಿಸಿದ್ದಾರೆ.

ಬೀದರ್‌– ಔರಾದ್ ರಸ್ತೆ ಮೂರು ರಾಜ್ಯಗಳಿಗೆ ಸಂಪರ್ಕ ಕಲ್ಪಿಸುತ್ತದೆ. ಸಿಖ್ ಯಾತ್ರಿಕರ ವಾಹನಗಳು ಇದೇ ರಸ್ತೆಯಲ್ಲಿ ಸಂಚರಿಸುತ್ತವೆ. 50ರಿಂದ 60 ಟನ್ ಭಾರದ ಮರಳು ಸಾಗಿಸುವ ಲಾರಿಗಳ ಓಡಾಟ ಇಲ್ಲಿ ಸಾಮಾನ್ಯವಾಗಿದೆ. ಕೇಂದ್ರ ಸರ್ಕಾರ ಈ ರಸ್ತೆಯನ್ನು ರಾಷ್ಟ್ರೀಯ ಹೆದ್ದಾರಿಯಾಗಿಸಲು ತಾತ್ವಿಕ ಅನುಮೋದನೆ ನೀಡಿದೆ. ಆದರೆ ರಸ್ತೆಯ ಸ್ಥಿತಿ ಮಾತ್ರ ಶೋಚನೀಯವಾಗಿದೆ.

ADVERTISEMENT

ಬೀದರ್‌– ಔರಾದ್‌ ನಡುವಿನ ಅಂತರ 40 ಕಿ.ಮೀ. ಇದರಲ್ಲಿ 20 ಕಿ.ಮೀ. ರಸ್ತೆ ಹಾಳಾಗಿದೆ. ಗುಂಡಿಗಳ ನಡುವೆ ರಸ್ತೆ ಹುಡುಕಬೇಕಾದ ಪರಿಸ್ಥಿತಿ ಇದೆ. ಶಾಲಾ, ಕಾಲೇಜು ವಿದ್ಯಾರ್ಥಿಗಳು, ಸಾರ್ವಜನಿಕರು ಹಿಡಿಶಾಪ ಹಾಕುತ್ತಿದ್ದಾರೆ. ರಸ್ತೆ ಅಭಿವೃದ್ಧಿಪಡಿಸಬೆಕಾದವರು ಕಾಳಜಿ ವಹಿಸದೆ ಇರುವುದು ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.