ADVERTISEMENT

ಹಣಕಾಸು ಸಂಸ್ಥೆ ಬೆಳೆದರೆ ಜನಹಿತ

​ಪ್ರಜಾವಾಣಿ ವಾರ್ತೆ
Published 7 ಅಕ್ಟೋಬರ್ 2012, 6:15 IST
Last Updated 7 ಅಕ್ಟೋಬರ್ 2012, 6:15 IST

ಬಸವಕಲ್ಯಾಣ: ಹಣಕಾಸು ಸಂಸ್ಥೆಗಳು ಬೆಳೆದರೆ ಜನಸಾಮಾನ್ಯರಿಗೆ ಅದರಿಂದ ಲಾಭ ಆಗುತ್ತದೆ ಎಂದು ಹಾರಕೂಡ ಹಿರೇಮಠದ ಚೆನ್ನವೀರ ಶಿವಾಚಾರ್ಯರು ಅಭಿಪ್ರಾಯ ವ್ಯಕ್ತಪಡಿಸಿದರು.ತಾಲ್ಲೂಕಿನ ಹೋಬಳಿ ಕೇಂದ್ರ ಮುಡಬಿಯಲ್ಲಿ ಶನಿವಾರ ಸಮೃದ್ಧಿ ಮಲ್ಟಿಸ್ಟೇಟ್ ಕ್ರೇಡಿಟ್ ಕೋ- ಆಪರೇಟಿವ ಸೋಸೈಟಿಯನ್ನು ರಿಬ್ಬನ್ ಕತ್ತರಿಸಿ ಉದ್ಘಾಟಿಸಿ ಮಾತನಾಡಿದರು.

ಹಣ ಗಳಿಕೆಯೊಂದಿಗೆ ಅದನ್ನು ಉಳಿಸುವುದು ಮುಖ್ಯವಾಗಿದೆ. ಉಳಿತಾಯಕ್ಕೆ ಇಂಥ ಸಂಸ್ಥೆಗಳು ಸಹಾಯ ಮಾಡುತ್ತವೆ. ಜತೆಗೆ ಸಾಲ ಸೌಲಭ್ಯವೂ ದೊರೆಯುತ್ತದೆ ಎಂದರು. ಜನತಾ ಬ್ಯಾಂಕ್‌ನ ವ್ಯವಸ್ಥಾಪಕ ನಿರ್ದೇಶಕರಾಗಿ ಅದರ ಬಂಡವಾಳ ಸಾವಿರ ಕೋಟಿಗೆ ಏರಿಸಿರುವ ವಸಂತರಾವ ನಾಗದೆ ಯವರು ತನ್ನ ಸ್ವಂತ ಸಮೃದ್ಧಿ ಸಂಸ್ಥೆ ಸ್ಥಾಪಿಸಿ ಒಳ್ಳೆಯ ಕೆಲಸ ಮಾಡಿದ್ದಾರೆ. ಇದರಿಂದ ಈ ಭಾಗದ ಜನರಿಗೆ ಆರ್ಥಿಕವಾಗಿ ಸಬಲರಾಗಲು ಸಹಾಯ ಆಗಲಿದೆ ಎಂದರು.

ಸೋಸೈಟಿ ಸಂಸ್ಥಾಪಕ ಪ್ರಬಂಧಕ ವಸಂತರಾವ ನಾಗದೆ ಮಾತನಾಡಿ ತಾವು ವ್ಯವಸ್ಥಾಪಕ ನಿರ್ದೇಶಕರಾಗಿದ್ದ ಉಸ್ಮಾನಾಬಾದ್ ಜನತಾ ಸಹಕಾರ ಬ್ಯಾಂಕ್‌ನ ಎರಡು ಶಾಖೆಗಳನ್ನು ಬೀದರ, ಬಸವಕಲ್ಯಾಣದಲ್ಲಿ ಸ್ಥಾಪಿಸಲಾಗಿದೆ. ಈಗ ಸಮೃದ್ಧಿ ಸೋಸೈಟಿಯ 3 ಶಾಖೆಗಳನ್ನು ಇಲ್ಲಿ ತೆರೆಯಲಾಗಿದೆ. ವಿವಿಧೆಡೆ ಈ ಸೋಸೈಟಿಯ 11 ಶಾಖೆಗಳಿವೆ ಎಂದರು.

ಈ ಸಂಸ್ಥೆಯಿಂದ ಸಣ್ಣ ವ್ಯಾಪಾರಸ್ಥರಿಗೆ ಮತ್ತು ಸ್ವಯಂ ಉದ್ಯೋಗ ಕೈಗೊಳ್ಳುವವರಿಗೆ ಸಾಲ ಕೊಡಲಾಗುವುದು. ಸಾಲ ಪಡೆಯುವ ನಿಯಮಗಳು ಸಹ ಸರಳವಾಗಿವೆ ಎಂದರು. ಪಡೆದ ಸಾಲ ಸಕಾಲಕ್ಕೆ ಮರುಪಾವತಿ ಮಾಡಿದರೆ ಸಾಲ ಪಡೆದವರಿಗೆ ಉಪಯೋಗ ಆಗುತ್ತದೆ ಜತೆಗೆ ಸಂಸ್ಥೆಯೂ ಬೆಳೆಯುತ್ತದೆ ಎಂದರು. ಮುಡಬಿಯಲ್ಲಿ ರೈತರ ಉತ್ಪನ್ನ ಸಂಗ್ರಹಣೆಗೆ ದೊಡ್ಡ ಉಗ್ರಾಣ ತೆರೆಯುವ ಭರವಸೆಯೂ ಕೊಟ್ಟರು.

ಮಾಜಿ ಶಾಸಕ ಮಾರುತಿರಾವ ಮುಳೆ, ಜಿಲ್ಲಾ ಪಂಚಾಯಿತಿ ಸದಸ್ಯ ಚಂದ್ರಶೇಖರ ಬಿರಾದಾರ, ಬ್ಯಾಂಕ್ ಅಧ್ಯಕ್ಷ ಪಂಡಿತರಾವ ನಳೆಗಾಂವಕರ್, ಜನತಾ ಬ್ಯಾಂಕ್ ವ್ಯವಸ್ಥಾಪಕ ಅಶೋಕ ಜಾಧವ, ವಿಜಯಕುಮಾರ ಶೆಟಗಾರ್, ತಾಲ್ಲೂಕು ಪಂಚಾಯಿತಿ ಮಾಜಿ ಅಧ್ಯಕ್ಷ ತುಕಾರಾಮ ಮಲ್ಲಪ್ಪ, ಪ್ರಮುಖರಾದ ಬಸವರಾಜ ತಪಲಿ, ಅಂಗದರಾವ ಜಗತಾಪ, ಸುಧಾಕರ ಮದನೆ, ಬಸವರಾಜ ರಾಯಗೋಳ, ಗುಂಡಪ್ಪ ಲಿಂಗಶೆಟ್ಟಿ, ಲಾಯಕ ಅಲಿ ಪೀರಾ, ಸೋಸೈಟಿ ವ್ಯವಸ್ಥಾಪಕ ತುಕರಾಮರೆಡ್ಡಿ, ದಿಲೀಪ ಸಾಯಗಾಂವ ಉಪಸ್ಥಿತರಿದ್ದರು. ಉದಯಕುಮಾರ ಶೆಟಗಾರ್ ಸ್ವಾಗತಿಸಿದರು, ಮಹೇಶ ಮುಳೆ ನಿರೂಪಿಸಿದರು.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.