ADVERTISEMENT

ರಸ್ತೆ ಅಪಘಾತ; ಐವರ ಸಾವು

​ಪ್ರಜಾವಾಣಿ ವಾರ್ತೆ
Published 16 ಆಗಸ್ಟ್ 2022, 4:27 IST
Last Updated 16 ಆಗಸ್ಟ್ 2022, 4:27 IST
ಬೀದರ್‌ ತಾಲ್ಲೂಕಿನ ಭಂಗೂರ ಚೆಕ್‌ಪೋಸ್ಟ್‌ ಬಳಿ ಅಪಘಾತಕ್ಕೀಡಾದ ಕಾರು ನಜ್ಜುಗುಜ್ಜಾಗಿರುವುದು
ಬೀದರ್‌ ತಾಲ್ಲೂಕಿನ ಭಂಗೂರ ಚೆಕ್‌ಪೋಸ್ಟ್‌ ಬಳಿ ಅಪಘಾತಕ್ಕೀಡಾದ ಕಾರು ನಜ್ಜುಗುಜ್ಜಾಗಿರುವುದು   

ಬೀದರ್‌: ತಾಲ್ಲೂಕಿನ ಭಂಗೂರ ಚೆಕ್‌ಪೋಸ್ಟ್‌ ಬಳಿ ಸೋಮವಾರ ಎರ್ಟಿಗಾ ಕಾರು ಮತ್ತು ಕಂಟೇನರ್ ನಡುವೆ ಡಿಕ್ಕಿ ಸಂಭವಿಸಿದ ಪರಿಣಾಮ ಕಾರಿನಲ್ಲಿದ್ದ ಐವರು ಮೃತಪಟ್ಟು, ಐವರು ಗಾಯಗೊಂಡಿದ್ದಾರೆ.

ಹೈದರಾಬಾದ್‌ನಲ್ಲಿ ಹೆಡ್‌ ಕಾನ್‌ಸ್ಟೆಬಲ್‌ ಆಗಿರುವ ಬೇಗಂ ಪೇಟದ ನಿವಾಸಿ ಗಿರಿಧರ (45), ಅವರ ಪತ್ನಿ ಅನಿತಾ (36), ಮಯಾಂಕ (2), ಪತ್ನಿಯ ತಂಗಿ ಪುತ್ರಿ ಪ್ರಿಯಾಂಕಾ (15) ಮತ್ತು ಕಾರು ಚಾಲಕ, ಗಿರಿಧರನ ಸ್ನೇಹಿತ ದಿನೇಶ (35) ಮೃತರು ಎಂದು ಮನ್ನಳ್ಳಿ ಠಾಣೆಯ ಪೊಲೀಸರು ತಿಳಿಸಿದ್ದಾರೆ.

ಗಿರಿಧರನ ಪುತ್ರ ಹರ್ಷವರ್ಧನ್‌ (12) ಅದೃಷ್ಟಾವಶಾತ ಯಾವುದೇ ಗಾಯಗಳಿಲ್ಲದೆ ಪಾರಾಗಿದ್ದಾರೆ. ಸಂಬಂಧಿಕರಾದ ರಜಿತಾ, ಸರಿತಾ, ಶಾಲಿನಿ ಮತ್ತು ಸರಳಾ ಅವರಿಗೆ ಗಂಭೀರ ಗಾಯಗಳಾಗಿವೆ. ಅವರಿಗೆ ಜಿಲ್ಲಾ ಆಸ್ಪತ್ರೆಯಲ್ಲಿ ಪ್ರಾಥಮಿಕ ಚಿಕಿತ್ಸೆ ನೀಡಿ, ಹೆಚ್ಚಿನ ಚಿಕಿತ್ಸೆಗೆ ಹೈದರಾಬಾದ್‌ಗೆ ಕಳಿಸಲಾಗಿದೆ. ಎಲ್ಲರೂ ಕಾರಿನಲ್ಲಿ ಹೈದರಾಬಾದ್‌ನಿಂದ ಗಾಣಗಾಪುರಕ್ಕೆ ಹೊರಟಿದ್ದ ವೇಳೆ ದುರ್ಘಟನೆ ನಡೆದಿದೆ ಎಂದು ಅವರು ತಿಳಿಸಿದ್ದಾರೆ.

ADVERTISEMENT

ಹೆಚ್ಚುವರಿ ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಮಹೇಶ ಮೇಘಣ್ಣವರ್, ಡಿವೈಎಸ್‌ಪಿ ಸತೀಶ, ಸಿಪಿಐ ಶ್ರೀಕಾಂತ ಅಲ್ಲಾಪುರ, ಪಿಎಸ್‌ಐ ಕಲ್ಲಪ್ಪ ಮುಗಟೆ ಅವರು ಸ್ಥಳಕ್ಕೆ ಭೇಟಿ ನೀಡಿ, ಪರಿಶೀಲಿಸಿದರು.

ಅಪಘಾತದಿಂದ ಕೆಲ ಹೊತ್ತು ಹೆದ್ದಾರಿಯಲ್ಲಿ ವಾಹನ ಸಂಚಾರಕ್ಕೆ ವ್ಯತ್ಯಯ ಉಂಟಾಗಿತ್ತು. ಕ್ರೇನ್‌ ನೆರವಿನಿಂದ ನಜ್ಜುಗುಜ್ಜಾದ ಕಾರನ್ನು ಎತ್ತಲಾಯಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.