ADVERTISEMENT

ನಿವೇಶನ ಸೌಲಭ್ಯ ಕಲ್ಪಿಸಲು ಒತ್ತಾಯ

​ಪ್ರಜಾವಾಣಿ ವಾರ್ತೆ
Published 9 ಫೆಬ್ರುವರಿ 2018, 9:21 IST
Last Updated 9 ಫೆಬ್ರುವರಿ 2018, 9:21 IST

ಔರಾದ್: ನಿವೇಶನ ಸೌಲಭ್ಯ ಕಲ್ಪಿಸುವಂತೆ ಆಗ್ರಹಿಸಿ ಭಟ್ಕೆ ಸಮಾಜ ಇಲ್ಲಿನ ತಹಶೀಲ್ದಾರ್ ಕಚೇರಿ ಎದುರು ಧರಣಿ ನಡೆಸಿತು. ಪಟ್ಟಣದ ವಿವಿಧೆಡೆ ಸರ್ಕಾರಿ ಮತ್ತು ಖಾಸಗಿ ಜಾಗದಲ್ಲಿ ಗುಡಿಸಲು ಹಾಕಿಕೊಂಡು ವಾಸಿಸುವ ಸುಮಾರು 25ಕ್ಕೂ ಹೆಚ್ಚು ಕುಟುಂಬದ ಸದಸ್ಯರು ತಮಗೆ ನಿವೇಶನ ಸೌಲಭ್ಯ ಕೊಡುವಂತೆ ಆಗ್ರಹಿಸಿ ಧರಣಿ ನಡೆಸುತ್ತಿದ್ದಾರೆ.

‘ಮುತ್ತು (ಮಣಿ) ಮಾರುವವರು, ಹಾವಾಡಿಗರು, ಕೂಲಿ ಕಾರ್ಮಿಕ ಕುಟುಂಬಗಳು ಕಳೆದ ಎರಡು ದಶಕಗಳಿಂದ ರಸ್ತೆ ಬದಿ ಗುಡಿಸಲುಗಳಲ್ಲಿ ವಾಸವಾಗಿದ್ದಾರೆ. ಇವರು ಮತದಾನದ ಹಕ್ಕು ಹೊಂದಿದ್ದಾರೆ. ಚುನಾವಣೆ ವೇಳೆ ಇವರಿಗೆ ಮನೆ ಕೊಡುವುದಾಗಿ ಭರವಸೆ ನೀಡಲಾಗುತ್ತದೆ. ಆದರೆ ನಾವು ಈಗ ಕಳೆದ ಮೂರು ದಿನಗಳಿಂದ ಧರಣಿ ನಡೆಸುತ್ತಿದ್ದರೂ ಇತ್ತ ಗಮನ ಹರಿಸುತ್ತಿಲ್ಲ’ ಎಂದು ಭಟ್ಕೆ ಸಮಾಜದ ಅಧ್ಯಕ್ಷ ನಾಗನಾಥ ವಾಕೋಡೆ ದೂರಿದರು.

‘ಪಟ್ಟಣದ ಸರ್ವೆ ಸಂಖ್ಯೆ 114 ಮತ್ತು 183ಯಲ್ಲಿ ಸರ್ಕಾರಿ ಜಮೀನು ಇದೆ. ಅಲ್ಲಿ ಎಲ್ಲ ಅಲೆಮಾರಿ ಕುಟುಂಬಗಳಿಗೆ ಆಶ್ರಯ ಕಲ್ಪಿಸುವಂತೆ ನಿರಂತರ ಹೋರಾಟ ಮಾಡುತ್ತಿದ್ದರೂ ಸಂಬಂಧಿತರು ಬೇಡಿಕೆಗೆ ಸ್ಪಂದಿಸುತ್ತಿಲ್ಲ’ ಎಂದು ಅವರು ಆರೋಪಿಸಿದರು.

ADVERTISEMENT

ಸ್ಥಳಕ್ಕೆ ಭೇಟಿ ನೀಡಿದ ತಹಶೀಲ್ದಾರ್ ಎಂ. ಚಂದ್ರಶೇಖರ, ‘ಸಮಸ್ಯೆ ಗಮನಕ್ಕೆ ಬಂದಿದ್ದು, ಎಷ್ಟು ಸರ್ಕಾರಿ ಜಮೀನು ಇದೆ ಎಂದು ಗುರುತಿಸಿ ಶೀಘ್ರ ನಿವೇಶನ ಸೌಲಭ್ಯ ಕಲ್ಪಿಸಲಾಗುವುದು' ಎಂದು ಭರವಸೆ ನೀಡಿದರು. ಮುಖಂಡರಾದ ರಾಮ ನರೋಟೆ, ರಾಜಕುಮಾರ ಚಿದ್ರಿ ಧರಣಿ ನಿರತರ ಮನವೊಲಿಸುವಲ್ಲಿ ಯಶಸ್ವಿಯಾದರು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.