ಬೀದರ್: ಕಳೆ ನಾಶಕಗಳ ಬಳಕೆಯನ್ನು ಮಿತಿಗೊಳಿಸಿ ಸಮಗ್ರ ಕಳೆ ನಿರ್ವಹಣೆಯ ಬೇಸಾಯ ಪದ್ಧತಿ ಅಳವಡಿಸಿಕೊಳ್ಳಬೇಕು ಎಂದು ಕೃಷಿ ಇಲಾಖೆಯ ಜಂಟಿ ನಿರ್ದೇಶಕಿ ತಾರಾಮಣಿ ಸಲಹೆ ನೀಡಿದ್ದಾರೆ.
ಜಮೀನಿನಲ್ಲಿ ಸತತ ಒಂದೇ ಬೆಳೆಯನ್ನು ಬೆಳೆಯುವುದನ್ನು ನಿಲ್ಲಿಸಬೇಕು. ಬೇರೆ ಬೆಳೆ ಬೆಳೆದು ಪರಿವರ್ತನೆ ಮಾಡಬೇಕು. ಬಿತ್ತನೆ ಬೀಜ, ಕೊಟ್ಟಿಗೆ ಗೊಬ್ಬರ ಮತ್ತು ಭೂಮಿಗೆ ಬೆರೆಸುವ ಯಾವುದೇ ವಸ್ತುಗಳಲ್ಲಿ ಕಸಗಳ ಬೀಜಗಳು ಇಲ್ಲದಂತೆ ನೋಡಿಕೊಳ್ಳಬೇಕು ಎಂದು ಹೇಳಿದ್ದಾರೆ.
ಸಸಿಗಳ ಸಂಖ್ಯೆ ಹೆಚ್ಚು ಇರುವಂತೆ ನೋಡಿಕೊಳ್ಳುವುದು, ಸಸಿಗಳ ಸಂಖ್ಯೆ ಕಡಿಮೆ ಆದಲ್ಲಿ ಕಸ ಬೆಳೆಯುವ ಪ್ರಮಾಣವೂ ಹೆಚ್ಚಾಗುತ್ತದೆ, ಹೊಲಗಳಲ್ಲಿ ಕಸವನ್ನು ಹೂವು ಬಿಡುವುದಕ್ಕಿಂತ ಮುಂಚಿತವಾಗಿ ನಿಯಂತ್ರಿಸಬೇಕು. ತೆಗೆದ ಕಸವನ್ನು ಹೊಲಗಳಲ್ಲಿ ಲಭ್ಯವಿರುವ ಖಾಲಿ ಇರುವ, ನೀರು ನಿಲ್ಲದ ಸ್ಥಳಗಳಲ್ಲಿ ಒಂದು ಮೀಟರ್ನಷ್ಟು ಆಳದ ಗುಂಡಿ ಅಗೆದು ಎರೆಹುಳುಗಳ ಬಳಕೆ ಮಾಡಿಕೊಂಡು ಕಸ ಬೇಗ ಕೊಳೆಯುವಂತೆ ಮಾಡಬೇಕು ತಿಳಿಸಿದ್ದಾರೆ.
ಏಕ ಬೆಳೆ ಪದ್ಧತಿಗಿಂತ ಮಿಶ್ರಬೆಳೆ ಮತ್ತು ಬಹುಬೆಳೆ ಪದ್ಧತಿಯಿಂದ ಬೇಸಾಯ ಮಾಡಿದರೆ ಕಸ ಕಡಿಮೆ ಇರುತ್ತದೆ.
ಕಸದ ಸಮಸ್ಯೆಯನ್ನು ಕಡಿಮೆ ಮಾಡಲು ಅಲಸಂದಿ, ಜೋಳ, ಗೋಧಿ, ಸೂರ್ಯಕಾಂತಿ ಮತ್ತು ಇತರೆ ಬೆಳೆಗಳನ್ನು ಬೆಳೆಯಬಹುದಾಗಿದೆ,
ಸಮಗ್ರ ಕಳೆ ನಿರ್ವಹಣೆ ಪದ್ಧತಿಯಡಿ ಇನ್ನೂ ಹಲವಾರು ಬೇಸಾಯ ಕ್ರಮಗಳಿದ್ದು ಅವುಗಳ ಕುರಿತಾದ ಹೆಚ್ಚಿನ ಮಾಹಿತಿಗೆ ಹತ್ತಿರದ ರೈತಸಂಪರ್ಕ ಕೇಂದ್ರ, ಸಹಾಯಕ ಕೃಷಿ ನಿರ್ದೇಶಕರ ಕಚೇರಿ, ಕೃಷಿ ವಿಜ್ಞಾನ ಕೇಂದ್ರ, ಕೃಷಿ ಸಂಶೋಧನ ಕೇಂದ್ರ, ತೋಟಗಾರಿಕೆ ಮಹಾವಿದ್ಯಾಲಯ ಸಂಪರ್ಕಿಸಬಹುದಾಗಿದೆ ಎಂದು ತಾರಾಮಣಿ ತಿಳಿಸಿದ್ದಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.