ಬೀದರ್: ದಾಸ ಸಾಹಿತ್ಯ ಮೌಲ್ಯಗಳನ್ನು ಒಳಗೊಂಡಿದ್ದು, ಅದರಿಂದಾಗಿಯೇ ಇಂದಿಗೂ ಜೀವಂತವಾಗಿ ಉಳಿದಿದೆ ಎಂದು ಗುಲ್ಬರ್ಗದ ಡಾ. ಸುಮನ್ ಯಜುರ್ವೇದಿ ಹೇಳಿದರು.
ಅಖಿಲ ಕರ್ನಾಟಕ ದ್ವಿತೀಯ ದಾಸ ಸಾಹಿತ್ಯ ಸಮ್ಮೇಳನದ ಎರಡನೇ ದಿನವಾದ ಭಾನುವಾರ ನಗರದ ಜಿಲ್ಲಾ ರಂಗಮಂದಿರದಲ್ಲಿ ನಡೆದ ’ದಾಸ ಸಾಹಿತ್ಯದಲ್ಲಿ ಜೀವನ ಮೌಲ್ಯಗಳು’ ವಿಷಯ ಕುರಿತ ಮೂರನೇ ಗೋಷ್ಠಿಯಲ್ಲಿ ಮಾತನಾಡಿದರು. ತಾನೂ ಬದುಕಬೇಕು. ಪರರಿಗೂ ಬದುಕಲು ಬಿಡಬೇಕು ಎನ್ನುವುದು ದಾಸ ಸಾಹಿತ್ಯದ ತಿರುಳಾಗಿದೆ. ದುಡಿಯದೇ ಉಣ್ಣುವ ಹಕ್ಕು ಯಾರಿಗೂ ಇಲ್ಲ ಎಂದು ದಾಸರು ಸಾರಿದ್ದರು ಎಂದು ಹೇಳಿದರು.
ದಾಸ ಸಾಹಿತ್ಯ ಸಮಾಜಮುಖಿ ಸಾಹಿತ್ಯವಾಗಿದೆ. ಭಕ್ತಿ ಪ್ರಧಾನ ಆಗಿದ್ದರೂ ಸಾಮಾಜಿಕ ಕಳಕಳಿಯನ್ನು ಹೊಂದಿದೆ ಎಂದು ಉಪನ್ಯಾಸಕಿ ಸುನಿತಾ ಕೂಡ್ಲಿಕರ್ ಹೇಳಿದರು.
ದಾಸರು ತಮ್ಮ ಸಾಹಿತ್ಯದ ಮೂಲಕ ಸಮಾಜದ ಓರೆ ಕೋರೆಗಳನ್ನು ತಿದ್ದಲು ಪ್ರಯತ್ನಿಸಿದ್ದರು. ತಮ್ಮ ಮೊನಚಾದ ಕೀರ್ತನೆಗಳ ಮೂಲಕ ದುಷ್ಟರಿಗೆ ಚಾಟಿ ಬೀಸಿದರು. ದಾಸರು ಸಂಸಾರ ತ್ಯಜಿಸಿದರೂ ಸಂಸ್ಕಾರ ತ್ಯಜಿಸಿರಲಿಲ್ಲ. ಸಂಸಾರ, ಸಮಾಜದ ಸಮಸ್ಯೆಗಳನ್ನು ಅರಿತು ಅವುಗಳಿಗೆ ಪರಿಹಾರ ಸೂಚಿಸಿದ್ದರು. ಸಮಾಜ ಪರಿವರ್ತನೆಗೆ ಪ್ರಯತ್ನಿಸಿದ್ದರು. ಮೂಢನಂಬಿಕೆ ಹೊಡೆದೋಡಿಸಲು ಶ್ರಮಿಸಿದ್ದರು ಎಂದರು.
ದಾಸ ಸಾಹಿತ್ಯ ಬದುಕಿಗೆ ಮಾರ್ಗದರ್ಶಿ ಆಗಿದೆ. ಇದರ ವ್ಯಾಪಕ ಪ್ರಚಾರ ಅಗತ್ಯವಿದೆ ಎಂದು ಅಧ್ಯಕ್ಷತೆ ವಹಿಸಿದ್ದ ಗುಲ್ಬರ್ಗದ ಡಾ. ಸ್ವಾಮಿರಾವ್ ಕುಲಕರ್ಣಿ ಹೇಳಿದರು. ಆಧ್ಯಾತ್ಮಿಕ ಸಾಹಿತ್ಯ ಇಂದಿನ ಅವಶ್ಯಕತೆಯಾಗಿದೆ ಎಂದರು. ಸಮ್ಮೇಳನಾಧ್ಯಕ್ಷ ಡಾ. ಕೃಷ್ಣ ಕೊಲ್ಹಾರಕುಲಕರ್ಣಿ, ಕ್ಷೇತ್ರ ಶಿಕ್ಷಣಾಧಿಕಾರಿ ಅಮೃತರಾವ್ ಬಸಗೊಂಡೆ, ವಕೀಲರಾದ ರಾಮರಾವ್ ಗಂಗನಪಳ್ಳಿ, ಪ್ರಮುಖರಾದ ಮಂಗಲಾ ಭಾಗವತ್, ಅಂತೆಪ್ಪ ಬಿರಾದಾರ್, ಬಾಬುರಾವ್ ಗೊಂಡ ಉಪಸ್ಥಿತರಿದ್ದರು. ಲಕ್ಷ್ಮಣ ಮೇತ್ರೆ ಸ್ವಾಗತಿಸಿದರು. ಬಸವರಾಜ ಮೂಲಗೆ ನಿರೂಪಿಸಿದರು. ದೇವಿದಾಸ ಜೋಶಿ ವಂದಿಸಿದರು.
‘ಎಲ್ಲ ಕಾಲಕ್ಕೂ ಪ್ರಸ್ತುತ’: ದಾಸ ಸಾಹಿತ್ಯ ಎಲ್ಲ ಕಾಲಕ್ಕೂ ಪ್ರಸ್ತುತವಾಗಿದೆ ಎಂದು ಯುವ ಸಾಹಿತಿ ಶಿವಲಿಂಗ ಹೇಡೆ ಹೇಳಿದರು.
ಅಖಿಲ ಕರ್ನಾಟಕ ದ್ವಿತೀಯ ದಾಸ ಸಾಹಿತ್ಯ ಸಮ್ಮೇಳನದ ನಿಮಿತ್ತ ನಗರದ ಜಿಲ್ಲಾ ರಂಗಮಂದಿರದಲ್ಲಿ ನಡೆದ ‘ದಾಸ ಸಾಹಿತ್ಯದ ಪ್ರಸ್ತುತತೆ’ ಕುರಿತ ಉಪನ್ಯಾಸ ಕಾರ್ಯಕ್ರಮದಲ್ಲಿ ಮಾತನಾಡಿದರು.
ದಾಸ ಸಾಹಿತ್ಯ ಸಮಾಜವನ್ನು ಸ್ಪಂದಿಸುವ, ಎಲ್ಲ ಕಾಲದ ಸಮಸ್ಯೆಗಳಿಗೂ ಧ್ವನಿಯಾಗುವ ಸಾಹಿತ್ಯವಾಗಿದೆ. ಹೀಗಾಗಿ ಐನೂರು ವರ್ಷ ಕಳೆದರೂ ತನ್ನ ಅಸ್ತಿತ್ವ ಉಳಿಸಿಕೊಂಡು ಬಂದಿದೆ ಎಂದರು. ಕುಲ ಕುಲ ಎಂದು ಹೊಡೆದಾಡದಿರಿ ಎಂದು ದಾಸರು ಸಾರಿದ್ದಾರೆ. ಕುಲ ಯಾವುದು ಸತ್ಯ, ಸುಖ ಉಳ್ಳ ಜನರಿಗೆ ಎಂದು ಪ್ರಶ್ನಿಸಿದ್ದಾರೆ. ಪುರಂದರ ದಾಸರು ಕುಲಕ್ಕೆ ಹೊಸ ವ್ಯಾಖ್ಯಾನವನ್ನೇ ಬರೆದಿದ್ದಾರೆ. ಅವರ ವಿಚಾರಗಳನ್ನು ಅಳವಡಿಸಿಕೊಂಡಲ್ಲಿ ಜಾತಿ ಸಮಸ್ಯೆಗೆ ಪರಿಹಾರ ಸಿಗಲಿದೆ. ಎಂದು ಹೇಳಿದರು.
ನಾವು ಇಂದು ವೈಜ್ಞಾನಿಕ ಯುಗದಲ್ಲಿದೆ. ಆದರೆ, ದಾಸರು ಶತಮಾನಗಳ ಹಿಂದೆ ರಚಿಸಿರುವ ಸಾಹಿತ್ಯದಲ್ಲಿ ವೈಜ್ಞಾನಿಕ, ವೈಚಾರಿಕ ಚಿಂತನೆಗಳನ್ನು ಕಾಣಬಹುದಾಗಿದೆ ಎಂದು ಹೇಳಿದರು. ಪ್ರಮುಖರಾದ ದತ್ತಾತ್ರಿ ಕಾರ್ನಾಟ್ ಮಾತನಾಡಿದರು. ಶ್ರೀನಿವಾಸ್್ ತಾಂದಳೆ, ಶ್ರೀಕಾಂತ್ ಸೂಗಿ ಉಪಸ್ಥಿತರಿದ್ದರು. ಮನೋಹರ ಕಾಶಿ ಸ್ವಾಗತಿಸಿದರು. ಆತ್ಮಾನಂದ ಬಂಬಳಗಿ ನಿರೂಪಿಸಿದರು. ಶರದ ನಾರಾಯಣಪೇಟಕರ್ ವಂದಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.