ಔರಾದ್ (ಬೀದರ್): ತಾಲ್ಲೂಕಿಗೆ ಹೊಂದಿಕೊಂಡಿರುವ ತೆಲಂಗಾಣ ಗಡಿಯಲ್ಲಿ ಭಾನುವಾರ ಕಾರ್ಯಾಚರಣೆ ನಡೆಸಿದ ಪೊಲೀಸರು ಟೆಂಪೋದಲ್ಲಿ ಸಾಗಿಸುತ್ತಿದ್ದ ₹59.20 ಲಕ್ಷ ಮೌಲ್ಯದ 592 ಕೆ.ಜಿ. ಗಾಂಜಾ ಜಪ್ತಿ ಮಾಡಿಕೊಂಡಿದ್ದಾರೆ.
ಈ ಪ್ರಕರಣದಲ್ಲಿ ಭಾಗಿಯಾದ ತೆಲಂಗಾಣದ ಮುರಾಳ ಗ್ರಾಮದ ಓಂಕಾರ ಹಣಮಂತಪ್ಪ ಹಳೆಂಬುರೆ, ಕೊನಮೆಳಕುಂದಾ ಗ್ರಾಮದ ಅನೀಲಕುಮಾರ ದಶರಥ ಫುಲೆ, ಕಮಲನಗರದ ಹಾಜಿಪಾಷಾ ರಸೀದಮಿಯ್ಯಾ ಹಾಗೂ ಭಾಲ್ಕಿ ಜನತಾ ಕಾಲೊನಿಯ ಅಸ್ಲಂ ಗೌಸೋದ್ದಿನ್ ಎಂಬುವರನ್ನು ಬಂಧಿಸಲಾಗಿದೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಿ.ಎಲ್.ನಾಗೇಶ್ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.
‘ಗೂಡ್ಸ್ ಟೆಂಪೋದಲ್ಲಿ ಕೆಳಗೆ ಗಾಂಜಾ ಪ್ಯಾಕೇಟ್ ಹಾಕಿ ಮೇಲೆ ಮೆಣಸಿನಕಾಯಿ ಹಾಗೂ ಇತರೆ ಚೀಲ ತುಂಬಲಾಗಿತ್ತು. ಹೈದರಾಬಾದ್ನಿಂದ ಕಂದಗೂಳ ಮಾರ್ಗವಾಗಿ ಕಮಲನಗರ ಕಡೆಟೆಂಪೋ ಹೊರಟಿತ್ತು. ವಡಗಾಂವ್ ಸಮೀಪ ಪೊಲೀಸರು ಅಡ್ಡಗಟ್ಟಿ ಟೆಂಪೋ ಸಹಿತ ನಾಲ್ವರು ಆರೋಪಿಗಳನ್ನು ಬಂಧಿಸಿದ್ದಾರೆ’ ಎಂದರು.
ಭಾಲ್ಕಿ ಡಿವೈಎಸ್ಪಿ ದೇವರಾಜ, ಸಿಪಿಐ ರವೀಂದ್ರನಾಥ, ಪಿಎಸ್ಐ ಸಿದ್ಧಲಿಂಗ ನೇತೃತ್ವದ ಪೊಲೀಸರ ತಂಡ ಈ ಭಾರಿ ಮೊತ್ತದ ಗಾಂಜಾ ಜಪ್ತಿ ಮಾಡಿದೆ ಎಂದು ಜಿಲ್ಲಾಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಗೋಪಾಲ್ ಬ್ಯಾಕೋಡ್ ತಿಳಿಸಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.