ಬೀದರ್: ‘ನಿವೇಶನ ಹಾಗೂ ಅನುದಾನ ಕೊಟ್ಟು ಕನ್ನಡ ಭವನ ಕಟ್ಟುವ ಯೋಗ್ಯತೆ ಕಾಂಗ್ರೆಸ್ ಸರ್ಕಾರಕ್ಕೆ ಇಲ್ಲ’ ಎಂದು ಜೆಡಿಎಸ್ನ ಮಾಜಿ ಸಚಿವ ಬಂಡೆಪ್ಪ ಕಾಶೆಂಪುರ ಅಸಮಾಧಾನ ವ್ಯಕ್ತಪಡಿಸಿದರು.
‘ಗಡಿನಾಡಿನಲ್ಲಿ ಕನ್ನಡ ಉಳಿಸಿ ಬೆಳೆಸುವ ಕಾರ್ಯ ನಿರಂತರವಾಗಿ ನಡೆಯಬೇಕು. ಕನ್ನಡ ಭವನ ನಿರ್ಮಾಣಕ್ಕೆ ಚುನಾಯಿತ ಪ್ರತಿನಿಧಿಗಳು ಆಸಕ್ತಿ ತೋರುತ್ತಿಲ್ಲ. ಜಿಲ್ಲಾ ಆಡಳಿತವು ಭವನಕ್ಕೆ ವಿವಾದಾತ್ಮಕ ಜಾಗ ಕೊಟ್ಟಿರುವ ಕಾರಣ ಕಾನೂನು ತೊಡಕು ಉಂಟಾಗಿದೆ. ಕನಿಷ್ಠ ಕಾನೂನು ತೊಡಕು ಸಹ ನಿವಾರಿಸುತ್ತಿಲ್ಲ’ ಎಂದು ತಿಳಿಸಿದರು.
‘ಎಲ್ಲ ಜಾತಿ ಸಮುದಾಯಗಳಿಗೆ ಕನ್ನಡ ಭಾಷೆಯೇ ಕೊಂಡಿಯಾಗಿದೆ. ಜಿಲ್ಲಾ ಕೇಂದ್ರದಲ್ಲಿ ಜಾತಿಗೊಂದು ಭವನಕ್ಕಿಂತ ಕನ್ನಡ ಭವನ ನಿರ್ಮಿಸುವ ಅಗತ್ಯ ಇದೆ. ಕನ್ನಡದ ಪ್ರತೀಕವಾಗಿ ಜಿಲ್ಲಾ ಕೇಂದ್ರಗಳಲ್ಲಿ ಕನ್ನಡ ಭವನ ನಿರ್ಮಿಸುವ ವಿಷಯವನ್ನು ಜೆಡಿಎಸ್ ತನ್ನ ಚುನಾವಣಾ ಪ್ರಣಾಳಿಕೆಯಲ್ಲಿ ಸೇರಿಸಲಿದೆ’ ಎಂದು ತಿಳಿಸಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.