ಭಾಲ್ಕಿ: ಎಲ್ಲ ವರ್ಗದ ಜನರನ್ನೂ ಆಕರ್ಷಿಸುವ ಶಕ್ತಿ ಸಂಗೀತಕ್ಕಿದೆ. ಹಾಗಾಗಿ ಸಂಗೀತಕ್ಕೆ ಭಾವೈಕ್ಯ ವೃದ್ಧಿಸುವ ಶಕ್ತಿ ಇದೆ ಎಂದು ಪತ್ರಕರ್ತರ ಸಂಘದ ತಾಲ್ಲೂಕು ಅಧ್ಯಕ್ಷ ಚಂದ್ರಕಾಂತ ಬಿರಾದಾರ ಹೇಳಿದರು. ಭಾಲ್ಕಿಯ ಕಾಶಿ ವಿಶ್ವನಾಥ ಮಂದಿರದಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಯೋಗದಲ್ಲಿ ಈಚೆಗೆ ನಡೆದ ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಮಾತನಾಡಿದರು.
ಅಕ್ಕನ ಬಳಗದ ಮಹಿಳೆಯರು ಶರಣರ ಹಾಡು, ಜನಪದ, ಭಕ್ತಿಪದ, ಭಜನೆ ಮುಂತಾದವುಗಳ ಮೂಲಕ ತಮ್ಮ ಕಲಾವಂತಿಕೆಯನ್ನು ಹೆಚ್ಚಿಸಿಕೊಳ್ಳಬೇಕು ಎಂದರು. ಅಕ್ಕ ಮಹಾದೇವಿ ಮಹಿಳಾ ಮಂಡಳದ ಅಧ್ಯಕ್ಷೆ ರೇಖಾಬಾಯಿ ಅಷ್ಟೂರೆ, ಶೋಭಾ ದೇಶಮುಖ್, ಬೇಬಾವತಿ ವಂಕೆ, ಸಂತೋಷ ಹಾಲಕುಡೆ, ಮಹಾನಂದ ದೇಶಮುಖ್, ಶಿವಾನಂದ ಗವಾಯಿಗಳು, ವಿಶ್ವನಾಥ ಪಾಟೀಲ ಇದ್ದರು. ಶಾಂತಮ್ಮ ನಿರೂಪಿಸಿದರು. ರಾಜೇಶ್ವರಿ ವಂಕೆ ವಂದಿಸಿದರು.
ಕೊಳ್ಳೂರು: ಮಕ್ಕಳ ಗ್ರಾಮಸಭೆ
ಬೀದರ್: ಅಂತರರಾಷ್ಟ್ರೀಯ ಮಾನವ ಹಕ್ಕುಗಳ ದಿನದ ಪ್ರಯುಕ್ತ ಔರಾದ್ ತಾಲ್ಲೂಕಿನ ಕೊಳ್ಳೂರು ಗ್ರಾಮದ ಸರ್ಕಾರಿ ಪ್ರೌಢಶಾಲೆಯಲ್ಲಿ ಮಂಗಳವಾರ ಮಕ್ಕಳ ಗ್ರಾಮಸಭೆ ನಡೆಯಿತು.
ಮಾನವ ಹಕ್ಕು ಹಾಗೂ ಮಕ್ಕಳ ಹಕ್ಕುಗಳ ಕುರಿತು ಚರ್ಚೆ ನಡೆಸಲಾಯಿತು. ಶಿಕ್ಷಣದ ಮಹತ್ವ ಕುರಿತು ತಿಳಿವಳಿಕೆ ನೀಡಲಾಯಿತು. ಶಾಲೆಯಲ್ಲಿ ಇರುವ ವಿಜ್ಞಾನ ಮತ್ತು ಇಂಗ್ಲಿಷ್ ಶಿಕ್ಷಕರ ಕೊರತೆಯನ್ನು ವಿದ್ಯಾರ್ಥಿಗಳು ಸಭೆಯ ಗಮನಕ್ಕೆ ತಂದರು. ಮಕ್ಕಳ ಸಹಾಯವಾಣಿ 1098 ಕುರಿತು ಜಾನ್ಸನ್ ಹಾಗೂ ಕಾಣೆಯಾದ ಮಕ್ಕಳ ಕುರಿತು ಜಾನ್ ರುಫಸ್ ಮಾತನಾಡಿದರು.
ಮುಖ್ಯಗುರು ರಾಜಕುಮಾರ್ ನಾಗರೆಡ್ಡಿ, ಶಾಲಾಭಿವೃದ್ಧಿ ಮತ್ತು ಮೇಲುಸ್ತುವಾರಿ ಸಮಿತಿ ಅಧ್ಯಕ್ಷ ಸಿದ್ದಪ್ಪ ಶೆಂಬೆಳ್ಳಿ, ಉಪಾಧ್ಯಕ್ಷ ಅರ್ಜುನ ಶೆಟ್ಟಿ, ಶಿಕ್ಷಕ ಶಿವರಾಜ ಜಾಗದೆ, ಪ್ರಮುಖರಾದ ಶಿವಪ್ಪ ಉಪಸ್ಥಿತರಿದ್ದರು.
ವಲಯ ಸಮ್ಮೇಳನಾಧ್ಯಕ್ಷರ ಆಯ್ಕೆ
ಬಸವಕಲ್ಯಾಣ: ತಾಲ್ಲೂಕಿನ ಯಲ್ಲದಗುಂಡಿಯಲ್ಲಿ ಡಿಸೆಂಬರ್ 31 ರಂದು ತಾಲ್ಲೂಕು ಕನ್ನಡ ಸಾಹಿತ್ಯ ಪರಿಷತ್ ವತಿಯಿಂದ ನಡೆಯುವ ಕೊಹಿನೂರ ವಲಯ ಮಟ್ಟದ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರನ್ನಾಗಿ ನಿವೃತ್ತ ಶಿಕ್ಷಕ ಶರಣಯ್ಯ ಸ್ವಾಮಿ ಅವರನ್ನು ಆಯ್ಕೆ ಮಾಡಲಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.