ಬೀದರ್: ‘ಬಿದರಿ ಸಂಸ್ಥೆ, ಸಂಗೀತದೊಂದಿಗೆ ಯುವ ಜನರನ್ನು ದೇಶಿ ಕ್ರೀಡೆಯತ್ತ ಆಸಕ್ತಿ ಮೂಡಿಸುವ ಕೆಲಸಕ್ಕೆ ಮುಂದಾಗಿರುವುದು ಪ್ರಶಂಸನೀಯವಾಗಿದೆ’ ಎಂದು ಕೇಂದ್ರದ ರಸಗೊಬ್ಬರ ಖಾತೆ ರಾಜ್ಯ ಸಚಿವ ಭಗವಂತ ಖೂಬಾ ಹೇಳಿದರು.
ನಗರದ ಚನ್ನಬಸವ ಪಟ್ಟದ್ದೇವರ ರಂಗ ಮಂದಿರದಲ್ಲಿ ಭಾನುವಾರ ಬಿದರಿ ಸಂಗೀತ ಸಂಭ್ರಮ ಹಾಗೂ ರಾಜ್ಯ ಮಟ್ಟದ ಬಿದರಿ ದತ್ತಿ ಪ್ರಶಸ್ತಿ ಪ್ರದಾನ ಸಮಾರಂಭವನ್ನು ಉದ್ಘಾಟಿಸಿ ಅವರು ಮಾತನಾಡಿದರು.
‘ಅಪ್ಪಾರಾವ್ ದಂಪತಿ ಬೀದರ್ ಜಿಲ್ಲೆಯಲ್ಲಿ ವಿನೂತನ ಕಾರ್ಯಕ್ರಮ ಹಮ್ಮಿಕೊಳ್ಳುವ ಮೂಲಕ ಹೊಸ ಪ್ರತಿಭೆಗಳಿಗೆ ವೇದಿಕೆ ಕಲ್ಪಿಸಿದ್ದಾರೆ’ ಎಂದು ತಿಳಿಸಿದರು.
ರಾಜ್ಯ ಮಟ್ಟದ ಬಿದರಿ ದತ್ತಿ ಪ್ರಶಸ್ತಿ ಪುರಸ್ಕೃತ ಪಂಡಿತ ನರಸಿಂಹಲು ವಡವಾಟಿ ಮಾತನಾಡಿ, ‘ನಮ್ಮ ಜೀವನ ಹಸನಾಗಿರಬೇಕಾದರೆ ನಿಷ್ಠೆ, ಭಕ್ತಿ ಗುರು ಹಿರಿಯರ ಬಗ್ಗೆ ಗೌರವ ಇರಬೇಕು. ಗುರು ಹಿರಿಯರನ್ನು ಗೌರವಿಸಿದರೆ ಎಲ್ಲರಿಗೂ ಗೌರವ ಎಂಬುದು ತನ್ನಿಂದ ತಾನೆ ಲಭಿಸುತ್ತದೆ’ ಎಂದರು.
ಹಿರಿಯ ಪತ್ರಕರ್ತ ಶಿವಶರಣಪ್ಪ ವಾಲಿ ಮಾತನಾಡಿ, ‘ಜಿಲ್ಲೆ ಯಾವುದೇ ಕ್ಷೇತ್ರದಲ್ಲಿ ಹಿಂದೆ ಇಲ್ಲ. ಜಿಲ್ಲೆಯಲ್ಲಿ ಸತತ ಕಾರ್ಯಕ್ರಮಗಳು ನಡೆಯುತ್ತವೆ. ಕೆಲಸ ಮಾಡುವವರಿಗೆ ಇನ್ನಷ್ಟು ಪ್ರೇರಣೆ ನೀಡುವ ಅಗತ್ಯವಿದೆ’ ಎಂದು ತಿಳಿಸಿದರು.
‘ಕಲ್ಯಾಣ-ಕರ್ನಾಟಕ ಭಾಗಕ್ಕೆ ಮುಂದಿನ 13 ತಿಂಗಳ ನಂತರ ಸ್ವಾತಂತ್ರ್ಯ ದೊರೆತು 75 ವರ್ಷಗಳಾಗುತ್ತವೆ ಆಗ ಮತ್ತೆ ಎಲ್ಲರೂ ತಮ್ಮ ತಮ್ಮ ಮನೆಗಳ ಮೇಲೆ ರಾಷ್ಟ್ರ ಧ್ವಜ ಹಾರಿಸಬೇಕು. ಇದಕ್ಕಾಗಿ ಮುಖ್ಯಮಂತ್ರಿ ಹಾಗೂ ರಾಜ್ಯಪಾಲರಿಗೆ ಪತ್ರ ಬರೆಯುತ್ತೇನೆ. ಸರ್ಕಾರ ಆದೇಶ ಹೊರಡಿಸದಿದ್ದರೂ ಕಲ್ಯಾಣ ಕರ್ನಾಟಕದ ಜನರು ಸ್ವ ಇಚ್ಛೆಯಿಂದ ಈ ಕೆಲಸ ಮಾಡಬೇಕು’ ಎಂದು ಮನವಿ ಮಾಡಿದರು.
ಲಿಂಗಾಯತ ಮಹಾಮಠದ ಅಕ್ಕ ಅನ್ನಪೂರ್ಣತಾಯಿ ಮಾತನಾಡಿ, ‘ಜಿಲ್ಲೆಯಲ್ಲಿ ವಿವಿಧ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುವ ಮೂಲಕ ಬೀದರಿ ಬೀದರ್ ಸಾಂಸ್ಕೃತಿಕ ವೇದಿಕೆ ಬೆಂಗಳೂರು, ಮೈಸುರು ಜನರು ಬೀದರ್ನತ್ತ ತಿರುಗಿ ನೋಡಿದಂತೆ ಕೆಲಸಗಳು ಮಾಡುತ್ತಿದ್ದಾರೆ. ಮುಂಬರುವ ದಿನಗಳಲ್ಲಿ ಈ ಸಂಸ್ಥೆ ವಿದೇಶಕ್ಕೆ ಹೊಗಿ ನಮ್ಮ ದೇಶದ ಕೀರ್ತಿ ಹೆಚ್ಚಿಸಲಿ’ ಎಂದು ಹಾರೈಸಿದರು.
ಭಾಲ್ಕಿ ಹಿರೇಮಠ ಸಂಸ್ಥಾನದ ಗುರುಬಸವ ಪಟ್ಟದ್ದೇವರು, ಜಿ.ಕೆ. ಕನ್ಸ್ಟ್ರೆಕ್ಷನ್ ಮುಖ್ಯಸ್ಥ ಗುರುನಾಥ ಕೊಳ್ಳೂರ, ಶಾಹೀನ್ ಶಿಕ್ಷಣ ಸಂಸ್ಥೆಯ ಮುಖ್ಯಸ್ಥ ಅಬ್ದುಲ್ ಖದೀರ್, ಉದ್ಯಮಿ ಪ್ರಕಾಶ ಟೊಣ್ಣೆ, ಬೀದರಿ ಬೀದರ್ ಸಾಂಸ್ಕೃತಿಕ ವೇದಿಕೆಯ ಅಧ್ಯಕ್ಷೆ ರೇಖಾ ಸೌದಿ ಇದ್ದರು. ಅಪ್ಪಾರಾವ್ ಸೌದಿ ಸ್ವಾಗತಿಸಿದರು.
ಇದಕ್ಕೂ ಮುನ್ನ ಉಷಾ ಪ್ರಭಾಕರ ಹಾಗೂ ರಾಣಿ ಸತ್ಯಮೂರ್ತಿ ಅವರ ತಂಡದವರು ದೇಶಭಕ್ತಿ ಗೀತೆ ನೃತ್ಯ ಮಾಡಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.