ಭಾಲ್ಕಿ: ‘ಧರ್ಮದ ಹೆಸರಿನಲ್ಲಿ ಒಡಕು ಉಂಟು ಮಾಡಿ ಧರ್ಮದ ನಾಶ ಮಾಡಲು ಹೊರಟಿರುವವರ ನಾಶ ಖಂಡಿತ’ ಎಂದು ಬಾಳೆಹೊನ್ನೂರಿನ ಪ್ರಸನ್ನವೀರ ಸೋಮೇಶ್ವರ ರಾಜದೇಶಿಕೇಂದ್ರ ಶಿವಾಚಾರ್ಯರರು ನುಡಿದರು.
ತಾಲ್ಲೂಕಿನ ಹಲಬರ್ಗಾ ಗ್ರಾಮದಲ್ಲಿ ಬುಧವಾರ ಸಿದ್ದರಾಮೇಶ್ವರ ಜಾತ್ರಾ ಮಹೋತ್ಸವ ನಿಮಿತ್ತ ಹಮ್ಮಿಕೊಂಡಿದ್ದ ಅಡ್ಡಪಲ್ಲಕ್ಕಿ ಉತ್ಸವ, ಧರ್ಮಸಭೆಯ ಸಾನ್ನಿಧ್ಯ ವಹಿಸಿ ಅವರು ಮಾತನಾಡಿದರು.
‘ನಾಸ್ತಿಕತೆಯ ಮನೋಭಾವದ ಕೆಲವರು ನಾಗರೀಕತೆ, ವೈಚಾರಿಕತೆ ಹೆಸರಿನಲ್ಲಿ ಸಮಾಜದಲ್ಲಿ ಆತಂಕದ ವಾತಾವರಣ ಸೃಷ್ಟಿಸುತ್ತಿದ್ದಾರೆ. ಅಂತಹವರಿಗೆ ಸಮಾಜ ಯಾವತ್ತೂ ಬೆಲೆ ಕೊಡಬಾರದು. ರಂಭಾಪುರಿ ಪೀಠದ ಮೂಲ ಉದ್ದೇಶ ಮಾನವ ಧರ್ಮಕ್ಕೆ ಜಯವಾಗಲಿ ಎಂಬುದಾಗಿದೆ. ವೀರಶೈವ ಧರ್ಮ ಸಕಲರ ಉದ್ಧಾರಕ್ಕೆ ಶ್ರಮಿಸುತ್ತಿದೆ. ಪಂಚಪೀಠಗಳು ಅಧ್ಯಾತ್ಮದ ರಾಷ್ಟ್ರೀಯ ಪೀಠಗಳು’ ಎಂದು ತಿಳಿಸಿದರು.
‘ವೀರಶೈವ ಧರ್ಮ ಸ್ವೀಕಾರ ಮಾಡಿದ್ದ ಬಸವಣ್ಣ ಅದನ್ನು ಎತ್ತರಮಟ್ಟಕ್ಕೆ ಬೆಳೆಸಿದ್ದಾರೆ. ಅವರು ಎಲ್ಲವರೂ ನನ್ನವರು ಎನ್ನುತ್ತಿದ್ದರು. ಆದರೆ, ಅವರ ಅನುಯಾಯಿಗಳು ವೀರಶೈವ– ಲಿಂಗಾಯತ ಬೇರೆ ಎಂದು ಸಮಾಜ ಒಡೆಯುವ ಕೆಲಸ ಮಾಡುತ್ತಿದ್ದಾರೆ’ ಎಂದು ಆಕ್ರೋಶ ವ್ಯಕ್ತಪಡಿಸಿದರು.
‘ರಾಜಕಾರಿಗಳು ಸಮಾಜಕ್ಕೆ ಒಳ್ಳೆಯದನ್ನು ಮಾಡಲು ಸಮಯ ಮೀಸಲಿಡಬೇಕು. ಸಮಾಜದಲ್ಲಿ ಕಂದಕ ಸೃಷ್ಟಿಸಬಾರದು’ ಎಂದು ಸಲಹೆ ನೀಡಿದರು.
ರಾಜೇಶ್ವರ ಶಿವಾಚಾರ್ಯರು, ಶಾಸಕ ಪ್ರಕಾಶ ಖಂಡ್ರೆ ಮಾತನಾಡಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.