ADVERTISEMENT

ಸ್ವಾರ್ಥಕ್ಕಾಗಿ ವೀರಶೈವ–ಲಿಂಗಾಯತರ ಇಬ್ಭಾಗ

ಮುಖ್ಯಮಂತ್ರಿ ವಿರುದ್ಧ ಭಾತಂಬ್ರಾ ಶ್ರೀ ಆರೋಪ

​ಪ್ರಜಾವಾಣಿ ವಾರ್ತೆ
Published 7 ಏಪ್ರಿಲ್ 2018, 6:40 IST
Last Updated 7 ಏಪ್ರಿಲ್ 2018, 6:40 IST
ಹುಮನಾಬಾದ್‌ ತಾಲ್ಲೂಕಿನ ಹುಡಗಿ ಗ್ರಾಮ ಚನ್ನಮಲ್ಲೇಶ್ವರ ವಿರಕ್ತ ಮಠದಲ್ಲಿ ಹಾನಗಲ್‌ ಗುರುಕುಮಾರೇಶ್ವರ ಸ್ವಾಮೀಜಿ ಅವರ 150ನೇ ಜಯಂತಿ ಅಂಗವಾಗಿ ಶುಕ್ರವಾರ ಮೆರವಣಿಗೆ ನಡೆಯಿತು
ಹುಮನಾಬಾದ್‌ ತಾಲ್ಲೂಕಿನ ಹುಡಗಿ ಗ್ರಾಮ ಚನ್ನಮಲ್ಲೇಶ್ವರ ವಿರಕ್ತ ಮಠದಲ್ಲಿ ಹಾನಗಲ್‌ ಗುರುಕುಮಾರೇಶ್ವರ ಸ್ವಾಮೀಜಿ ಅವರ 150ನೇ ಜಯಂತಿ ಅಂಗವಾಗಿ ಶುಕ್ರವಾರ ಮೆರವಣಿಗೆ ನಡೆಯಿತು   

ಹುಮನಾಬಾದ್: ‘ಮುಂಬರುವ ಚುನಾವಣೆಯಲ್ಲಿ ಲಿಂಗಾಯತರು ಮುಖ್ಯಮಂತ್ರಿ ಆಗಲು ಅವಕಾಶ ನೀಡಬಾರದೆಂಬ ದುರುದ್ದೇಶದಿಂದ ಮುಖ್ಯಮಂತ್ರಿ ಸಿದ್ದರಾಮಯ್ಯ ವೀರಶೈವ–ಲಿಂಗಾಯತರನ್ನು ಒಡೆಯಲು ಮುಂದಾಗಿದ್ದಾರೆ.ಚುನಾವಣೆಯಲ್ಲಿ ಇಬ್ಬರು ಸೇರಿ ಮುಖ್ಯಮಂತ್ರಿ ಅವರಿಗೆ ತಕ್ಕ ಪಾಠ ಕಲಿಸುತ್ತಾರೆ’ ಎಂದು ಬಾತಂಬ್ರಾ ವಿರಕ್ತ ಮಠದ ಶಿವಯೋಗೀಶ್ವರ ಸ್ವಾಮೀಜಿ ಹೇಳಿದರು.

ತಾಲ್ಲೂಕಿನ ಹುಡಗಿ ಗ್ರಾಮ ಚನ್ನಮಲ್ಲೇಶ್ವರ ವಿರಕ್ತ ಮಠದಲ್ಲಿ ಲಿಂ.ಹಾನಗಲ್‌ ಗುರುಕುಮಾರೇಶ್ವರ ಸ್ವಾಮೀಜಿ ಅವರ 150ನೇ ಜಯಂತಿ ನಿಮಿತ್ತ ಶುಕ್ರವಾರ ಏರ್ಪಡಿಸಿದ್ದ ಬೀದರ್‌ ಜಿಲ್ಲಾ ಮಠಾಧೀಶರ ಸಮಾವೇಶ ಉದ್ಘಾಟಿಸಿ ಮಾತನಾಡಿದರು.

‘ಇಬ್ಬರನ್ನು ಒಡೆದರೆ ರಾಜ್ಯದಲ್ಲಿ ಮತ್ತೆ ತಾನೇ ಮುಖ್ಯಮಂತ್ರಿ ಆಗಬಹುದೆಂಬ ಕನಸನ್ನು ಸಿದ್ದರಾಮಯ್ಯ  ಕಾಣುತ್ತಿದ್ದಾರೆ. ಅದಕ್ಕೆ ರಾಜ್ಯದ ಜನು ಯಾವುದೇ ಕಾರಣಕ್ಕೂ ಅವಕಾಶ ನೀಡುವುದಿಲ್ಲ. ಜಿಲ್ಲೆಯ ಮಠಗಳ ಅಭಿವದ್ಧಿಗೆ ಜಿಲ್ಲೆ ಮಠಾಧೀಶರು ಏನನ್ನೂ ಕೇಳಿಲ್ಲ. ನಮಗೆ ಕೊಟ್ಟು ಗೊತ್ತು. ಕೇಳಿ ಅಭ್ಯಾಸವಿಲ್ಲ. ಸಂಘಟಿತರಾಗಿ ಸೌಹಾರ್ದತೆಯಿಂದ ಬಾಳಿ ಬದುಕುತ್ತಿರುವ ನಮ್ಮನ್ನು ಈ ಒಡೆಯಲು ಕುತಂತ್ರ ನಡೆಸಿದ ಯಾರೊಬ್ಬರಿಗೂ ಉಳಿಗಾಲವಿಲ್ಲ’ ಎಂದು ಹೇಳಿದರು.

ADVERTISEMENT

ಶಿವಣಿ ಹಾವಗಿಲಿಂಗೇಶ್ವರ ಮಠದ ಸ್ವಾಮೀಜಿ ಮಾತನಾಡಿ, ‘ವೀರಶೈವ ಧರ್ಮದ ನಿಜವಾದ ಸಂಸ್ಥಾಪಕರು ಹಾನಗಲ್‌ ಕುಮಾರೇಶ್ವರ ಸ್ವಾಮೀಜಿ. ಸಮಾಜದ ಹಿತ ಕಾರ್ಯದಲ್ಲಿ ತೊಡಗಿಸಿಕೊಂಡ ಮಠಾಧೀಶರ ಬಗ್ಗೆ  ಗದುಗಿನ ತೋಂಟದಾರ್ಯ ಸ್ವಾಮೀಜಿ ಅವಹೇಳನಕಾರಿಯಾಗಿ ಮಾತನಾಡಿದ್ದಾರೆ. ಅವರಂತೆ ನಾವು ಬೂಟಾಟಿಕೆ ಮಾಡುವ ಸ್ವಾಮೀಜಿಗಳಲ್ಲ. ಅವರ ಹೇಳಿಕೆಯನ್ನು ಜಿಲ್ಲಾ ಮಠಾಧೀಶರ ಸಮಾವೇಶದಲ್ಲಿ ಭಾಗಿಯಾದ ಎಲ್ಲ ಮಠಾಧೀಶರು ಒಕ್ಕೊರಲಿನಿಂದ ಖಂಡಿಸುತ್ತೇವೆ ಎಂದರು.‘ಮೂರ್ತಿ ಪೂಜೆ ವಿರೋಧಿಸುವ ಸ್ವಾಮೀಜಿಗಳೆಲ್ಲರೂ ಗದ್ದುಗೆ ತೆಗೆಯಬೇಕಾಗುತ್ತದೆ’ ಎಂದು ಸೂಚ್ಯವಾಗಿ ಹೇಳಿದರು.

ಹಿರೇನಾಗಾಂವದ ಜಯಶಾಂತಲಿಂಗ ಸ್ವಾಮೀಜಿ, ಚಿಟಗುಪ್ಪ ಹಿರೇಮಠದ ಗುರುಲಿಂಗ ಸ್ವಾಮೀಜಿ, ಸದಲಾಪುರದ ಸಿದ್ದಲಿಂಗ ಸ್ವಾಮೀಜಿ, ರಾಜೇಶ್ವರ ಘನಲಿಂಗ ರುದ್ರಮುನಿ ಸ್ವಾಮೀಜಿ, ಹಳ್ಳಿಖೇಡ(ಬಿ) ಚಿಕ್ಕಮಠದ ಪಂಡಿತಾರಾಧ್ಯ ಸ್ವಾಮೀಜಿ ಮಾತನಾಡಿದರು.

ನೇತೃತ್ವ ವಹಿಸಿದ್ದ ಹುಡಗಿ ವಿರಕ್ತ ಮಠದ ಚನ್ನಮಲ್ಲ ದೇವರು ಮಾತನಾಡಿ, ‘ಸರ್ವರ ಸಹಕಾರದಿಂದಾಗಿಯೇ ಕಾರ್ಯಕ್ರಮ ಯಶಸ್ವಿಯಾಗಿದೆ. ಭವಿಷ್ಯದಲ್ಲಿ ಇದೇ ಸಹಕಾರ ನೀಡಬೇಕು’ ಎಂದರು.ಇದಕ್ಕೂ ಮುನ್ನ ಗ್ರಾಮದ ಮುಖ್ಯ ಬೀದಿಗಳಲ್ಲಿ ಹಾನಗಲ್‌ಶ್ರೀ ಭಾವಚಿತ್ರದ ಮೆರವಣಿಗೆ ನಡೆಸಲಾಯಿತು.

**

ವೀರಶೈವ– ಲಿಂಗಾಯತ ಮನುಷ್ಯನ ಎರಡು ಕಣ್ಣು<br/>ಗಳು. ಇಬ್ಬರನ್ನು ಸಮಾನ ಕಂಡವರು ಕುಮಾರೇಶ್ವರ ಸ್ವಾಮೀಜಿ. ಎರಡು ಇಬ್ಭಾಗವಾದರೆ ಅಪಾಯ – ಹಾವಗಿಲಿಂಗೇಶ್ವರ ಸ್ವಾಮೀಜಿ, ಶಿವಣಿ.

**

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.