ADVERTISEMENT

ಜಾತ್ರೆಗಳು ಸಂಸ್ಕೃತಿ, ಪರಂಪರೆಯ ಪ್ರತಿಬಿಂಬ

​ಪ್ರಜಾವಾಣಿ ವಾರ್ತೆ
Published 12 ಜನವರಿ 2018, 9:19 IST
Last Updated 12 ಜನವರಿ 2018, 9:19 IST
ಭಾಲ್ಕಿ ತಾಲ್ಲೂಕಿನ ಹಲಬರ್ಗಾ ಗ್ರಾಮದಲ್ಲಿ ಗುರುವಾರ ಸಿದ್ದರಾಮೇಶ್ವರ ಜಾತ್ರಾ ಮಹೋತ್ಸವ ನಿಮಿತ್ತ ರಾಚೋಟೇಶ್ವರ ಮಠದ ಪೀಠಾಧಿಪತಿ ಹಾವಗಿಲಿಂಗೇಶ್ವರ ಶಿವಾಚಾರ್ಯರ ಆನೆ ಅಂಬಾರಿ ಉತ್ಸವ ನಡೆಯಿತು
ಭಾಲ್ಕಿ ತಾಲ್ಲೂಕಿನ ಹಲಬರ್ಗಾ ಗ್ರಾಮದಲ್ಲಿ ಗುರುವಾರ ಸಿದ್ದರಾಮೇಶ್ವರ ಜಾತ್ರಾ ಮಹೋತ್ಸವ ನಿಮಿತ್ತ ರಾಚೋಟೇಶ್ವರ ಮಠದ ಪೀಠಾಧಿಪತಿ ಹಾವಗಿಲಿಂಗೇಶ್ವರ ಶಿವಾಚಾರ್ಯರ ಆನೆ ಅಂಬಾರಿ ಉತ್ಸವ ನಡೆಯಿತು   

ಭಾಲ್ಕಿ: ಸಮಾಜದಲ್ಲಿ ಆಗಾಗೆ ನಡೆಯುವ ಜಾತ್ರೆಗಳು ನಮ್ಮ ಸಂಸ್ಕೃತಿ, ಪರಂಪರೆಯನ್ನು ಬಿಂಬಿಸುತ್ತವೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಈಶ್ವರ ಖಂಡ್ರೆ ನುಡಿದರು. ತಾಲ್ಲೂಕಿನ ಹಲಬರ್ಗಾ ಗ್ರಾಮದಲ್ಲಿ ಗುರುವಾರ ಸಿದ್ದರಾಮೇಶ್ವರ ಜಾತ್ರಾ ಮಹೋತ್ಸವದ ಸಮಾರೋಪ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ಇಂದು ಭೌತಿಕ ಸಂಪತ್ತಿನತ್ತ ಎಲ್ಲರ ಚಿತ್ತ ಇದೆ. ಹಾಗಾಗಿ ಮಾನವೀಯ ಮೌಲ್ಯಗಳು ನಶಿಸಿ ಹೋಗುತ್ತಿವೆ. ಅಧಿಕಾರ, ಆಸ್ತಿಗಾಗಿ ಕೊಲೆಗಳು ನಡೆಯುತ್ತಿವೆ. ರಾಕ್ಷಸಿ ಪ್ರವೃತ್ತಿ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ ಎಂದು ಕಳವಳ ವ್ಯಕ್ತಪಡಿಸಿದರು.

ನಾವೆಲ್ಲರೂ ಹಿರಿಯರು ಕೈಗೊಂಡಿದ್ದ ಸಮಾಜೋಧಾರ್ಮಿಕ ಕಾರ್ಯಗಳನ್ನು ನೆನೆದು, ಸಮಾಜದಲ್ಲಿ ಜಾಗೃತಿ ತರಬೇಕು. ಹಲಬರ್ಗಾದಲ್ಲಿ ಭೀಕರ ಜಲಕ್ಷಾಮ ಉಂಟಾದಾಗ ಶತಮಾನದ ಹಿಂದೆ ಸಿದ್ದರಾಮೇಶ್ವರ ಅವರು ತೋಡಿದ ಬಾವಿ ಇಂದಿಗೂ ಬತ್ತದಿರುವುದು ಅವರ ಅದ್ಭುತ ಭಕ್ತಿಗೆ ಸಾಕ್ಷಿ. ಮಹಾತ್ಮರ ಸಂದೇಶ ಮಾನವ ಧರ್ಮಕ್ಕೆ ಜಯವಾಗಲಿ. ವಿಶ್ವದಲ್ಲಿ ಶಾಂತಿ ನೆಲೆಸಲಿ ಎಂಬುದಾಗಿದೆ ಎಂದು ಹೇಳಿದರು.

ADVERTISEMENT

ಧರ್ಮ ಎಲ್ಲರನ್ನೂ ಗೌರವಿಸಿ, ಪ್ರೀತಿಸಿ ಎಂದು ಹೇಳಿದೆ. ಬಸವಾದಿ ಶರಣರು ಎಲ್ಲರನ್ನೂ ನಮ್ಮವರೆಂದು ಅಪ್ಪಿಕೊಂಡಿದ್ದರು. ಅವರು ನಡೆ-ನುಡಿ ಒಂದಾಗಿಸಿದ್ದರು. ಅವರ ಬದುಕು ಸರ್ವರಿಗೂ ಮಾದರಿ ಆಗಬೇಕು. ಬದುಕಿನ ಮೂಲ ಉದ್ದೇಶ ಬದುಕಿ, ಬದುಕಲು ಬಿಡಿ ಎಂಬುದಾಗಿದೆ. ಧರ್ಮವನ್ನು ನಾವು ರಕ್ಷಿಸಿದರೆ ಧರ್ಮ ನಮ್ಮನ್ನು ರಕ್ಷಿಸುತ್ತದೆ. ಬಡ, ದೀನ, ದಲಿತರ ಸೇವೆಯೇ ನಿಜವಾದ ಧರ್ಮ ಪಾಲನೆ ಆಗಿದೆ. ಸ್ವಾಮೀಜಿಯಿಂದ ಮಠ, ಮಠದಿಂದ ಸ್ವಾಮೀಜಿ ಅಲ್ಲ ಎಂದು ಹೇಳಿದರು.
ಹಾವಗಿಲಿಂಗೇಶ್ವರ ಶಿವಾಚಾರ್ಯರು ಮಾತನಾಡಿದರು.

ಡೋಣಗಾಂವದ ಶಂಭುಲಿಂಗ ಶಿವಾಚಾರ್ಯ, ನಾಗಭೂಷಣ ಶಿವಾ ಚಾರ್ಯ, ಚಿದಾನಂದ ಶಿವಾಚಾರ್ಯ, ವೈಜಿನಾಥ ಶಿವಾಚಾರ್ಯ, ಶಿವಾನಂದ ಸ್ವಾಮೀಜಿ, ಬಸವಲಿಂಗ ಶಿವಾಚಾರ್ಯ, ಸಿದ್ದಲಿಂಗ ಸ್ವಾಮೀಜಿ, ಚನ್ನಮಲ್ಲದೇವರು, ಬಸವಲಿಂಗ ದೇವರು, ಗ್ರಾಮ ಪಂಚಾಯಿತಿ ಅಧ್ಯಕ್ಷೆ ರಾಚಮ್ಮಾ ಮೂಲಗೆ, ತಾಲ್ಲೂಕು ಪಂಚಾಯಿತಿ ಸದಸ್ಯ ಸುಧಾಕರ ಮಾಳಗೆ, ಪಿಎಲ್‌ಡಿ ಬ್ಯಾಂಕ್ ಅಧ್ಯಕ್ಷ ಮಡಿವಾಳಪ್ಪ ಮಂಗಲಗಿ, ಮೈಲಾರ ಮಲ್ಲಣ್ಣಾ ದೇವಸ್ಥಾನ ಸಮಿತಿ ಅಧ್ಯಕ್ಷ ಕೆ.ಡಿ.ಗಣೇಶ, ಪ್ರಮುಖರಾದ ಪ್ರಭು ಮೆಳಕುಂದೆ, ರಮೇಶ ಪ್ರಭಾ, ಧನರಾಜ ಪಾಟೀಲ, ಶಿವಕುಮಾರ ಬೋರಾಳೆ, ಪಪ್ಪು ಪಾಟೀಲ, ಸಂತೋಷ ಬಿಜಿ ಪಾಟೀಲ, ರಾಜಕುಮಾರ ಚಲುವಾ, ವೈಜಿನಾಥ ಮೂಲಗೆ, ಶಿವರಾಜ ಮೂಲಗೆ, ಶಿವಕುಮಾರ ಬಿರಾದರ, ಕರ್ನಾಟಕ ರಕ್ಷಣಾ ವೇದಿಕೆ ತಾಲ್ಲೂಕು ಅಧ್ಯಕ್ಷ ಗಣೇಶ ಪಾಟೀಲ ಜ್ಯಾಂತಿ, ಸತೀಶ ಮಡಿವಾಳ, ರಾಜು ಕುಂಬಾರ, ಉಮಾಕಾಂತ ಪ್ರಭಾ, ವೀರಶೆಟ್ಟಿ ಪಾಟೀಲ, ಉತ್ತಮ ನಾಗೂರೆ ಇದ್ದರು.

ಶಿವಕುಮಾರ ಪಾಂಚಾಳ ಸಂಗೀತ ಸೇವೆ ನೀಡಿದರು. ಮುರುಘೇಂದ್ರ ದೇವರು ನಿರೂಪಿಸಿ, ವಂದಿಸಿದರು. ಅದ್ದೂರಿ ಅಂಬಾರಿ ಉತ್ಸವ: ಗ್ರಾಮದ ಹೊರವಲಯದ ಪೆಟ್ರೋಲ್ ಬಂಕ್‌ನಿಂದ ರಾಚೋಟೇಶ್ವರ ಮಠದ ಪೀಠಾಧಿಪತಿ ಹಾವಗಿಲಿಂಗೇಶ್ವರ ಶಿವಾಚಾರ್ಯರ ಆನೆ ಅಂಬಾರಿ ಉತ್ಸವ ಅದ್ದೂರಿಯಾಗಿ ನಡೆಯಿತು. ಮೆರವಣಿಗೆಯಲ್ಲಿ ಯುವಕರು, ಮಹಿಳೆಯರು ಭಕ್ತಿ ಗೀತೆಗಳಿಗೆ ಹೆಜ್ಜೆ ಹಾಕಿ ಸಂಭ್ರಮಿಸಿದರು.

* * 

ರಾಚೋಟೇಶ್ವರ ಮಠದ ಕಲ್ಯಾಣ ಮಂಟಪಕ್ಕೆ ಶಾಸಕರ ನಿಧಿಯಿಂದ ₹ 25 ಲಕ್ಷ ಮಂಜೂರು ಮಾಡಲಾಗಿದೆ. ವಾರದೊಳಗೆ ಕಟ್ಟಡ ಕಾರ್ಯ ಆರಂಭಿಸಲಾಗುವುದು
ಈಶ್ವರ ಖಂಡ್ರೆ ಜಿಲ್ಲಾ ಉಸ್ತುವಾರಿ ಸಚಿವ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.