ADVERTISEMENT

ಹುಮನಾಬಾದ್ ರಸ್ತೆ ಕಾಮಗಾರಿ ಪೂರ್ಣ: ಜನತೆ ಸಂತಸ

​ಪ್ರಜಾವಾಣಿ ವಾರ್ತೆ
Published 10 ಡಿಸೆಂಬರ್ 2012, 5:49 IST
Last Updated 10 ಡಿಸೆಂಬರ್ 2012, 5:49 IST

ಹುಮನಾಬಾದ್: ರಸ್ತೆ ವಿಸ್ತರಣೆ ಪ್ರಯುಕ್ತ ನಗರದ ವಿವಿಧ ಮಾರ್ಗಗಳಲ್ಲಿನ ಅಂಗಡಿ ಮತ್ತು ಮನೆ ತೆರವುಗೊಳಿಸಿ ಒಂದುವರ್ಷ ಗತಿಸಿದರೂ ರಸ್ತೆ ಕಾಮಗಾರಿ ಪೂರ್ಣಗೊಳ್ಳದ ಕಾರಣ ಸಾರ್ವಜನಿಕರು ಸಂಬಂಧಪಟ್ಟ ಗುತ್ತಿಗೆದಾರರು ಕೈಗೊಳ್ಳದಿರುವ ಕುರಿತು `ಪ್ರಜಾವಾಣಿ' ಪ್ರಕಟಿಸಿದ ವಿಶೇಷ ವರದಿಯಿಂದ ಎಚ್ಚೆತ್ತುಕೊಂಡ ಜಿಲ್ಲಾ ಆಡಳಿತ ಆದೇಶದ ಮೇರೆಗೆ ಈಗ ಕಾಮಗಾರಿ ಕೈಗೊಂಡ ಹಿನ್ನೆಲೆಯಲ್ಲಿ ಸಾರ್ವಜನಿಕರು ಫುಲ್‌ಖುಶ್ ಆಗಿದ್ದಾರೆ.

ವರ್ಷ ಗತಿಸಿದರೂ ರಸ್ತೆ ಕಾಮಗಾರಿ ಕೈಗೊಳ್ಳದ ಪುರಸಭೆ ಆಡಳಿತ, ಚುನಾಯಿತ ಪ್ರತಿನಿಧಿಗಳ ವಿರುದ್ಧ ಸಾರ್ವಜನಿಕರು ಹಿಡಿಶಾಪ ಹಾಕಿದ್ದರು. ಜನತೆ ನೋವಿಗೆ ಸ್ಪಂದಿಸಿ, ಪತ್ರಿಕೆಯಲ್ಲಿ ಎರಡುಬಾರಿ ವಿಶೇಷ ವರದಿ ಪ್ರಕಟಿಸಲಾಗಿತ್ತು. ಮೇಲಧಿಕಾರಿಗಳು ಅದಕ್ಕೂ ಸ್ಪಂದಿಸದೇ ಇದ್ದಾಗ ನವೆಂಬರ್ ತಿಂಗಳಲ್ಲಿ ಮತ್ತೊಮ್ಮೆ ವಿಶೇಷ ಪ್ರಕಟಿಸಿದ್ದರಿಂದ ಎಚ್ಚೆತ್ತುಕೊಂಡ ಜಿಲ್ಲಾಧಿಕಾರಿ ಡಾ.ಪಿ.ಸಿ.ಜಾಫರ್ ಸುದ್ದಿ ಪ್ರಕಟಗೊಂಡ ಬೆನ್ನಲ್ಲಿಯೇ ಶಾಸಕ ರಾಜಶೇಖರ ಪಾಟೀಲ ಅವರೊಂದಿಗೆ ನಗರದ ವಿವಿಧೆಡೆ ಸಂಚರಿಸಿ, ಸಮಸ್ಯೆ ಪರಿಶೀಲಿಸಿದರು.

ಬಳಿಕ ಪುರಸಭೆಯಲ್ಲಿ ನಡೆದ ವಿಸೇಷ ಸಭೆಯಲ್ಲಿ `ಪ್ರಜಾವಾಣಿ' ಪತ್ರಿಕೆಯಲ್ಲಿ ವಿಶೇಷ ವರದಿ ಪ್ರಕಟಿಸಿದ್ದನ್ನು ಸಭೆ ಗಮನಕ್ಕೆ ತಂದು, ಡಿಸೆಂಬರ್ ಮೊದಲ ವಾರದೊಳಗೆ ಕಾಮಗಾರಿ ಪೂರ್ಣಗೊಳಿಸಲು ಸಂಬಂಧಪಟ್ಟ ಗುತ್ತಿಗೆದಾರರಿಗೆ ಸೂಚನೆ ನೀಡಿ, ನಿಗದಿತ ಅವಧಿಯಲ್ಲಿ ಕಾಮಗಾರಿ ಪೂರ್ಣಗೊಳ್ಳದಿದ್ದಲ್ಲಿ ಸದರಿ ಗುತ್ತಿಗೆದಾರರ ಹೆಸರು ಕಪ್ಪುಪಟ್ಟಿಗೆ ಸೇರ್ಪಡೆ ಮಾಡುವುದಾಗಿ ಎಚ್ಚರಿಕೆ ನೀಡಿದ್ದನ್ನು ಇಲ್ಲಿ ಸ್ಮರಿಸಬಹುದು.

ಜಿಲ್ಲಾಧಿಕಾರಿ ಡಾ.ಪಿ.ಸಿ ಜಾಫರ್, ಶಾಸಕ ರಾಜಶೇಖರ ಪಾಟೀಲ ಅವರ ಕಟ್ಟುನಿಟ್ಟಿನ ಆದೇಶ ಮೇರೆಗೆ ಗುತ್ತಿಗೆದಾರರು ಕಾಮಗಾರಿ ಕೈಗೊಂಡಿದ್ದಕ್ಕೆ ಸಾರ್ವಜನಿಕರು ಫುಲ್‌ಖುಶ್ ಆಗಿದ್ದಾರೆ. ಉಳಿದ ಕೊಂಚ ಕಾಮಗಾರಿ ಜೊತಗೆ ಡಾ.ಅಂಬೇಡ್ಕರ ವೃತ್ತದಿಂದ ಕಲ್ಲೂರ ಮಾರ್ಗದ ಬೈಪಾಸ್ ವರೆಗಿನ ರಸ್ತೆ ಕಾಮಗಾರಿ ಶೀಘ್ರ ಪೂರ್ಣಗೊಳಿಸುವಂತೆ ಈ ಮೂಲಕ ಮನವಿ ಮಾಡಿದ್ದಾರೆ.

ತಿಂಗಳಲ್ಲಿ ಪೂರ್ಣ: ಶಿವಾಜಿ ವೃತ್ತ ಪೂರೈಸದೇ ಬಾಕಿ ಉಳಿದುಕೊಂಡ ರಸ್ತೆ ಕಾಮಗಾರಿಗೆ ಶಾಸಕ ರಾಜಶೇಖರ ಪಾಟೀಲ ಮತ್ತು ಪುರಸಭೆ ಅಧ್ಯಕ್ಷ ಹಾಗೂ ಸರ್ವ ಸದಸ್ಯರ ಒಕ್ಕೊರಲ ಒಪ್ಪಿಗೆ ಪಡೆದು, ಅದಕ್ಕೆ ತಗಲುವ ರೂ. 2ರಿಂದ 3ಲಕ್ಷ ವಿಶೇಷ ಅನುದಾನ ಕಾದಿರಿಸಿ, ತಿಂಗಳೊಳಗಾಗಿ ಕಾಮಗಾರಿ ಪೂರ್ಣಗೊಳಿಸಿ ಸಾರ್ವಜನಿಕ ಸುಗಮ ಸಂಚಾರಕ್ಕೆ ಅನುಕೂಲ ಕಲ್ಪಿಸಲಾಗುವುದು ಎಂದು ಈ ಸಂಬಂಧ ಶನಿವಾರ ಸಂಜೆ ತಮ್ಮನ್ನು ಸಂಪರ್ಕಿಸಿದ `ಪ್ರಜಾವಾಣಿ'ಗೆ ಮುಖ್ಯಾಧಿಕಾರಿ ಸತೀಶ ಗುಡ್ಡೆ ಮಾಹಿತಿ ನೀಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.